ನನ್ನ ಮಾತು

 
Thursday, May 24, 2007
ಮುಕ್ತಾಯ

ಈ ಬ್ಲಾಗಿನಲ್ಲಿ ಇನ್ನು ಮುಂದೆ ಯಾವುದೇ ಹೊಸ ಬರಹಗಳನ್ನು ಪ್ರಕಟಿಸುವುದಿಲ್ಲ.

 ಟಿಪ್ಪಣಿಗಳು
Tuesday, May 01, 2007
ಹೀಗೊಂದು ಪ್ರೇಮಕತೆ

ಎಕ್ಸಾಮ್ ಡ್ಯೂಟಿಗೆ ಯಾರನ್ನು ಎಲ್ಲಿಗೆ ಕಳಿಸುವುದೆಂದು ಯೋಚಿಸುತ್ತಿದ್ದೆ. ಅವತ್ತು ಸಂಜೆಯ ಹೊತ್ತಿಗೆ ಪಟ್ಟಿ ಸಿದ್ದವಾಗಬೇಕಿದ್ದರಿಂದ ತಲೆಕೆಡಿಸಿಕೊಂಡು ಕುಳಿತ್ತಿದ್ದೆ. ಬೆಳಗ್ಗಿನಿಂದ ಎಲ್ಲರೂ ಬಂದು ಅವರವರ ಕಷ್ಟ ಹೇಳಿಕೊಂಡು ತಮಗೆ ಆದಷ್ಟು ಕಮ್ಮಿ ಡ್ಯೂಟಿ ಹಾಕುವಂತೆ ಕೇಳಿಕೊಂಡಿದ್ದರು. ತಾವು ಹೋಗಲೇಬೇಕಾದ ಮದುವೆ, ಮುಂಜಿಗಳ ದಿನ ತಮಗೆ ಡ್ಯೂಟಿ ಹಚ್ಚಲೇಬಾರದೆಂದು ಮತ್ತೆ ಕೆಲವರ ಗೋಳು. ಈ ಮಧ್ಯೆ ಸೀನಿಯರ್ ಮೇಸ್ಟ್ರುಗಳಿಗೆ ಜಾಸ್ತಿ ಡ್ಯೂಟಿ ಬೇಡವೆಂದು ಪ್ರಿನ್ಸಿಪಾಲರಿಂದಲೇ ಆದೇಶವಾಗಿತ್ತು. ಹೀಗಾದರೆ ಮುಕ್ಕಾಲು ಡ್ಯೂಟಿಗಳನ್ನು ನಾನೇ ಮಾಡವ ಪರಿಸ್ಥಿತಿ ಬರಬಹುದೆಂದು ನನಗೆ ಭಯವಾಯ್ತು. ಆಗ ನನಗೆ ನೆನೆಪಾದವನೇ ಶಿವಕಿರಣ.


ಶಿವ ನಮ್ಮ ಕಾಲೇಜು ಸೇರಿ ಮೂರು ತಿಂಗಳಾಗಿದ್ದರೂ ಅಷ್ಟು ಕಡಿಮೆ ಸಮಯದಲ್ಲೇ ಹುಡುಗರಿಗೆ ಇಷ್ಟವಾಗಿಬಿಟ್ಟಿದ್ದ. ಈ ಕಾಲದಲ್ಲಿ ಮೇಸ್ಟ್ರು ಕೆಲಸಕ್ಕೆ ಬರುವವರೇ ಕಮ್ಮಿ. ಕಂಪೆನಿಗಳಲ್ಲಿ ಕೈತುಂಬ ಸಂಬಳ ಸಿಗುವಾಗ ಹುಡುಗರ ಮುಂದೆ ಬಾಯಿಬಡಿಯುವ ಕೆಲಸ ಯಾರಿಗೆ ತಾನೇ ಬೇಕು. ನಮ್ಮ ಕಾಲೇಜಿನಲ್ಲೂ ಹೇಳದೇ ಕೇಳದೇ ಕಂಪೆನಿಗಳಿಗೆ ಓಡಿಹೋಗುವವರ ಸಂಖ್ಯೆ ಜಾಸ್ತಿ ಇತ್ತು. ವರ್ಷದ ಮಧ್ಯದಲ್ಲಿ ಅರ್ಧ ಪಾಠ ಮಾಡಿ ಕೆಲಸ ಬಿಡುವವರ ಜಾಗಕ್ಕೆ ಹೊಸಬರನ್ನು ತರುವುದು ಬಹಳ ಕಷ್ಟದ ಕೆಲಸ. ಹೀಗೇ ಈ ವರ್ಷ ಬಹಳ ಮುಖ್ಯ ವಿಷಯ ಕಲಿಸುತ್ತಿದ್ದ ಮೇಡಂ ಇದ್ದಕ್ಕಿದ್ದಂತೆ ಹೊರಟುನಿಂತಾಗ ನಮಗೆ ಸಿಕ್ಕಿದ್ದೇ ಈ ಶಿವ.


ನಮ್ಮ ಪರಿಚಯದವರೊಬ್ಬರು ಶಿವನನ್ನು ಕಾಲೇಜಿಗೆ ಕರೆದುಕೊಂಡು ಬಂದರು. ಪೀಚುಪೀಚಾಗಿದ್ದ ಹುಡುಗನನ್ನು ನೋಡಿ ಇವ ಹೇಗಪ್ಪಾ ಹುಡುಗರ ಮುಂದೆ ನಿಂತಾನು ಅಂತ ನಾನು ಯೋಚಿಸುತ್ತಿದ್ದೆ. ಆದರೆ ಪ್ರಿನ್ಸಿಪಾಲರು ಒಂದು ಕ್ಲಾಸ್ ತೆಕ್ಕೊಳಲಿ, ನಾವೂ ನೋಡೋಣ ಅಂದದ್ದಕ್ಕೆ ನಾನೂ ಒಪ್ಪಿಕೊಂಡೆ. ಹೇಗಿದ್ದರೂ ನಮಗೂ ಒಬ್ಬ ಮೇಸ್ಟ್ರ ಅಗತ್ಯ ಇತ್ತು. ನೋಡೋಣ, ಹುಡುಗ ಏನು ಮಾಡಬಹುದು ಅಂತ ಕ್ಲಾಸಿಗೆ ಕರೆದುಕೊಂಡು ಹೋದೆವು. ಹುಡುಗನಂತಿದ್ದ ಶಿವನನ್ನು ನೋಡಿ ಹುಡುಗರು ಗುಸುಗುಸು ಮಾಡಿದರೂ ನಾವೆಲ್ಲಾ ಇದ್ದಿದ್ದರಿಂದ ಬೇಗ ತಣ್ಣಗಾದರು. ಹುಡುಗ ಕೈಯಲ್ಲಿ ಚಾಕ್ ಹಿಡಿದು ಸ್ಟೇಜಿಗೆ ಹತ್ತಿದ.


ಮುಂದಿನ ನಲವತ್ತು ನಿಮಿಷ ಆ ಕೋಣೆಯಲ್ಲಿ ಕೇಳಿಸುತ್ತಿದ್ದದ್ದು ಬರೇ ಆ ಹುಡುಗನ ಕಂಚಿನ ಧ್ವನಿ. ಆ ಚಿಕ್ಕ, ಸಣಕಲು ದೇಹದಲ್ಲಿ ಈ ತರಹದ ಧ್ವನಿ ಹೇಗೆ ಕೂತಿತ್ತೋ ನನಗಂತೂ ಗೊತ್ತಾಗಲಿಲ್ಲ. ಆ ಧ್ವನಿಗೆ ತಕ್ಕಂತಹ ಭಾಷಾಶುದ್ಧಿ, ಹೇಳುತ್ತಿದ್ದ ವಿಷಯದ ಬಗೆಗಿನ ಖಚಿತತೆ ಎಲ್ಲವೂ ಹುಡುಗರನ್ನು ಮುಟ್ಟಿತ್ತು. ಸಾಮಾನ್ಯವಾಗಿ ಗಲಾಟೆ ಮಾಡುವ ಹುಡುಗರು ಪಾಠ ವನ್ನು ಕೇಳುತ್ತಿರುವುದನ್ನು ಪ್ರಿನ್ಸಿಪಾಲರು ನನಗೆ ತೋರಿಸಿದರು. ನನಗೂ ಶಿವನ ಮೇಲೆ ನಂಬಿಕೆ ಹುಟ್ಟಿತು. ಪರವಾಗಿಲ್ಲ ಹುಡುಗ, ನಮ್ಮ ಹುಡುಗರಿಗೆ ಒಳ್ಳೇ ಪಾಠ ಮಾಡಿಯಾನು ಅಂತ ನನಗೆ ಅನ್ನಿಸಿದ್ದನ್ನು ಪ್ರಿನ್ಸಿಪಾಲರಿಗೆ ಹೇಳಿದೆ. ಅವರೂ ಒಪ್ಪಿದರು.


ಹೀಗೆ ನಮ್ಮಲ್ಲಿ ಸೇರಿಕೊಂಡ ಶಿವಕಿರಣ ಬರುಬರುತ್ತಾ ನಮ್ಮವನೇ ಆಗಿಹೋದ. ಅವನ ಬಹುಮುಖ ಪ್ರತಿಭೆ ಮೆಲ್ಲಮೆಲ್ಲನೆ ಅನಾವರಣಗೊಳ್ಳುತ್ತಾ ಹೋಯಿತು. ಹುಡುಗರನ್ನು ಕಟ್ಟಿಕೊಂಡು ಅವರಿಗೆ ಸಂಜೆ ನಾಟಕ ಕಲಿಸುತ್ತಿದ್ದ. ಪಾಠವನ್ನು ಮಾಡುವಾಗ ಹುಡುಗರಿಗೆ ಬೋರ್ ಹೊಡೆಯದಂತೆ ಮಾತಾಡುವ ಕಲೆ ಕರಗತ ಮಾಡಿಕೊಂಡಿದ್ದ ಅವನು ಹುಡುಗರಿಗೂ ಭಾಷಣ ಕಲೆಯನ್ನು ಕಲಿಸುತ್ತಿದ್ದ. ಹೀಗೆ ನಮ್ಮ ಕಾಲೇಜಿಗೇ ಒಂದು ಹೊಸ ಚೈತನ್ಯವನ್ನು ತಂದು ಹುಡುಗರ ಪ್ರೀತಿ ಮಾತ್ರವಲ್ಲ ನಮ್ಮೆಲ್ಲರ ವಿಶ್ವಾಸವನ್ನೂ ಗಳಿಸಿದ್ದ.


ಕಾಲೇಜಿನಲ್ಲಿ ವಹಿಸಿದ ಕೆಲಸವನ್ನು ಬೇಸರವಿಲ್ಲದೇ ಮಾಡುತ್ತಿದ್ದ ಅವನನ್ನು ಕರೆದು ಈ ಎಕ್ಸಾಮ್ ಡ್ಯೂಟಿಯ ತಲೆನೋವಿನ ಬಗ್ಗೆ ಹೇಳಿದೆ. ಅದಕ್ಕೆ ಅವನು ಯಥಾಪ್ರಕಾಯ ಎಷ್ಟು ಡ್ಯೂಟಿಯಾದರೂ ತಾನು ಮಾಡ್ತೇನೆಂತ ಹೇಳಿದ. ಆದರೆ ಅವನದ್ದೊಂದು ಕಂಡೀಶನ್ ಇತ್ತು. ಏನಪ್ಪಾ ಅಂದರೆ ಅವನನ್ನು ಸೆಕೆಂಡ್ ಇಯರ್ ನ ಡ್ಯೂಟಿಗೆ ಮಾತ್ರ ಹಾಕಬೇಕಂತೆ. "ಸಾರ್ ಸೆಕೆಂಡ್ ಇಯರ್ ನ ಬಿ೨ ಬ್ಯಾಚಿನ ಎಲ್ಲಾ ಡ್ಯೂಟಿಗೆ ನನ್ನನ್ನೇ ಹಾಕಿಬಿಡಿ ಸಾರ್. ದಿನಾ ನಾನೇ ಮಾಡ್ತೇನೆ. ನೋ ಪ್ರೋಬ್ಲೆಂ" ಅಂದು ಹೋದ ಮೇಲೆ ನನಗೆ ಎಲ್ಲೋ ಅನುಮಾನದ ವಾಸನೆ ಹತ್ತತೊಡಗಿತು. ಯಾಕಪ್ಪಾ ಬಿ೨ ಬ್ಯಾಚ್ ಮೇಲೆ ಅಷ್ಟೊಂದು ಆಸಕ್ತಿ ಇವನಿಗೆ ಅಂತ ಅಟೆಂಡರ್ ನನ್ನು ಕರೆಯಿಸಿ ಆ ಕ್ಲಾಸಿನ ಅಟೆಂಡೆನ್ಸ್ ತರಿಸಿದೆ.


ಕಳೆದ ವಾರ ನಮ್ಮ ಸ್ಟಾಫ್ ರೂಮಿನಲ್ಲಿ ಯಾರೋ ನನಗೆ ಹೇಳಿದ್ದರು - ಈ ಶಿವ ಮತ್ತು ಸೆಕೆಂಡ್ ಇಯರ್ ನ ಸುಮ ಒಟ್ಟಿಗೇ ಓಡಾಡ್ತಾ ಇರ್ತಾರೆ ಅಂತ. ನಾನು ಆ ವಿಷಯವನ್ನು ಅಲ್ಲಿಗೇ ಬಿಟ್ಟಿದ್ದೆ. ಈಗ ರಿಜಿಸ್ಟರ್ ನಲ್ಲಿ ಬಿ೨ ಬ್ಯಾಚಿನಲ್ಲಿ ಸುಮಳ ಹೆಸರು ನೋಡಿ ಯಾಕೋ ಸಂಶಯ ಬರತೊಡಗಿತು. ಕರೆದು ಕೇಳೋಣ ಅಂತ ಅನ್ನಿಸಿದರೂ ಯಾಕೋ ಬೇಡ ಅಂದುಕೊಂಡು ಎಕ್ಸಾಮ್ ಡ್ಯೂಟಿ ಬರೆಯಲು ಕೂತುಕೊಂಡೆ. ಬೇಕೂಂತಲೇ ಶಿವನನ್ನು ಬಿ೨ ಬ್ಯಾಚಿಗೆ ಹಾಕಲೇ ಇಲ್ಲ. ಇರಲಿ ನೋಡೋಣ, ಬಂದು ಕೇಳಿದರೆ ಮಾತಾಡೋಣ ಅಂತ ಸುಮ್ಮನಾದೆ.


ಆದರೆ ಶಿವ ನನ್ನ ಬಳಿ ಬರಲೇ ಇಲ್ಲ. ಅವನು ಬೇಕೂಂತ ನನ್ನಿಂದ ತಪ್ಪಿಸಿಕೊಳ್ಳುತ್ತಿದ್ದಾನೆ ಅಂತ ನನಗೆ ಸಂಶಯ. ಎಕ್ಸಾಮ್ ಮುಗಿದ ಮೇಲೆ, ರಜೆಗೆ ಹೋಗುವುದಕ್ಕೆ ಮೊದಲು, ಬರುವ ವರ್ಷಕ್ಕೆ ಯಾರು ಯಾವ ಸಬ್ಜೆಕ್ಟ್ ಮಾಡಬೇಕೆಂದು ತೀರ್ಮಾನಿಸುವುದು ನಮ್ಮ ಕಾಲೇಜಿನ ಕ್ರಮ. ಅದರಂತೆ ಪ್ರಿನ್ಸಿಪಾಲರು ಮೀಟಿಂಗ್ ಕರೆದರು. ಶಿವ ನನ್ನ ಮುಂದೆಯೇ ಕೂತಿದ್ದ. ನಮ್ಮಲ್ಲಿ ಜೂನಿಯರ್ ಗಳು ತಮಗೆ ಬೇಕಾದ ಸಬ್ಜೆಕ್ಟ್ ಗಳನ್ನು ಮೊದಲು ಆರಿಸಿಕೊಳ್ಳುತ್ತಾರೆ. ನಂತರದ ಸರದಿ ಸೀನಿಯರ್ ಗಳದು. ಈಗ ಶಿವನೇ ಜೂನಿಯರ್ ಮೋಸ್ಟ್ ಆದ್ದರಿಂದ ಪ್ರಿನ್ಸಿಪಾಲರು ಮೊದಲು ಅವನ ಛಾಯ್ಸ್ ಅನ್ನು ಕೇಳಿದರು.


ನನ್ನ ಆಶ್ಚರ್ಯಕ್ಕೆ ಶಿವ ಥರ್ಡ್ ಇಯರ್ ನ ಸಬ್ಜೆಕ್ಟನ್ನು ಆಯ್ಕೆಮಾಡಿಕೊಂಡ. "ಸಾರ್ ನಾನು ಬಿ ಸೆಕ್ಷನ್ ಗೆ ಹೋಗ್ತೇನೆ" ಅಂತ ಶಿವ ಹೇಳಿದಾಗ ಮೀಟಿಂಗ್ ನಲ್ಲಿದ್ದವರೆಲ್ಲಾ ತಮ್ಮತಮ್ಮಲ್ಲೇ ಮಾತಾಡಲು ಶುರುಮಾಡಿದರು. ನನ್ನ ಪಕ್ಕ ಕುಳಿತ್ತಿದ್ದವರು "ನಾನು ಹೇಳಿಲ್ವಾ ನಿಮ್ಗೆ" ಅನ್ನೋ ರೀತಿಯಲ್ಲಿ ನನ್ನನ್ನು ನೋಡಿದರು. "ಬೇರೆ ಯಾರಾದರೂ ಈ ಸಬ್ಜೆಕ್ಟ್ ಮಾಡಲು ತಯಾರಿದ್ದೀರಾ" ಪ್ರಿನ್ಸಿಪಾಲರು ಕೇಳಿದಾಗ ಸುಮ್ಮನೇ ಕೈ ಎತ್ತಿಬಿಡೋಣ ಅನ್ನಿಸಿತು. ಯಾಕೋ ನನ್ನ ಕೈ ನನ್ನ ಮಾತನ್ನೇ ಕೇಳಲಿಲ್ಲ. ಆ ಸಬ್ಜೆಕ್ಟ್ ಶಿವನ ಪಾಲಾಯಿತು. ಆಗ ಶಿವನ ಮುಖದಲ್ಲಿ ಸಂತೃಪ್ತಿಯ ಭಾವನೆ ಇತ್ತೂಂತ ಬಹುಶಃ ನನಗೆ ಮಾತ್ರ ಅನ್ನಿಸಿತೋ ಅಥವಾ ಅದು ನಿಜವೋ ಹೇಳೋದು ಕಷ್ಟ.


ರಜೆಯಲ್ಲೂ ಆಗಾಗ ಕಾಲೇಜಿಗೆ ಹೋಗಿಬರುತ್ತಿದ್ದ ನನಗೆ ಶಿವನ ಕತೆಗಳು ಕಿವಿಗೆ ಬೀಳುತ್ತಿತ್ತು. ಸುಮಳ ಊರಿನ ತನಕ ಇವ ಬಸ್ಸಿನಲ್ಲಿ ಅವಳ ಜೊತೆ ಹೋಗಿದ್ದನಂತೆ, ಎಕ್ಸಾಮ್ ನ ಮಧ್ಯೆ ಸಿಕ್ಕಿದ್ದ ಬ್ರೇಕಿನಲ್ಲೂ ಇವರಿಬ್ಬರೂ ಒಟ್ಟಿಗೇ ಸುತ್ತುತ್ತಿದ್ದರಂತೆ - ಕ್ಯಾಂಪಸ್ ತುಂಬಾ ಇವರದೇ ಕತೆಗಳು. ಅರೇ ಇದೇನು ವಿಷ್ಯ ಈ ಮಟ್ಟ ತಲುಪಿದೆಯಾ ಅಂತ ಯೋಚಿಸುತ್ತಿರುವಾಗ ಒಂದು ದಿನ ಪ್ರಿನ್ಸಿಪಾಲರೇ ಕರೆದು ನನಗೆ ಹೇಳಿದರು "ನೀವು ಒಮ್ಮೆ ಶಿವಕಿರಣನ ಜೊತೆ ಮಾತಾಡಿ. ನಾನು ಈ ವಿಷ್ಯವನ್ನು ಕೇಳೋದು ಸರಿ ಇರಲ್ಲ. ಒಳ್ಳೇ ಹುಡುಗ, ಈ ವಿಚಾರದಲ್ಲಿ ಹೆಸರು ಹಾಳಾಗೋದು ಬೇಡ"


ಕಾಲೇಜು ತೆರೆಯುವ ಒಂದು ವಾರ ಮೊದಲೇ ಶಿವ ಬಂದದ್ದು ನನಗೆ ಒಂದು ಲೆಕ್ಕದಲ್ಲಿ ಒಳ್ಳೆಯದೇ ಆಯಿತು. ನೇರವಾಗಿ ವಿಷಯ ಪ್ರಸ್ತಾಪಿಸುವುದು ಬೇಡವೆಂದು ಒಂದು ದಿನ ಅವನನ್ನು ನನ್ನ ಛೇಂಬರಿಗೆ ಕರೆಸಿಕೊಂಡೆ. "ನಿನ್ನ ಜಾತಕ ಕೊಡೋ ಶಿವ. ನಮ್ಮ ಪೈಕೆ ಒಳ್ಳೊಳ್ಳೇ ಹುಡುಗಿಯರಿದ್ದಾರೆ. ನಿನಗೊಂದು ಮದುವೆ ಮಾಡಿಬಿಡುವ ಬೇಗ" ಅಂದೆ. ಅದಕ್ಕವನ ಮುಖ ಯಾಕೋ ಸಣ್ಣದಾಯಿತು. "ಬಿಡಿ ಮೇಸ್ಟ್ರೇ, ನನಗ್ಯಾಕೆ ಇಷ್ಟು ಬೇಗ ಮದುವೆ ಎಲ್ಲಾ, ಆಮೇಲೆ ನೋಡೋಣ" ಅಂದ. ನಾನೂ ಸುಮ್ಮನಿರದೆ "ಆಯ್ತಪ್ಪಾ ಮದುವೆ ನಿಧಾನವಾಗಿ ಆಗು, ಆದರೆ ಒಂದೆರೆಡು ಹುಡುಗಿಯಾದರೂ ನೋಡು. ಮದುವೆ ಅಂದ್ರೆ ಸುಮ್ಮನೆಯಾ? ಈಗ ಹೊರಟರೆ ಮುಂದಿನ ವರ್ಷ ನಿನಗೆ ಸರಿಹೊಂದುವ ಹುಡುಗಿ ಸಿಗಬಹುದಪ್ಪಾ. ಹೇಳು ಏನು ನಿನ್ನ ಡಿಮಾಂಡು? ಯಾವ ತರಹದ ಹುಡುಗಿ ಬೇಕು ನಿಂಗೆ?" ಅಂದಾಗ ಅವನು ತಡವರಿಸುತ್ತಾ "ಅಯ್ಯೋ ನೀವು ನೋಡಿದ್ರೆ ನಾಳೇನೇ ನನಗೆ ಮದುವೆ ಮಾಡಿಸುವ ಹಾಗಿದ್ದೀರಿ. ನಾನು ಇನ್ನೆರಡು ವರ್ಷ ಮದುವೆ ಆಗೊಲ್ಲ" ಅಂದ.


"ಅದೇನು ಎರಡು ವರ್ಷಾಂತ ಕರೆಕ್ಟಾಗಿ ಹೇಳ್ತಾ ಇದ್ದೀಯ. ಯಾರಾದರೂ ಇನ್ನು ಎರಡು ವರ್ಷ ಆದ ಮೇಲೆ ನಿನ್ನನ್ನ ಮದುವೆ ಆಗ್ತೀನೀಂತ ಮಾತು ಕೊಟ್ಟಿದ್ದಾರೆನೋ" ಅಂತ ಕೇಳಿದ ತಕ್ಷಣ ಅವನು "ಹಾಗೇನಿಲ್ಲ ಮೇಸ್ಟ್ರೇ, ಸುಮ್ಮನೇ ಮಾತಿಗೆ ಅಂದೆ" ಅಂತ ಹೇಳಿದ ಮೇಲೆ ನಾನು ಅವನಿಗೆ ಇನ್ನು ವಿಷಯವನ್ನು ಸೂಕ್ಷ್ಮವಾಗಿ ಹೇಳೋಣವೆಂದುಕೊಂಡು "ನೋಡು ಶಿವ, ನಮ್ಮ ಉದ್ಯೋಗದಲ್ಲಿ ನಮ್ಮ ನಡವಳಿಕೆಗೆ ಬಹಳ ಮಹತ್ವ ಇದೆ. ಮೇಸ್ಟ್ರ ಕೆಲಸ ಅಂದರೆ ಬೆಳಗ್ಗೆ ಒಂಬತ್ತರಿಂದ ಸಂಜೆ ಐದರ ತನಕದ ಕೆಲಸವಲ್ಲ. ಇಪ್ಪತ್ತನಾಕು ಗಂಟೆಯೂ ನಾವು ಮಾಡುವ ಕೆಲಸ ಹುಡುಗರಿಗೆ ಪಾಠವಾಗಿರಬೇಕು. ಇಲ್ಲಿ ಒಂದು ಸಲ ಹುಡುಗರ ಮುಂದೆ ಸಣ್ಣವರಾದರೆ ಮತ್ತೆ ಅವರ ಮುಂದೆ ನಿಂತು ನಾವು ಪಾಠ ಮಾಡಲು ಆಗೋದಿಲ್ಲ. ಬಾಯಿ, ಕೈ - ಎರಡೂ ಶುದ್ಧ ಇದ್ದರೇನೇ ಮೇಸ್ಟ್ರಿಗೆ ಮರ್ಯಾದೆ. ಹುಡುಗರು ನಮ್ಮ ಕಾಲಿಗೆ ಬಿದ್ದು ನಮಸ್ಕಾರ ಮಾಡ್ತಾರೆ. ಅವರ ಆ ಗೌರವ ಉಳಿಸಿಕೊಳ್ಳೋದು ನಮ್ಮ ಮೊದಲ ಕೆಲಸ. ಉಳಿದದ್ದೆಲ್ಲಾ ಆಮೇಲೆ"


ಶಿವನಿಗೆ ನಾನು ಹೇಳಿದ್ದು ಅರ್ಥ ಆಯ್ತೋ, ಬಿಡ್ತೋ ಅಂತ ನನಗೆ ಅವನ ಮುಖದಿಂದ ಆಗ ನನಗೆ ಗೊತ್ತಾಗಲಿಲ್ಲ. ಆದರೆ ಅವನು ಬದಲಾಗಲಿಲ್ಲ ಅಂತ ಆಮೇಲೆ ಸ್ವಲ್ಪ ದಿನಕ್ಕೇ ನನಗೆ ಸರಿಯಾಗಿ ಗೊತ್ತಾಯ್ತು. ಒಂದು ದಿನ ಸಂಜೆ ಪೇಪರ್ ಕರೆಕ್ಷನ್ ಮಾಡಿ ಲೇಟಾಗಿ ಕ್ಯಾಂಪಸ್ ನಿಂದ ಹೊರಟಾಗ ಈ ಶಿವ ಅದೇ ಸುಮಳ ಜೊತೆ ಹೋಗುತ್ತಿದ್ದದ್ದು ನನ್ನ ಕಣ್ಣಿಗೆ ಬಿತ್ತು. "ಛೇ! ಇದೊಳ್ಳೆ ಕತೆಯಾಯ್ತಲ್ಲಾ ಈ ಹುಡುಗನದ್ದು" ಅಂದುಕೊಂಡು ವಿಷಯವನ್ನು ನೇರವಾಗಿಯೇ ಪರಿಹರಿಸಬೇಕೆಂದು ಯೋಚಿಸುತ್ತಾ ಮನೆಗೆ ಹೋದೆ. ಮರುದಿನ ಬೆಳಗ್ಗೆ ಸುಮಳನ್ನು ನನ್ನ ರೂಮಿಗೆ ಕರೆಸಿದ್ದೆ. ಅವಳು ಬಂದ ಸ್ವಲ್ಪ ಹೊತ್ತಿಗೇ ಶಿವನನ್ನೂ ಕರೆದುಕೊಂಡು ಬರಲು ಅಟೆಂಡರ್ ನನ್ನು ಕಳಿಸಿದೆ.


ನನ್ನ ಛೇಂಬರ್ ನಲ್ಲಿ ಸುಮ ಇದ್ದುದ್ದನ್ನು ನೋಡಿ ಶಿವನಿಗೆ ಗಾಭರಿ ಆದಂತೇನೂ ಕಾಣಲಿಲ್ಲ. ನನ್ನ ಆಶ್ಚರ್ಯಕ್ಕೆ ಸುಮಳೂ ಏನೂ ಆಗದವಳಂತೆ ನಿಂತಿದ್ದಳು. ಇರಲಿ ಅಂದುಕೊಂಡು ನಾನು "ಏನಪ್ಪಾ ಶಿವ, ಏನು ನಿಮ್ಮ ಕತೆ" ಅಂತ ಮಾತಾಡಲು ಕೂತೆ. "ಮೇಸ್ಟ್ರೇ, ನಾನೂ ಸುಮ ಒಬ್ಬರನ್ನೊಬ್ಬರು ಪ್ರೀತಿಸ್ತಾ ಇದ್ದೇವೆ. ಅವಳದ್ದು ಇನ್ನೆರಡು ವರ್ಷ ಕಲಿತಾದ ಮೇಲೆ ಮದುವೆ ಆಗ್ತೇವೆ" ಅಂತ ಖಂಡಿತವಾಗಿ ಹೇಳಿದ. ಹೌದೇನಮ್ಮಾ ಅಂತ ಕೇಳಿದ್ದಕ್ಕೆ ಹುಡುಗಿ ಮಾತಾಡದೆ ತಲೆಯಾಡಿಸಿತು. ಇನ್ನೇನು ಹೇಳುವುದು? ನನಗೇ ಬಾಯಿಕಟ್ಟಿದಂತೆ ಆಯಿತು. "ಆದ್ರೂ ಶಿವ, ಹೀಗೆ ಕ್ಯಾಂಪಸ್ ನಲ್ಲಿ ಮೇಸ್ಟ್ರು ಹುಡುಗಿಯರ ಜೊತೆ ಸುತ್ತೋದು ಸರಿ ಕಾಣೋಲ್ಲ. ನೀವು ಮದುವೆ ಆಗ್ತೀವಿ ಅಂತ ಇರೋದು ಸಂತೋಷ. ಆದರೆ ನೀವು ಮನೆಯಲ್ಲಿ ಹೇಳಿದ್ದೀರಾ ಈ ವಿಷಯ" ಅಂತ ಕೇಳಿದೆ.


"ನನ್ನ ಮನೆಯಲ್ಲಿ ಏನೂ ಪ್ರಾಬ್ಲೆಮ್ ಇಲ್ಲ. ಅವಳ ಅಪ್ಪ ಒಪ್ಪದಿರಬಹುದು. ಹಾಗೇನಾದರೂ ಆದರೆ ನೀವು ಇದ್ದೀರಲ್ಲ ಮೇಸ್ಟ್ರೇ" ಶಿವ ನನ್ನನ್ನೂ ಮೆಲ್ಲಗೆ ತನ್ನ ಪಾರ್ಟಿಗೆ ಸೆಳೆದುಕೊಳ್ಳಲು ನೋಡುತ್ತಿದ್ದ. "ಅದಲ್ಲಾ ಆಮೇಲಿನ ಮಾತು. ನೋಡು ಶಿವ, ಇನ್ನು ಒಂದೂವರೆ ವರ್ಷ ಸುಮ ಕ್ಯಾಂಪಸ್ಸಿನಲ್ಲಿ ಇರ್ತಾಳೆ. ಆಮೇಲೆ ಪ್ರಾಜೆಕ್ಟ್ ಮಾಡಲು ಹೋದ ಮೇಲೆ ನಿಮ್ಮ ಮದುವೆ ಮಾತೆಲ್ಲ. ಅಲ್ಲಿಯವರೆಗೆ ನೀವು ಕ್ಯಾಂಪಸ್ಸಿನಲ್ಲಿ ಜೊತೆಯಾಗಿ ಓಡಾಡೋದು ಎಲ್ಲಾ ನಿಲ್ಲಿಸಬೇಕು. ಇಲ್ಲದಿದ್ದದೆ ನಾನೇ ನಿನ್ನ ಮೇಲೆ ಕ್ರಮ ತೆಕ್ಕೊಳ್ತೇನೆ" ಅಂತ ಸ್ವಲ್ಪ ಜೋರಾಗಿಯೇ ಹೇಳಿದೆ. "ಆಯ್ತು ಮೇಸ್ಟ್ರೇ, ನಾವಿಬ್ಬರೂ ಒಟ್ಟಿಗೇ ಓಡಾಡೊಲ್ಲ. ಆದರೆ ಒಂದೂವರೆ ವರ್ಷದ ಮೇಲೆ ನಮ್ಮಿಬ್ಬರನ್ನು ಒಂದು ಮಾಡೋದು ನಿಮ್ಮ ಜವಾಬ್ದಾರಿ. ಅಲ್ಲಿಯವರೆಗೆ ನಾವು ಪೋನಿನಲ್ಲಾದರೂ ಮಾತಾಡಬಹುದಲ್ಲಾ"


ಶಿವ ನನ್ನ ಬಾಯಿಮುಚ್ಚಿಸುವ ಮಾತಾಡುತ್ತಿದ್ದ. "ಆಯ್ತು ಆದರೆ ಅದರಿಂದ ಈ ಹುಡುಗಿಯ ಓದಿಗೆ ಯಾವುದೇ ತೊಂದರೆ ಆಗಬಾರದು. ಮುಂದಿನ ವಿಷಯ ಆಮೇಲೆ ನೋಡೋಣ" ಅಂದೆ. "ನಿಮ್ಮ ಮಾತಿಗೆ ಬೆಲೆ ಕೊಟ್ಟು ನಾವು ಓಡಾಡೋದನ್ನ ನಿಲ್ಲಿಸ್ತೇವೆ" ಅಂತ ಶಿವ ಹೇಳಿ ಹೋದ ಮೇಲೆ ಸುಮಳಿಗೂ ಬುದ್ದಿ ಮಾತು ಹೇಳಿದೆ. ಅದೇ ಮಾಮೂಲು ಕತೆ. ಆದರೆ ಅವಳು ಮಾತ್ರ ತುಟಿ ಬಿಚ್ಚಿ ಒಂದು ಮಾತೂ ಆಡಲಿಲ್ಲ. ಹೇಗೂ ವಿಷಯ ಇಲ್ಲಿಗೇ ಮುಗಿಯಿತಲ್ಲಾ ಅಂದುಕೊಂಡು ನಡೆದ್ದದ್ದನ್ನೆಲ್ಲಾ ಪ್ರಿನ್ಸಿಪಾಲರಿಗೆ ಸಂಕ್ಷಿಪ್ತವಾಗಿ ಹೇಳಿದೆ. ಅವರಿಗೂ ಸಮಾಧಾನವಾಯಿತು.


ಅವತ್ತು ಹೇಳಿದಂತೆ ಶಿವ ಮುಂದಿನ ಒಂದು ವರ್ಷ ನಡೆದುಕೊಂಡ. ಕ್ಯಾಂಪಸ್ಸಿನಲ್ಲಿ ಅವರಿಬ್ಬರೂ ಬೇರೆಯಾದರೆಂದು ಸುದ್ದಿಯಾಯಿತು. ನಾನೂ ಈ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟುಬಿಟ್ಟೆ. ಶಿವ ಸುಮಳನ್ನು ಮದುವೆ ಆಗುವುದಿದ್ದರೆ ಅದು ಒಳ್ಳೆಯದೇ ಅಂತ ನನಗೆ ಆಗಾಗ ಅನ್ನಿಸುತ್ತಿತ್ತು. ಶಿವನಂತಹ ಒಳ್ಳೇ ಹುಡುಗನಿಗೆ ತಮ್ಮ ಹುಡುಗಿಯನ್ನು ಕೊಡಲು ಸುಮಳ ಮನೆಯವರು ಒಪ್ಪಬಹುದೆಂದು ನನಗೆ ನಂಬಿಕೆ ಇತ್ತು. ಸುಮ ಪ್ರಾಜೆಕ್ಟಿಗೆಂದು ಹೋದ ಮೇಲೆ ಶಿವ ಒಮ್ಮೆ ನನ್ನ ಬಳಿ ಹಳೇ ವಿಷಯ ಪ್ರಸ್ತಾಪಿಸಿದ. "ಆಯ್ತು ಬಿಡೋ. ಅವಳು ಪ್ರಾಜೆಕ್ಟ್ ಮುಗಿಸಿಕೊಂಡು ಬರಲಿ, ಮಾತಾಡೋಣ" ಅಂತ ಅವನನ್ನ ಸಮಾಧಾನ ಮಾಡಿ ಕಳಿಸಿದೆ.


ಕೊನೆಗೂ ಸುಮ ಕಾಲೇಜು ಬಿಡುವ ದಿನ ಬಂತು. ಅವತ್ತು ಬೆಳಗ್ಗೆ ಪ್ರಿನ್ಸಿಪಾಲ್ ಪೋನ್ ಮಾಡಿದರು "ಬೇಗ ಬನ್ನಿ, ಶಿವಕಿರಣ್ ವಿಷ ತೆಗೊಂಡಿದ್ದಾನೆ". ಇದೇನಪ್ಪಾ ಆಯ್ತು ಅಂತ ನಾನೂ ಗಾಭರಿಯಿಂದ ಆಸ್ಪತ್ರೆಗೆ ಹೋದೆ. ಪುಣ್ಯಕ್ಕೆ ಶಿವನಿಗೆ ಏನೂ ಆಗಿರಲಿಲ್ಲ. ನನ್ನನ್ನು ನೋಡಿದ್ದೇ ಅಳಲು ಶುರುಮಾಡಿಬಿಟ್ಟ. ನನಗೆ ಈ ಗಂಡುಮಕ್ಕಳು ಅತ್ತರೆ ವಿಪರೀತ ಸಿಟ್ಟು. ಆದರೆ ಅವನನ್ನು ಬಯ್ಯವ ಪರಿಸ್ಥಿತಿ ಅಲ್ಲಿ ಇರಲಿಲ್ಲ. ಅದಕ್ಕೇ ಸುಮ್ಮನೇ ಇದ್ದೆ. "ಮೇಸ್ಟ್ರೇ, ನಿಮ್ಮ ಮಾತು ಕೇಳಿ ಅವಳಿಗಾಗಿ ಎರಡು ವರ್ಷ ಕಾದೆ. ಆದರೆ ಈಗ ಅವಳಿಗೆ ನಾನು ಬೇಡವಂತೆ. ನಾನ್ಯಾಕೆ ಬದುಕಲಿ? ಮೇಸ್ಟ್ರೇ, ನೀವು ನನಗೆ ಮೋಸ ಮಾಡಿದ್ರಿ" ಶಿವ ಗೋಳಿಡುತ್ತಿದ್ದ. ನನಗೆ ಅವನ ಮಾತು ಕೇಳಿ ನಂಬಲೇ ಆಗಲಿಲ್ಲ. ಅವಳು ನನ್ನ ಮುಂದೆಯೇ ನಿಂತು ಶಿವನನ್ನು ಪ್ರೀತಿಸುತ್ತಿದ್ದೇನೆ ಅಂದಿದ್ದಳಲ್ಲಾ. ಇದೇನಪ್ಪಾ ಹುಚ್ಚು ಈ ಹುಡುಗಿಗೆ ಅಂತ ಕಾಲೇಜಿಗೆ ದೌಡಾಯಿಸಿದೆ.


ಸುಮಳನ್ನು ಕರೆಸಿ ಸರಿಯಾಗಿ ಬಯ್ಯಬೇಕೆಂದು ಅಂದುಕೊಂಡು ಅವಳನ್ನು ಛೇಂಬರಿಗೆ ಕರೆಸಿದೆ. ಅತ್ತು ಅವಳ ಮುಖ ಊದಿಕೊಂಡಿತ್ತು. ಏನಮ್ಮಾ ಸಮಾಚಾರ, ಯಾಕೆ ಹೀಗೆ ಮಾಡಿದೆ? ಅಂತ ಕೇಳಿದಾಗ ಪುನಃ ಅಳು. ಅಳುವವಳನ್ನ ಕೂತುಕೊಳ್ಳಲು ಹೇಳಿ ವಿಷ್ಯ ಕೇಳಿದರೆ ಹುಡುಗಿ ಮಾತಾಡಲು ಶುರುಮಾಡಿದಳು "ಸಾರ್, ನಾನೇನೂ ಅವರನ್ನ ಪ್ರೀತಿ ಮಾಡ್ತೀನಿ ಅಂತ ಹೇಳ್ಲಿಲ್ಲ. ಅವರೇ ನನಗೆ ಕಾಗದ, ಕಾರ್ಡು ಅಂತ ಕೊಟ್ತಿದ್ದರು. ನಾನಗೇನೂ ಅವರನ್ನ ಮದುವೆ ಆಗ್ಬೇಕೂಂತ ಇಷ್ಟ ಇಲ್ಲ ಸಾರ್" ಹುಡುಗಿ ಹೇಳಿದಾಗ ನನಗೆ ಆಶ್ಚರ್ಯ. "ಅಲ್ಲಮ್ಮಾ, ಹಾಗಾದರೆ ಅವತ್ತೂ ಇಲ್ಲೇ ನಿಂತು ನಾನು ಕೇಳಿದಾಗ ಯಾಕೆ ಹೇಳಲಿಲ್ಲ ಈ ವಿಷಯ. ನಾನೇ ಅವನಿಗೆ ಹೇಳ್ತಾ ಇದ್ನಲ್ಲಾ" ಅಂತ ಕೇಳಿದೆ. "ಹೇಗೆ ಹೇಳ್ಲಿ ಸಾರ್. ಅವರು ನನ್ನ ಹಿಂದೆ ಬಿದ್ದು ಪ್ರೀತಿ ಮಾಡು ಅಂತ ಪೀಡಿಸ್ತಿದ್ರು ಅಂದ್ರೆ ನೀವು ನಂಬ್ತಿದ್ರಾ? ಒಂದು ವೇಳೆ ನಂಬಿದ್ರೆ ಅವತ್ತು ನೀವು ಅವರಿಗೆ ಬಯ್ತಾ ಇದ್ರಿ. ಆಗ ಅವರು ಆ ದ್ವೇಷವನ್ನು ನನ್ನ ಮೇಲೆ ತೀರಿಸಿಕೊಳ್ತಾ ಇದ್ರು. ನಾನಿನ್ನೂ ಎರಡು ವರ್ಷ ಈ ಕಾಲೇಜಿನಲ್ಲಿ ಇರಬೇಕಿತ್ತು ಸಾರ್. ನೀವು ಅವತ್ತು ಅವರಿಗೆ ನನ್ನನ್ನು ಮಾತಾಡಿಸ್ಬೇಡ ಅಂದ್ರಿ. ನನಗೆ ಅಷ್ಟು ಸಾಕಿತ್ತು. ಅವತ್ತು ನೀವು ನನ್ನನ್ನು ಬದುಕಿಸಿದ್ರಿ ಸಾರ್. ಅವರಿಂದ ತಪ್ಪಿಸಿಕೊಂಡೆನಲ್ಲಾ ಅನ್ನೋ ಸಂತೋಷಕ್ಕೆ ಅವತ್ತು ಸುಮ್ಮನಿದ್ದೆ ಸಾರ್"


ಸುಮ ಮಾತಾಡುತ್ತಿದ್ದರೆ ನನಗೆ ಏನೇನೋ ಆಗುತ್ತಿತ್ತು. ಇನ್ನೂ ಅಳುತ್ತಿದ್ದ ಅವಳನ್ನು ಹೋಗಲು ಹೇಳಿದೆ. ಯಾಕೋ ನನಗೆ ನನ್ನ ಬಗ್ಗೆಯೇ ಬೇಸರವಾಯಿತು. ಬಹುಶಃ ನಾನು ಅವತ್ತು ಇಬ್ಬರನ್ನೂ ಕರೆದು ಮಾತಾಡದಿದ್ದರೆ ಈ ಸಮಸ್ಯೆಯೇ ಬರುತ್ತಿರಲಿಲ್ಲವೇನೋ ಅಂತ ಅನ್ನಿಸ್ತಾ ಇತ್ತು. "ಅವತ್ತು ನೀವು ನನ್ನನ್ನು ಬದುಕಿಸಿದ್ರಿ ಸಾರ್" ಅಂದ ಸುಮಳ ಮಾತು ಸರಿಯೋ, "ಮೇಸ್ಟ್ರೇ, ನೀವು ನನಗೆ ಮೋಸ ಮಾಡಿದ್ರಿ" ಅನ್ನೋ ಶಿವನ ಮಾತು ಸರಿಯೋ - ನನಗೊಂದೂ ತಿಳಿಯಲಿಲ್ಲ.


 ಟಿಪ್ಪಣಿಗಳು
Monday, April 16, 2007
ಮಾತು-ಕತೆ

ಸ ರಿ ಗ ಮ ಪ ದ ನಿ ಸ



"...ನಾನೇ"

"........"

"ಹೀಗೆ ಸುಮ್ಮನೆ"

"........"

"ವಿಷ್ಯ ಇದ್ರೇ ಪೋನ್ ಮಾಡ್ಬೇಕಾ"

"..........."

"ಜೇಬಲ್ಲಿ ನೋಡ್ತೀನಿ ಇರು. ಏನೊಂದು ಸಾವಿರ ರುಪಾಯಿ ಇದೆಯಪ್ಪಾ"

"......."

"ಏನು ಇಷ್ಟು ಸಾಕಾಗಲ್ವಾ ನಿಂಗೆ"

"..............."

"ಇವತ್ತಿನ ನಮ್ಮ ಸಂಜೆ ಕಾಫಿ, ಪಿಜ್ಜಾ಼ಗೆ ಸಾಕು ಬಿಡು"

"............."

"ನೆನ್ನೆ ಹೋದಲ್ಲಿಗೆ ಬೇಡ. ಇವತ್ತು ನಿನ್ನ ಚಾಯ್ಸ್"

"................."

"ಬೇಡ. ಆಮೇಲೆ ಅಲ್ಲಿ ಕಾಫಿ ಚೆನ್ನಾಗಿಲ್ಲಾಂತ ನನ್ನೇ ಬಯ್ತೀಯ. ನೀನೇ ಹೇಳು"

"........."

"ಓಕೆ"

".........."

"ಹೇಯ್! ನನ್ ಶರ್ಟ್ ಕಲರ್ ನಿನಿಗ್ ಹೇಗ್ ಗೊತ್ತಾಯ್ತು"

"........"

"ಪರ್ವಾಗಿಲ್ಲ. ನಮ್ಮನ್ನ ಯಾರೂ ಗುರುತು ಹಿಡಿಯೋದಿಲ್ಲ"

"...."

"ಅಯ್ಯಯ್ಯೋ. ಹಾಗಲ್ಲ ನಾನು ಹೇಳಿದ್ದು. ಈಗ ಅಲ್ಲಿ ಹಿಂದೆ ಯಾರ್ ಜೊತೆನೋ ಹೋಗಿದ್ದೆ, ಆವಾಗ ನಾನ್ ಸಿಕ್ಕಾಕೊಳಿಲ್ಲಾ ಅಂತ ನೀನು ಯೋಚನೆ ಮಾಡಿದ್ರೆ...ಅದು ನಿನ್ ತಪ್ಪು. ನಾನು ಹೇಳಿದ್ದು ಸಿಂಪಲ್. ನಮ್ಮನ್ನ್ ಅಲ್ಲಿ ಯಾರೂ ಗುರ್ತು ಹಿಡಿಯೋಲ್ಲಾಂತ."

"..................................................................................................."

"ನನ್ನ ಮೇಲೆ ನಂಬಿಕೆ ಇಲ್ವಾ ನಿಂಗೆ"

".........."

"ಇಷ್ಟೇನಾ ನೀನು ನನ್ನ ಅರ್ಥ ಮಾಡ್ಕೊಂಡಿರೋದು. ಹಳೇದೆಲ್ಲಾ ಇಷ್ಟು ಬೇಗ ಮರೆತು ಹೋಯ್ತಾ ನಿಂಗೆ"

"......................................."

"ಆಯ್ತು. ನೀನು ಹೇಳಿದ ಹಾಗೇ ಆಗಲಿ. ನಾನು ಸಂಜೆ ಬರ್ತೇನೆ ಅಲ್ಲಿಗೆ. ನಿನ್ನದೇ ಈಗ ನಂಗೆ ಡೌಟು"

"....................."

"ಆಯ್ತು. ಇನ್ನೇನು ನಿನ್ನ ಫ್ಯಾನ್ ಬಂದನಾ"

"................................"

"ನಂಗೆ ಒಮ್ಮೊಮ್ಮೆ ಅನ್ನಿಸ್ತದೆ, ನಿಂಗೆ ನನಗಿಂತ ಅವನ ಚಿಂತೆಯೇ ಜಾಸ್ತಿ ಅಂತ"

"......................................................................................................."

"ಹೌದೌದು. ದಿನಾ ನಿನ್ನ ಮೇಲೆ ಅಷ್ಟಷ್ಟು ಖರ್ಚು ಮಾಡುವ ನನ್ನ ಬಗ್ಗೆ ನಿನಗೆ ಕಾಳಜಿ ಇರಬೇಕಾದ್ದೇ"

"............................................"

"ಅಯ್ಯಯ್ಯೋ. ನೀನು ಹೀಗೆ ಮಾತು ಮಾತಿಗೆ ಕೋಪ ಮಾಡ್ಕೊಂಡ್ರೆ ಹೇಗೆ. ಕಾಮಿಡೀನೂ ಮಾಡ್ಬಾರ್ದಾ"

"......................."

"ಓಕೆ. ತಪ್ಪಾಯ್ತು, ತಪ್ಪಾಯ್ತು, ತಪ್ಪಾಯ್ತು. ಸರೀನಾ"

"................"

"ಆಯ್ತು ಅಂತ ಹೇಳಿದ್ನಲ್ಲಾ. ನಿನಗಿಂತ ಮೊದಲೇ ಕಾಯ್ತಿರ್ತೀನಿ"

".................."

"ಅಯ್ಯೋ. ಕಳೆದ ಸಲ ಲೇಟಾಯ್ತು ನಿಜ. ಅದಕ್ಕೇಂತಾ ಈ ಸಲಾನೂ ಲೇಟ್ ಬರ್ತೀನಿ ಅಂತ ಯಾಕೆ ಯೋಚನೆ ಮಾಡ್ತೀಯಾ"

"........."

"ಆಯ್ತ.. ಅದೇ ನಿನ್ನ ಫೇವರೇಟ್ ಚಾಕಲೇಟ್ ಇದ್ಯಲ್ಲಾ, ಅದನ್ನ ತೆಕೊಂಡೇ ಬರ್ತೀನಿ"

******************************************************************************************************


ಸ ನಿ ದ ಪ ಮ ಗ ರಿ ಸ


"..........."

"ಏನು ಇಷ್ಟು ಬೇಗ"

"............."

"ಏನ್ವಿಷ್ಯ"

"........"

"ದುಡ್ಡು ಜಾಸ್ತಿ ಇದ್ಯಾ"

"........."

"ಅಷ್ಟೇನಾ"

".............."

"ಯಾಕೆ ಅಷ್ಟು ಕಮ್ಮಿ"

"....."

"ಸರಿ. ಎಲ್ಲಿ ಸಿಗೋಣ"

"...."

"ಆಗೊಲ್ಲ. ಸ್ಪಾಟ್ ನೀನೇ ಹೇಳು"

"............."

"ಹಳೇ ಬಸ್ ಸ್ಟಾಪ್ ಹತ್ರ ಬರ್ತೀನಿ"

"......"

"ಗ್ರೀನ್ ಶರ್ಟ್ ಹಾಕೊಂಡಿದ್ದೀಯಾ"

"........................."

"ತುಂಬಾ ಎದ್ದು ಕಾಣುವ ಶರ್ಟ್ ಹಾಕೋಬೇಡ"

"..............."

"ನಿನಿಗೆ ಗ್ಯಾರಂಟಿ ಇದ್ಯಾ. ಹಿಂದೆಲ್ಲಾದ್ರೂ ಬೇರೆಯವ್ರ ಜೊತೆ ಹೋಗಿದ್ಯಾ ಅಲ್ಲಿಗೆ"

".........."

"ನೋಡು ನಾನು ಬೇರೆಯವರ ತರಹ ಅಲ್ಲ. ನೀನೆಲ್ಲಾದ್ರೂ ನನಗೆ ಮೋಸ ಮಾಡೋಕೆ ನೋಡಿದ್ರೆ ಚೆನ್ನಾಗಿರೊಲ್ಲಾ. ನಾನು ಬೇಡ ಬೇಡ ಅಂದರೂ ನೀನೇ ನನ್ನನ್ನ ಬಲವಂತ ಮಾಡಿದ್ದು ಈ ವಿಷಯಕ್ಕೆ. ಈಗ ನೀನು ಮೋಸ ಮಾಡಿದರೆ ನಾನು ಸುಮ್ಮನಿರೊಲ್ಲ"

"...................."

"ಈ ವಿಷ್ಯದಲ್ಲಿ ಯಾರು ಯಾರನ್ನೂ ನಂಬುವ ಹಾಗಿಲ್ಲ"

"............"

"ಹಳೇ ಕತೆ ಎಲ್ಲಾ ಈಗ ಬೇಡ. ಈವತ್ತಿನ ಕತೆ ಹೇಳು. ನಾನು ಬರೋದು ಗ್ಯಾರಂಟಿ. ನೀನು ಬರ್ಲೇಬೇಕು"

"..................."

"ಛೇ! ನನ್ನ ಬಗ್ಗೆ ಸಂಶಯ ಬೇಡ. ನಾನೀಗಲೇ ಹೊರಟೆ"

"...................................."

"ಹೌದು ಬೆಳಗ್ಗೇ ಬಂದು ಗರಮ್ಮಾಗಿ ಕೂತಿದ್ದಾರೆ"

"..........................................."

"ಹಾಗೇನಿಲ್ಲ. ನಿನ್ನ ಮೇಲೆ ಕಡಿಮೆ ಗಮನ ಅಂತೇನೂ ಅಲ್ಲ. ನೀನು ಸರಿಯಾಗಿ ನಮ್ಮನ್ನ ನೋಡಿಕೊಂಡರೆ ನಾವೂ ನಿನ್ನನ್ನ ಚೆನ್ನಾಗಿಯೇ ಕಾಪಾಡ್ತೇವೆ"

"................................................................."

"ನಾನು ಹೇಳಿದ್ನಾ ಅಷ್ಟೆಲ್ಲಾ ಮಾಡ್ಲಿಕ್ಕೆ. ನಿನ್ನ ಕೆಲಸ ಆಗ್ಬೇಕಿತ್ತು ಅದಕ್ಕೇ ಈಗಲೂ ನನ್ನ ಹಿಂದೆ ಬಿದ್ದಿದ್ದೀಯ. ಬೇಡಾಂದ್ರೆ ಹೇಳು. ನನಗೇನು"

"............................................."

"ನಮ್ಮ ಹತ್ರ ಅವೆಲ್ಲಾ ಬೇಡ. ಏನಿದ್ರೂ ಬಿಸ್ನೆಸ್ ಮಾತಾಡು"

".........."

"ಸರಿ ಸರಿ. ಹಾಗಾದ್ರೆ ಅಲ್ಲೇ ಸಿಗೋಣ"

"................................."

"ಅದು ಹೇಳ್ಬೇಡ ನೀನು. ಕಳೆದ ಸಲ ನಾನು ಕಾದೂ ಕಾದೂ ಸುಸ್ತಾಗಿ ಹೋಗಿದ್ದೆ. ಆಮೇಲೆ ಕಾನ್ಸಲ್ ಅಂತ ಮೆಸೇಜ್ ಬಂದಿತ್ತು"

"...................."

"ಆಯ್ತು. ಇದೇ ಲಾಸ್ಟ್ ಚಾನ್ಸ್. ಹತ್ತತ್ತು ಲಕ್ಷ ಬೇರೆ ಬೇರೆಯಾಗಿ ಪ್ಯಾಕ್ ಮಾಡಿ ತಂದ್ಬಿಡು"

 ಟಿಪ್ಪಣಿಗಳು
Wednesday, March 28, 2007
ಭಾಷೆ


University of Lordshire


Dr. James Adams, Professor Emeritus, School of Comparative Linguistics
ಎಂಬ ಹೆಸರಿದ್ದ ಕೊಠಡಿಯೊಳಗಡೆ ಒಂದು ವಯಸ್ಸಾದ ದೇಹ ಕುಳಿತಿತ್ತು. ಸುತ್ತೆಲ್ಲಾ ಪುಸ್ತಕದ ರಾಶಿ. ಯಾವುಯಾವುದೋ ಭಾಷೆಯ ಪುಸ್ತಕಗಳು. ಪ್ರೊಫೆಸರಿಗೆ ರಿಟೈರಾಗಿ ಐದು ವರ್ಷವಾಗಿದ್ದರೂ ಅವರನ್ನು ಯೂವಿವರ್ಸಿಟಿ ಮನೆಗೆ ಕಳಿಸಿರಲಿಲ್ಲ. ಈ ಕೋಣೆಯಲ್ಲಿ ಅವರು ತಮ್ಮ ಜೀವನದ ಅರ್ಧ ಆಯಸ್ಸನ್ನು ಕಳೆದಿದ್ದರು. ಆದರೆ ಈಗ ಅವರಿಗೆ ದೊಡ್ಡ ಆಘಾತ ಒಂದು ಬಂದಿತ್ತು. ಈ ವರ್ಷದ ಯೂನಿವರ್ಸಿಟಿ ಬಜೆಟ್ಟಿನಲ್ಲಿ ಇವರ ವಿಭಾಗಕ್ಕೆ ಕೇಳಿದಕ್ಕಿಂತ ಬಹಳ ಕಡಿಮೆ ಹಣ ಮಂಜೂರಾಗಿತ್ತು. ಅದರ ಜೊತೆಗೆ ಛಾನ್ಸಿಲರ್ ಒಂದು ಮೆಮೊ ಕೂಡ ಇವರ ವಿಭಾಗಕ್ಕೆ ಕೊಟ್ಟಿದ್ದರು. ಅದರ ಸಾರಾಂಶವೆಂದರೆ "ಮುಂದಿನ ವರ್ಷದಿಂದ ಯೂನಿವರ್ಸಿಟಿ ಈ ವಿಭಾಗಕ್ಕೆ ಸಹಾಯ ಕೊಡುವುದನ್ನು ನಿಲ್ಲಿಸುತ್ತದೆ. ಯಾಕೆಂದರೆ ವರ್ಷದಿಂದ ವರ್ಷಕ್ಕೆ ನಿಮ್ಮ ವಿಭಾಗಕ್ಕೆ ಸೇರುತ್ತಿರುವ ವಿಧ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಮ್ಮಿಯಾಗುತ್ತಿದೆ. ನಿಮ್ಮ ವಿಭಾಗದಲ್ಲಿ ಕೆಲಸ ಮಾಡುವ ಸಂಶೋಧಕರು ಈ ಕೂಡಲೇ ಸರಕಾರದಿಂದ ಅನುದಾನ ಬರುವಂತಹ ಸಂಶೋಧನೆ ಮಾಡತಕ್ಕದ್ದು. ಇಲ್ಲವಾದರೆ ಬರುವ ವರ್ಷದಿಂದ ಈ ವಿಭಾಗವನ್ನು ಮುಚ್ಚಬೇಕಾಗುತ್ತದೆ".


ಇಂತಹ ಒಂದು ಸುದ್ದಿಯನ್ನು ಪ್ರೊ. ಆಡಮ್ಸ್ ಅವರಿಗೆ ಕೊಟ್ಟ ವ್ಯಕ್ತಿ ಆ ವಿಭಾಗದ ಮುಖ್ಯರಾದ ಡಾ|| ಸ್ಕಾಟ್ ವೇಲ್ಸ್ ಅವರು ಮೂಲತಃ ಪ್ರೊಫೆಸರರ ಶಿಷ್ಯರೇ. ತಮ್ಮ ಪ್ರಿಯ ಶಿಷ್ಯ ಮತ್ತು ಅದಕ್ಕಿಂತ ಹೆಚ್ಚಾಗಿ ತಮ್ಮ ಆತ್ಮೀಯ ಗೆಳೆಯನಾದ ವೇಲ್ಸ್ ಅವರನ್ನೇ ತಮ್ಮ ನಂತರ ವಿಭಾಗದ ಮುಖ್ಯರನ್ನಾಗಿ ಮಾಡಬೇಕೆಂದು ಪ್ರೊಫೆಸರ್ ಕೇಳಿಕೊಂಡಾಗ ಯೂನಿವರ್ಸಿಟಿ ಒಪ್ಪಿಕೊಂಡಿತ್ತು. ಡಾ|| ವೇಲ್ಸ್ ಏನೂ ಕಡಿಮೆ ಸಾಧನೆ ಮಾಡಿದವರಲ್ಲ. ಮೊದಲಿಗೆ ತಮ್ಮ ಗುರು ಡಾ|| ಆಡಮ್ಸ್ ಅವರ ಜೊತೆಗೂಡಿ ಬರೆದ ಉತ್ಕೃಷ್ಟ ಬರಹ ಇವತ್ತು "ಜೇಮ್ಸ್-ವೇಲ್ಸ್ ಥಿಯರಿ" ಎಂದೇ ಪ್ರಸಿದ್ದವಾಗಿತ್ತು. ಇದರಲ್ಲಿ ಗುರು ಶಿಷ್ಯರು ಭಾಷೆಯ ಭಾಷ್ಯವನ್ನೇ ಹೊಸದಾಗಿ ಬರೆದಿದ್ದರು. ಅವರ ಪ್ರಕಾರ ಯಾವ ಭಾಷೆಯೂ ಹುಟ್ಟುವುದೂ ಇಲ್ಲ ಹಾಗಾಗಿ ಸಾಯುವುದೂ ಇಲ್ಲ; ಅದು ಬೆಳೆಯುತ್ತದೆ ಮತ್ತು ರೂಪಾಂತರ ಹೊಂದುತ್ತದೆ. ಹಾಗಾಗಿ ನೂರಾರು ವರ್ಷಗಳ ಕಾಲ ಅಸ್ಥಿತ್ವದಲ್ಲಿದ್ದ ಭಾಷೆ ಮತ್ತೆ ನೂರು ವರ್ಷಗಳ ನಂತರ ಬೇರೆ ರೂಪ ಪಡೆಯುತ್ತದೆ. ನಾವು ಭಾಷೆಯ ನಿಜ ಸ್ವರೂಪವನ್ನು ತಿಳಿಯಬೇಕಾದರೆ ಭಾಷೆಯನ್ನು ಏಕಾಂತದಲ್ಲಿ ಅಭ್ಯಾಸ ಮಾಡಬಾರದು, ಬದಲಿಗೆ, ಆ ಭಾಷೆಯನ್ನು ಸಮಕಾಲೀನ ಮತ್ತು ಸುತ್ತಮುತ್ತಲಿನ ಈಚಿನ ಭಾಷೆಗಳಿಗೆ ಹೋಲಿಸಿ ತೌಲನಿಕ ಅಧ್ಯಯನ ಮಾಡಬೇಕೆಂಬುದೇ ಅವರ ವಾದ.


ಈ ಥಿಯರಿ ಹೊರಬಂದಾದ ಮೇಲೆ ಭಾಷೆಗಳ ತೌಲನಿಕ ಅಧ್ಯಯನಕ್ಕೆ ವಿಶೇಷ ಮಹತ್ವ ದೊರಕಿತ್ತು. ಆಗ ಈ ಯೂನಿವರ್ಸಿಟಿಯಲ್ಲಿ ಈ ಹೊಸ ವಿಭಾವನ್ನು ತೆರೆದು ಅದಕ್ಕೆ ಡಾ|| ಆಡಮ್ಸ್ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು. ವಿಶ್ವದ ಅನೇಕ ದೇಶಗಳ ಭಾಷಾ ಶಾಸ್ತ್ರಜ್ಞರನ್ನು ಕಲೆಹಾಕಿ ಅವರ ನಡುವೆ ಸಂವಾದ ನಡೆಸುವ ಕೆಲಸವನ್ನು ಈ ವಿಭಾಗ ಮೊದಲಿನಿಂದಲೂ ಮಾಡಿಕೊಂಡು ಬಂದಿತ್ತು. ವಿಚಾರ ವಿನಿಮಯ ವಿಭಾಗದ ಮುಖ್ಯ ಕೆಲಸ. ಅದಕ್ಕೆ ಬೇರೆ ಬೇರೆ ದೇಶದಿಂದ ಭಾಷಾ ಪಂಡಿತರನ್ನು ಕರೆಸಬೇಕಿತ್ತು. ಸಂಗ್ರಹಿಸಿದ ವಿಷಯವನ್ನೆಲ್ಲಾ ಪುಸ್ತಕದ ಮೂಲಕ ಪ್ರಕಟಿಸಬೇಕಿತ್ತು. ಇದಕ್ಕೆಲ್ಲಾ ಹಣದ ಅವಶ್ಯಕತೆ ಇತ್ತು. ಮೊದಮೊದಲು ಸರಕಾರವೇ ಈ ವಿಭಾಗಕ್ಕೆ ಹಣ ಬಿಡುಗಡೆ ಮಾಡುತ್ತಿತ್ತು. ಮುಕ್ತ ಮಾರುಕಟ್ಟೆ ಪ್ರತಿಪಾದಿಸುವ ಸರಕಾರ ಬಂದೊಡನೆ ಯೂನಿವರ್ಸಿಟಿಗಳು ತಮಗೆ ಬೇಕಾದ ಹಣವನ್ನು ತಾವೇ ದುಡಿದುಕೊಳ್ಳಬೇಕಾಗಿ ಬಂತು. ಹುಡುಗರು ಹೆಚ್ಚಾಗಿ ಸೇರುವ ವಿಭಾಗದವರು ಫೀಸ್ ಹೆಚ್ಚಿಸಿ ಬದುಕುವ ದಾರಿ ನೋಡಿಕೊಂಡವು. ಆದರೆ ಭಾಷೆಯಂತಹ ವಿಷಯ ಕಲಿಯಲು ಹೆಚ್ಚು ಮಂದಿ ಬರುತ್ತಿರಲಿಲ್ಲ. ಬರುತ್ತಿದ್ದವರೂ ಯಾವುದೋ ಕೆಲಸ ನಿಮಿತ್ತ ಬೇರೆ ದೇಶಕ್ಕೆ ಹೋಗಬೇಕಿದ್ದರಿಂದ ಆ ದೇಶದ ಭಾಷೆಯನ್ನು ಕಲಿಯಲಷ್ಟೇ ಬರುತ್ತಿದ್ದರು.


ಇಂತಹ ಸಮಯದಲ್ಲಿ ಡಾ|| ಆಡಮ್ಸ್ ತಮಗಿರುವ ವೈಯಕ್ತಿಕ ಪರಿಚಯದಿಂದ ಬೇರೆ ಬೇರೆ ದೇಶಗಳ ಸರಕಾರಗಳನ್ನು ಸಂಪರ್ಕಿಸಿ ಆ ದೇಶದ ಭಾಷೆಗಳ ಮೇಲೆ ಅಧ್ಯಯನ ನಡೆಸಲು ಹಣ ಕೊಡುವಂತೆ ಕೇಳಿಕೊಂಡಿದ್ದರು. ಕೆಲವರು ಪ್ರತಿಕ್ರಿಯಿಸಿದರೂ ಪರಿಸ್ಥಿತಿ ಉತ್ತವಾಗಿ ಏನೂ ಇರಲಿಲ್ಲ. ಡಾ|| ಆಡಮ್ಸ್ ಪದೇ ಪದೇ ಸೆನೆಟ್ ಮೀಟಿಂಗಳಲ್ಲಿ ಯೂನಿವರ್ಸಿಟಿಯನ್ನು ಲಾಭದಾಯಕ ಉದ್ಯಮವನ್ನಾಗಿ ನೋಡದಂತೆ ಪ್ರಾರ್ಥಿಸಿದರೂ ಅವರ ಮಾತನ್ನು ಯಾರೂ ಕೇಳುತ್ತಿರಲಿಲ್ಲ. ಯೂನಿವರ್ಸಿಟಿಗಳು ಹಣ ಮಾಡುವ ಸಂಸ್ಥೆಗಳಾಗದೆ ಪ್ರಥಮ ದರ್ಜೆಯ ಸಂಶೋಧನಾ ಮತ್ತು ಕಲಿಕಾ ಕೇಂದ್ರ ಆಗಬೇಂಬ ಅವರ ಮಾತು ಜಾಗತೀಕರಣದ ಈ ಹೊಸ ವ್ಯವಸ್ಥೆಯಲ್ಲಿ ಅರ್ಥ ಕಳೆದುಕೊಂಡಿತ್ತು. ಇಲ್ಲಿ ಲಾಭ ಬರುವ ಉದ್ದಿಮೆಗೇ ಮಣೆ; ಅದು ವಿದ್ಯೆಯಾದರೂ ಸರಿ, ಕೈಗಾರಿಕೆಯಾದರೂ ಸರಿ. ತಮ್ಮ ಜೀವನವಿಡೀ ಮಾಡಿದ ಸಂಶೋಧನೆ ಈಗ ಲೆಕ್ಕಕ್ಕಿಲ್ಲ ಅಂದರೆ ಪ್ರೊಫೆಸರರಿಗೆ ಹೇಗಾಗಿರಬೇಡ. ತಮ್ಮ ಶಿಷ್ಯ ವೇಲ್ಸ್ ಈ ಕುರಿತು ಆಗಿಂದ್ದಾಗೆ ಸುಳಿವು ನೀಡುತ್ತಿದ್ದರೂ ಪರಿಸ್ಥಿತಿ ಈ ಮಟ್ಟಕ್ಕೆ ಇಳಿಯುತ್ತದೆ ಎಂದು ಅವರು ಅಂದುಕೊಂಡಿರಲಿಲ್ಲ. ತಾವು ಕಷ್ಟಪಟ್ಟು ಕಟ್ಟಿದ ವಿಭಾಗದ ಜೀವ ಈಗ ಅಪಾಯದಲ್ಲಿದೆ. ಅದನ್ನು ಹೇಗಾದರೂ ಮಾಡಿ ಉಳಿಸಬೇಕು ಅಂತ ಡಾ|| ಆಡಮ್ಸ್ ಕಳೆದ ಮೂರು ದಿವಸದಿಂದ ಮನೆಗೂ ಹೋಗದೆ ಯೋಚಿಸುತ್ತಾ ಕುಳಿತ್ತಿದ್ದಾರೆ. ತಮ್ಮ ಜೀವನ ಇಡೀ ವ್ಯಯಿಸಿ ಕೂಡಿಟ್ಟ ಪುಸ್ತಕಗಳು, ದೇಶ ದೇಶ ಸುತ್ತಿ ಸಂಶೋಧನೆ ಮಾಡುತ್ತಿದ್ದಾಗ ಬರೆದಿಟ್ಟುಕೊಂಡಿದ್ದ ರಿಸರ್ಚ್ ಡೈರಿಗಳು ಅವರ ಮುಂದಿದೆ.


ಅವರಿಗೆ ಒಂದು ಹೊಸ ಸಮಸ್ಯೆ ಬೇಕಿತ್ತು. ಯಾರೂ ಈವರಗೆ ಉತ್ತರಿಸದ ಪ್ರಶ್ನೆಯೊಂದನ್ನು ಅವರು ಮೊದಲು ಕಂಡುಹುಡುಕಬೇಕಿತ್ತು. ಮತ್ತು ಆ ಪ್ರಶ್ನೆ ಈ ಹೊತ್ತಿನಲ್ಲಿ ಬಹಳ ಮಹತ್ವ ಉಳ್ಳದ್ದೂ ಆಗಿರಬೇಕಿತ್ತು. ಅಂತಹ ಪ್ರಶ್ನೆಯನ್ನು ಹುಡುಕಿ, ಮತ್ತೆ ಅದಕ್ಕೆ ತಮ್ಮ ಸಂಶೋಧನೆಯಿಂದ ಉತ್ತರ ಕೊಟ್ಟರೆ ಸಾಕು - ತಮ್ಮ ವಿಭಾಗ ಉಳಿಯುತ್ತದೆ. ಆ ನಂಬಿಕೆ ಅವರಲ್ಲಿತ್ತು. ಅವರು ಅಂತಹ ಪ್ರಶ್ನೆಯನ್ನು ಹುಡುಕುತ್ತಿದ್ದರು. ಪುಸ್ತಕಗಳ ರಾಶಿಯಲ್ಲಿ ಮೈಮರೆತ್ತಿದ್ದವರ ಗಮನ ಸೆಳೆದದ್ದು ಕೆಂಪು ಬಣ್ಣದ ಡೈರಿ. ಅದರ ಮೇಲಿನ ಧೂಳನ್ನು ಕೊಡವಿ ನೋಡಿದರೆ ಪುಸ್ತಕ ಮೇಲೆ ದಪ್ಪ ಅಕ್ಷರದಲ್ಲಿ ಬರೆದಿತ್ತು - Field Notes from research trip to Mysore - 1955 ಪ್ರೂಫೆಸರರಿಗೆ ತಿಳಿದುಹೋಯ್ತು "ನನ್ನ ವಿಭಾಗ ಇನ್ನು ಮುಚ್ಚದು. ನನಗೆ ಬೇಕಾದ ವಸ್ತು ಇಲ್ಲಿದೆ, ಈ ಪುಸ್ತಕದಲ್ಲಿ"


******************************************************************************************************


1950


ಡಾ|| ಆಡಮ್ಸ್ ಅವರ ಹೊಸ ಥಿಯರಿ ಆಗ ತಾನೇ ಪ್ರಪಂಚದ ವಿದ್ವಾಂಸರ ಗಮನ ಸೆಳೆಯುತ್ತಿತ್ತು. ತಮ್ಮ ಸಿದ್ದಾಂತದ ಪ್ರಚಾರಕ್ಕಾಗಿ ಪ್ರೊಫೆಸರರು ಬೇರೆ ಬೇರೆ ಯೂನಿವರ್ಸಿಟಿಗಳಿಗೆ ಭೇಟಿ ನೀಡಿ ಅಲ್ಲಿನ ಸಂಶೋಧಕರೊಂದಿಗೆ ಸಂವಾದ ನಡೆಸುತ್ತಿದ್ದರು. ಇಂತಹ ಒಂದು ಸಂದರ್ಭದಲ್ಲಿ ಅವರಿಗೆ ಡಾ|| ಕಮ್ಮಕೋಳಿ ವಿಶ್ವನಾಥನ್ ಅವರ ಪರಿಚಯವಾಗಿತ್ತು. ಮೂಲತಃ ತಮಿಳುನಾಡಿನವರಾದ ಅವರು ಪ್ರಕಾಂಡ ಪಂಡಿತರು. ವೈದ್ಯಕೀಯ ಓದಲು ವಿದೇಶಕ್ಕೆ ಬಂದವರು ಇಲ್ಲಿ ಸಂಸ್ಕೃತ ಅಧ್ಯಯನ ಮತ್ತು ಸಂಶೋಧನೆಯ ಬಗ್ಗೆ ವಿದೇಶಿಯರಲ್ಲಿದ್ದ ಆಸಕ್ತಿ ಕಂಡು ತಾವೂ ಭಾಷಾ ವಿಜ್ಞಾನ ಕಲಿಯಲು ಪ್ರಾರಂಭಿಸಿದರು. ವೈದಿಕ ಕುಟುಂಬದಿಂದ ಬಂದ ಅವರಿಗೆ ಸಹಜವಾಗಿಯೇ ಪ್ರಸ್ಥಾನತ್ರಯಗಳ ಬಗ್ಗೆ ಆಳವಾಗಿ ತಿಳಿದಿತ್ತು. ಜೊತೆಗೆ ಸಂಗಂ ಸಾಹಿತ್ಯವನ್ನು ತಂದೆಯಿಂದ ತಿಳಿದುಕೊಂಡಿದ್ದರು. ಸ್ವಾತಂತ್ರಪೂರ್ವ ಭಾರತದಲ್ಲಿ ಸಾಮಾನ್ಯವಾಗಿ ಸ್ಥಿತಿವಂತ ಬ್ರಾಹ್ಮಣ ಮನೆಗಳಲ್ಲಿ ಇಂಗ್ಲಿಷ್ ಸಾಹಿತ್ಯದ ಓದು ನಡೆಯುತ್ತಿತ್ತು. ಅದರಂತೆ ವಿಶ್ವನಾಥನ್ ಕೂಡ ಸಾಕಷ್ಟು ಓದಿಕೊಂಡಿದ್ದರು. ಇದರಿಂದ ಅವರಿಗೆ ಭಾಷಾ ಸಂಶೋಧನೆಯಲ್ಲಿ ವಿಶೇಷ ಅನುಕೂಲವಿತ್ತು.


ದೇವನಾಗರೀ ಲಿಪಿ ಉತ್ತರ ಭಾರತದ ಬೇರೆ ಬೇರೆ ಭಾಷೆಗಳ ಲಿಪಿಯಾಗಿ ಪರಿವರ್ತನೆಗೊಂಡ ಪ್ರಕ್ರಿಯೆಯ ಬಗ್ಗೆ ವಿಶ್ವನಾಥನ್ ಆಗ ಸಂಶೋಧನೆ ನಡೆಸುತ್ತಿದ್ದರು. ಡಾ|| ಆಡಮ್ಸ್ ಅವರ ಸೂತ್ರದ ಅನ್ವಯವೇ ಅವರೂ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಡಾ|| ಆಡಮ್ಸ್ ಅವರು ತಮ್ಮ ಯೂನಿವರ್ಸಿಟಿಗೆ ಬಂದದ್ದು ವಿಶ್ವನಾಥನ್ ಅವರಿಗೆ ಅಪಾರ ಸಂತೋಷವಾಗಿತ್ತು. ಡಾ|| ಆಡಮ್ಸ್ ಕೂಡ ಭಾರತದ ಭಾಷೆಗಳ ಮೇಲೆ ವಿಶೇಷ ಅಧ್ಯಯನ ನಡೆಸಲು ಅನುವಾಗುತ್ತಿದ್ದರು. ಇವರಿಬ್ಬರ ಅಂದಿನ ಮಾತುಕತೆ ಮುಂದಿನ ಮಹತ್ವದ ಯೋಜನೆಗೆ ಬುನಾದಿಯಾಗುತ್ತದೆ ಎಂದು ಅವರಿಬ್ಬರೂ ಅಂದು ತಿಳಿದುಕೊಂಡಿರಲಿಲ್ಲ.


ಮಾತುಕತೆಯ ನಡುವೆ ಡಾ|| ಆಡಮ್ಸ್ ಅವರು ವಿಶ್ವನಾಥನ್ ಅವರಿಗೆ ಒಂದು ಸಲಹೆ ನೀಡಿದರು. ಉತ್ತರ ಭಾರತದ ಭಾಷೆಗಳ ಲಿಪಿಗಳು ಒಂದೇ ದೇವನಾಗರಿಯಿಂದ ಬಂದವೆಂಬುದು ಬಹಳ ಸುಲಭದ ವಿಷಯ. ಅದಕ್ಕೆ ಬದಲಾಗಿ ದಕ್ಷಿಣಾದಿ ಭಾಷೆಗಳ ಮೂಲವನ್ನು ಏಕೆ ಹುಡುಕಬಾರದು? ಎಂಬ ಆಡಮ್ಸ ಪ್ರಶ್ನೆಗೆ ವಿಶ್ವನಾಥನ್ ಬಳಿ ಉತ್ತರವಿರಲಿಲ್ಲ. ದಕ್ಷಿಣದಲ್ಲಿ ಪ್ರಚಲಿತವಿರುವ ಭಾಷೆಗಳಲ್ಲಿ ಕನ್ನಡ, ತೆಲುಗು ಲಿಪಿಗಳು ಮಾತ್ರ ಒಂದನ್ನೊಂದು ಹೋಲುತ್ತವೆ. ಆದರೆ ತಮಿಳು ಮತ್ತು ಮಲೆಯಾಳಿ ಲಿಪಿಗಳು ತಮ್ಮದೇ ಸ್ವಂತಿಕೆಯಿಂದ ಕನ್ನಡ ಲಿಪಿಗಿಂತ ಬೇರೆಯಾಗಿ ನಿಲ್ಲುತ್ತದೆ. ಭೌಗೋಳಿಕವಾಗಿ ಸಮೀಪವಿರುವ ಜನಾಂಗಗಳ ಸಂಸ್ಕೃತಿ, ಆಹಾರ, ಭಾಷೆ - ಎಲ್ಲಾ ಸುಮಾರಿಗೆ ಒಂದೇ ತರಹ ಇರುವುದು ಸಾಮಾನ್ಯ ವಿಷಯ. ಆದರೆ ಇಲ್ಲಿ ಕೆಲವು ಭಾಷೆಗಳು ಸಂಸ್ಕೃತದಿಂದ ಬಹಳವಾಗಿ ಪ್ರಭಾವಹೊಂದಿದ ಭಾಷೆಗಳಿವೆ, ಕೆಲವು ಸಂಪೂರ್ಣವಾಗಿ ಇದರಿಂದ ತಪ್ಪಿಸಿಕೊಂಡಿವೆ. ಆದರೂ ಇವುಗಳ ಲಿಪಿ ಸಂಪೂರ್ಣ ಬೇರೆ ಬೇರೆ ಇದೆ. ಇದು ಹೇಗೆ ಸಾಧ್ಯ ಎಂಬ ಡಾ|| ಆಡಮ್ಸ್ ಅವರ ಪ್ರಶ್ನೆ ವಿಶ್ವನಾಥನ್ ನನ್ನು ಯೋಚಿಸುವಂತೆ ಮಾಡಿತು.


ಮುಂದೆ ಬಹಳ ವರ್ಷಗಳ ಕಾಲ ವಿಶ್ವನಾಥನ್ ನಿಂದ ಯಾವುದೇ ಉತ್ತರ ಬರದ ಕಾರಣ ಡಾ|| ಆಡಮ್ಸ್ ಈ ವಿಷಯವನ್ನೇ ಮರೆತೇ ಬಿಟ್ಟಿದ್ದರು. ಆದರೆ
1954 ನಲ್ಲಿ ಒಂದು ದಿನ ಡಾ|| ಆಡಮ್ಸ್ ಅವರಿಗೆ ಟಪಾಲೊಂದು ಬಂದಿತ್ತು. ಅದು ವಿಶ್ವನಾಥನ್ ನ ಪತ್ರ, ಅದನ್ನು ಅವರು ಮೈಸೂರಿನಿಂದ ಬರೆದಿದ್ದರು. ಪತ್ರವನ್ನು ಓದಿ ಡಾ|| ಆಡಮ್ಸ್ ಮೂರ್ಛೆ ಹೋಗುವುದೊಂದೇ ಬಾಕಿ. ಆ ಪತ್ರದಲ್ಲಿ ಅಂತಹ ವಿಸ್ಪೋಟಕ ಮಾಹಿತಿ ಒಂದಿತ್ತು.


****************************************************************************************************


India 1954


ವಿಶ್ವನಾಥನ್ ಡಾ||ಆಡಮ್ಸ್ ಅವರ ಪ್ರಶ್ನೆಗೆ ಉತ್ತರ ಹುಡುಕಲು ನೇರವಾಗಿ ಭಾರತಕ್ಕೆ ಬಂದಿದ್ದರು. ತಮಿಳು ಚನ್ನಾಗಿ ಬರುತ್ತಿದ್ದ ಅವರು ಮೊದಲು ತಮಿಳು ಲಿಪಿಯ ಮೂಲದ ಬಗ್ಗೆ ಅಧ್ಯಯನ ನಡೆಸಿದರು. ನಂತರ ಮದರಾಸಿನ Indian Language Institute ನಲ್ಲಿ ಸಂಶೋಧನೆ ಮಾಡಲು ಹೋದಾಗ ಅಲ್ಲಿ ಅವರಿಗೆ ಹೊಸ ವಿಷಯವೊಂದು ತಿಳಿದುಬಂತು. ಮೈಸೂರಿನಲ್ಲಿ ಆಗ ತಾನೇ Indian Language Institute ನ ಮತ್ತೊಂದು ಶಾಖೆ ಪ್ರಾರಂಭವಾಗಿತ್ತು. ಅಲ್ಲಿ ದ್ರಾವಿಡ ಭಾಷೆಗಳ ಉಗಮದ ಬಗ್ಗೆ ಗಂಭೀರ ಸಂಶೋಧನೆ ನಡೆಯುತ್ತಿತ್ತು. ಅದಕ್ಕೆ ವಿಶ್ವನಾಥನ್ ಕೂಡ ಮೈಸೂರಿಗೇ ಬಂದಿಳಿದರು.


ಮೈಸೂರು ಆಗಿನ್ನೂ ಕರ್ನಾಟಕವಾಗಿರಲಿಲ್ಲ. ಭಾಷಾವಾರು ಪ್ರಾಂತ್ಯಗಳ ರಚನೆಯ ಬಗ್ಗೆ ಜನರಲ್ಲಿ ಬಿನ್ನಾಭಿಪ್ರಾಯಗಳಿದ್ದವು. ಭಾಷೆಯೇ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿತ್ತು. ಜನರು ತಮ್ಮ ಭಾಷೆಯ ಮೇಲೆಯೇ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಧರ್ಮದ ತಳಹದಿಯಲ್ಲಿ ತುಂಡಾದ ದೇಶ ಈಗ ಭಾಷೆಯ ಆಧಾರದಲ್ಲಿ ಮತ್ತೊಂದು ವಿಭಜನೆಗೆ ಸಿದ್ದವಾಗುತ್ತಿತ್ತು. ಭಾಷೆ ಈಗ ಸೂಕ್ಷ್ಮ ವಿಚಾರವಾಗಿತ್ತು. ಇಂತಹ ಸಂದಿಗ್ಧ ಸಮಯದಲ್ಲಿ ಮೈಸೂರಿನ Indian Language Institute ನವರು ದ್ರಾವಿಡ ಭಾಷೆಗಳ ಮೂಲದ ಬಗ್ಗೆ ಅಧ್ಯಯನ ಕೈಗೊಂಡಿದ್ದರು.


ಆಗ ಆ ಸಂಸ್ಥೆಯ ಮುಖ್ಯಸ್ಥರಾಗಿದ್ದವರು ಡಾ|| ಆಳಸಿಂಗಾಚಾರ್ಯರು. ಅವರಿಗೆ ಭಾಷೆ ಜನರನ್ನು ಜಗಳಕ್ಕಿಳಿಯುವಂತೆ ಮಾಡಿದುದರ ಬಗ್ಗೆ ಅಪಾರ ಬೇಸರವಿತ್ತು. ದ್ರಾವಿಡ ಭಾಷೆಗಳೆಲ್ಲಾ ಮೂಲತಃ ಒಂದೇ ನೆಲೆಯಿಂದ ಬಂದು ಕಾಲಾಂತರದಲ್ಲಿ ಬೇರೆ ಬೇರೆಯಾದುವುಗಳು ಎಂಬುದು ಅವರ ಅಚಲ ನಂಬಿಕೆ. ಈ ಸಿದ್ದಾಂತವನ್ನು ಪ್ರಾಯೋಗಿಕವಾಗಿ ಸಮರ್ಥಿಸಿಕೊಳ್ಳಲು ಅವರು ಸಂಶೋಧಕರ ಪಡೆಯನ್ನೇ ಕಟ್ಟಿದ್ದರು. ವಿಶ್ವನಾಥನ್ ಈ ವಿಚಾರದ ಕುರಿತು ಆಸಕ್ತಿ ತೋರಿಸಿದಾಗ ಆಳಸಿಂಗಾಚಾರ್ಯರು ಅವರನ್ನು ಆದರದಿಂದ ಮೈಸೂರಿಗೆ ಬರುವಂತೆ ಕೇಳಿಕೊಂಡಿದ್ದರು. ಹೀಗೆ ಒಂದು ಮಹತ್ವದ ಕೆಲಸಕ್ಕೆ ಜನ ತಮಗೆ ಗೊತ್ತಿಲ್ಲದಂತೇ ಒಂದಾಗುತ್ತಿದ್ದರು.


ಆಳಸಿಂಗಾಚಾರ್ಯರು ವಿಶ್ವನಾಥನ್ ಅವರನ್ನು ವೆಂಕಟಸುಬ್ಬಯ್ಯನವರಿಗೆ ಪರಿಚಯಿಸಿದರು. ವೆಂಕಟಸುಬ್ಬಯ್ಯನವರು ಆಗ ಸುಮಾರು ಎಂಬತ್ತು ವರ್ಷದವರಾಗಿದ್ದರೂ ಉತ್ಸಾಹದ ಚಿಲುಮೆಯಾಗಿದ್ದರು. ಹಿಂದೆ ಶ್ರೀಮಹಾರಾಜರ ಆಸ್ಥಾನದಲ್ಲಿದ್ದ ಅವರಿಗೆ ಬಹುಭಾಷಾ ಪಾಂಡಿತ್ಯದ ಜೊತೆಗೆ ಜನಜೀವನ ಅರಿವೂ ಇತ್ತು. ಹಾಗಾಗಿ ಅವರು ಈ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವೆಂಕಟಸುಬ್ಬಯ್ಯನವರು ವಿಶ್ವನಾಥನ್ ರಿಗೆ ಒಂದು ತಾಳೆಗರಿಯನ್ನು ಕೊಟ್ಟು ಅದನ್ನು ಓದಲು ಹೇಳಿದರು. ವಿಶ್ವನಾಥನ್ ರಿಗೆ ಸುಮಾರಾಗಿ ಎಲ್ಲಾ ಪೂರ್ವ ದ್ರಾವಿಡೀಯ ಭಾಷೆಗಳ ಪರಿಚಯ ಇದ್ದರೂ ಅವರಿಗೆ ಅದರಲ್ಲಿದ್ದ ಬರಹವನ್ನು ಓದಲಾಗಲಿಲ್ಲ. ಅದು ಒಂದು ಕಡೆ ತಮಿಳಿನಂತೆ ಕಂಡರೆ ಮತ್ತೆ ಕೆಲವೆಡೆ ಮಲೆಯಾಳಿಯನ್ನು ಹೋಲುತ್ತಿತ್ತು. ಆಶ್ಚರ್ಯಪಟ್ಟುಕೊಂಡ ವಿಶ್ವನಾಥನ್ ರಿಗೆ ವೆಂಕಟಸುಬ್ಬಯ್ಯನವರು ಇದು "ಕೊರಮೆ" ಭಾಷೆಯೆಂದು ತಿಳಿಸಿದರು.


ಇದುವರೆಗೂ ನಾನು ಈ ಭಾಷೆಯ ಬಗ್ಗೆ ಕೇಳಿಲ್ಲವಲ್ಲ? ವಿಶ್ವನಾಥನ್ ರಿಗೆ ಸಂದೇಹವಾಯಿತು. ಮುಂದೆ ಕೊರಮೆ ಭಾಷೆಯ ಬಗ್ಗೆ ವೆಂಕಟಸುಬ್ಬಯ್ಯನವರೂ, ಆಳಸಿಂಗಾಚಾರ್ಯರೂ ತಮಗೆ ಗೊತ್ತಿದ್ದಷ್ಟು ಹೇಳಿದರು. ವಿಶ್ವನಾಥನ್ ರಿಗೆ ಇದನ್ನು ಕೇಳುತ್ತಿದ್ದಂತೆ ತಕ್ಷಣ ಜ್ಞಾಪಕಕ್ಕೆ ಬಂದವರು ಡಾ|| ಆಡಮ್ಸ್. ಕೂಡಲೇ ಆಡಮ್ಸ್ ಅವರಿಗೆ ಕೊರಮೆ ಭಾಷೆಯ ಬಗ್ಗೆ ತಮಗೆ ಸಿಕ್ಕಿದ ಮಾಹಿತಿಯೆಲ್ಲವನ್ನು ಪತ್ರದ ಮೂಲಕ ಬರೆದು ಕಳುಹಿಸಿದರು.


ಕೊರಮೆ ಭಾಷೆ........ಅದು ವಿಚಿತ್ರ ಸಂದರ್ಭದಲ್ಲಿ ಜನರನ್ನು ತನ್ನೆಡೆಗೆ ಸೆಳೆಯುತ್ತಿತ್ತು.


**********************************************************************************************


Mysore 1955


ವಿಶ್ವನಾಥನ್ ಅವರ ಪತ್ರ ಬಂದಾಗಿನಿಂದ ಡಾ|| ಆಡಮ್ಸ್ ಮೈಸೂರಿಗೆ ಬರಲು ಕಾತರರಾಗಿದ್ದರು. ಅವರಿಗೆ ಗೊತ್ತಾಗಿಹೋಗಿತ್ತು - ದ್ರಾವಿಡೀಯ ಭಾಷೆಗಳ ಮೂಲಕ್ಕೆ ತಾವು ಹತ್ತಿರವಾಗುತ್ತೇವೆಂದು. ಅವಸರದಿಂದ ಮೈಸೂರಿಗೆ ಬರಲು ಅವರಿಗೆ ಮನಸ್ಸಿದ್ದರೂ ಕೆಲಸ ಒತ್ತಡದ ಕಾರಣ ಒಂದು ವರ್ಷ ಕಾಯಬೇಕಾಯಿತು. ಈಗ ಡಾ|| ಆಡಮ್ಸ್ ಮೈಸೂರಿಗೆ ಬಂದಿದ್ದಾರೆ. ಬಂದಿಳಿದ ಆಡಮ್ಸ್ ವಿಶ್ವನಾಥನ್ ಜೊತೆಯಲ್ಲಿ ನೇರವಾಗಿ ಹೋಗಿದ್ದು ವೆಂಕಟಸುಬ್ಬಯ್ಯನವರ ಬಳಿ. ವೆಂಕಟಸುಬ್ಬಯ್ಯನವರಿಗೆ ಆಗ ಅನಾರೋಗ್ಯ ಕಾಡುತ್ತಿತ್ತು. ಆದರೂ ತಮಗೆ ಗೊತ್ತಿದ್ದ ವಿಚಾರಗಳನ್ನು ಆಡಮ್ಸ್ ರೊಂದಿಗೆ ಹಂಚಿಕೊಂಡರು. ಅವರಿಗೂ ಕೊರಮೆ ಭಾಷೆಯೊಂದು ಇದೆ ಎಂದು ಗೊತ್ತಿತ್ತಷ್ಟೇ ವಿನಃ ಅದನ್ನು ಓದಲು ಬರುತ್ತಿರಲಿಲ್ಲ. ಆ ಹಸ್ತಪ್ರತಿ ಸುಮಾರು ಒಂದನೇ ಶತಮಾನದಿಂದ ಮೂರನೇ ಶತಮಾನದ ಒಳಗೆ ಬರೆದ್ದೆಂದು ಮಾತ್ರ ಅವರು ಖಡಾಖಂಡಿತವಾಗಿ ಹೇಳಿದರು. ಇದು ಮೂಲ ಪ್ರತಿ ಅಲ್ಲವೆಂದೂ, ಇದು ತೀರಾ ಇನ್ನೂರು ಮುನ್ನೂರು ವರ್ಷದ ಕೆಳಗಡೆ ಮಾಡಿದ ನಕಲು ಪ್ರತಿಯೆಂಬ ತೀರ್ಮಾನಕ್ಕೆ ಅವರೆಲ್ಲಾ ಬಂದಿದ್ದರು. ಆದರೆ ಅದನ್ನು ಓದುವ ಪರಿ ಮಾತ್ರ ಅವರಲ್ಲಿ ಯಾರಿಗೂ ಹೊಳೆಯಲಿಲ್ಲ.


ಆಗ ಅವರ ಸಹಾಯಕ್ಕೆ ಬಂದವನೇ ಮಹಾದೇವ. ಇತ್ತೇಚೆಗೆ ಮೈಸೂರು ಯೂನಿವರ್ಸಿಟಿಯಿಂದ ಇಲ್ಲಿಗೆ ಡೆಪ್ಯುಟೇಶನ್ ಮೇಲೆ ಬಂದಿದ್ದ ಮಹಾದೇವನಿಗೆ ಸಂಶೋಧನೆಗಿಂತ ಬೇರೆ ಕೆಲಸದಲ್ಲೇ ಗಮನ ಹೆಚ್ಚು. "ಕೊರಮೆ" ಎಂಬ ಶಬ್ದ ಕೇಳಿದ ಕೂಡಲೇ ಅವನಿಗೆ ಆಶ್ಚರ್ಯವಾಗಿಹೋಯಿತು. "ಸಾರ್ ಕೊರಮರು ನನಗೆ ಗೊತ್ತು" ಅಂತ ಸ್ವಲ್ಪ ಜೋರಾಗಿಯೇ ಕಿರುಚಿದ. ಅವರಿಗೆಲ್ಲಾ ಆಶ್ಚರ್ಯ. ಇಲ್ಲಿಯವರೆಗೆ ಅವರು ಕೊರಮೆ ಒಂದು ಭಾಷೆ ಮಾತ್ರವೆಂದೇ ತಿಳಿದಿದ್ದರು. ಆದರೆ ಈಗ ಇದೇ ಹೆಸರಿನ ಜನರೂ ಇದ್ದಾರೆ ಅಂದರೆ? ಬಹುಶಃ ಅವರಲ್ಲಿ ಕೆಲವರಿಗಾದರೂ ಈ ಭಾಷೆಯ ಪರಿಚಯವಿರಲೇಬೇಕು. ಹಾಗೆಂದು ಅವರೆಲ್ಲಾ ನಿಶ್ಚಯಿಸಿ ಕುರುಮರು ಯಾರು, ಎಲ್ಲಿದ್ದಾರೆಂದು ತಿಳಿದುಕೊಳ್ಳಲು ಮುಂದಾದರು.


ಮಹದೇವ ಕೊಟ್ಟ ಮಾಹಿತಿ ಪ್ರಕಾರ ಕುರುಮರು ಉತ್ತರ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಕಂಡುಬರುವ ಜನ. ಅವರಲ್ಲಿ ಯಾರೂ ಹೆಚ್ಚಿಗೆ ಓದಿದವರಲ್ಲ. ಹೆಚ್ಚಿನವರು ಗುಂಪಿನಲ್ಲಿ ವಾಸ ಮಾಡಿಕೊಂಡು ಹತ್ತಿರದ ಕಾಡಿನಿಂದಲೇ ತಮ್ಮ ಬದುಕನ್ನು ನಡೆಸಿಕೊಂಡು ಬಂದವರು. ಕೊರಮರು ಅವರದೇ ಭಾಷೆ ಮಾತಾಡುತ್ತಾರಾದರೂ ಅದು ಯಾವ ಭಾಷೆಯೆಂದು ಮಹದೇವನಿಗೆ ತಿಳಿದಿರಲಿಲ್ಲ. ಆಡಮ್ಸ್ ಮತ್ತು ವಿಶ್ವನಾಥನ್ ಅವರನ್ನು ಕುರುಮರ ಬಳಿ ಕರೆದೊಯ್ಯಲು ಮಹದೇವ ಸಿದ್ದನಿದ್ದ. ಮೊದಮೊದಲು ಆಡಮ್ಸ್ ಅವರಿಗೆ ಈ ಥಿಯರಿಯ ಮೇಲೆ ನಂಬಿಕೆ ಬರಲಿಲ್ಲ. ಮಹದೇವ ಕೊಟ್ಟ ಮಾಹಿತಿ ಪ್ರಕಾರ ಕೊರಮರು ಗುಡ್ಡಗಾಡು ಪ್ರದೇಶದವರಂತೆ ತೋರುತ್ತಿದ್ದರು. ಅವರ ಪೂರ್ವಿಕರು ತಮ್ಮದೇ ಭಾಷೆ ಬೆಳೆಸಿ ಅದಕ್ಕೆ ಲಿಪಿಯನ್ನೂ ಮಾಡಿ ಗ್ರಂಥಗಳನ್ನೂ ಬರೆದಿದ್ದರೆ ಕೆಲವಾದರೂ ಗ್ರಂಥಗಳು ಈಗ ಚಾಲ್ತಿಯಲ್ಲಿ ಇರಬೇಕಿತ್ತು. ಆದರೆ ಕೊರಮೆ ಭಾಷೆಯದ್ದು ಎನ್ನಲಾದ ಯಾವ ಕೃತಿಯೂ ಈವರೆಗೆ ಲಭ್ಯವಿರಲಿಲ್ಲ. ಹಾಗಾದರೆ ಕೊರಮೆ ಭಾಷೆಯೆಂಬುದು ಒಂದಿತ್ತೇ? ಇದ್ದರೆ ಅದು ಈವರೆಗೆ ಯಾಕೆ ಯಾರಿಗೂ ತಿಳಿದಿಲ್ಲ? - ಈ ಎಲ್ಲಾ ಪ್ರಶ್ನೆಗಳಿದ್ದರೂ ಡಾ||ಆಡಮ್ಸ್ ಮಹದೇವನೊಂದಿಗೆ ತೆರಳಲು ಸಿದ್ದವಾದರು.


ಸಿರ್ಸಿ, ಯಲ್ಲಾಪುರ ಸುತ್ತಮುತ್ತ ಸುತ್ತಿದರೂ ಡಾ|| ಆಡಮ್ಸ್ ಅವರಿಗೆ ಏನೂ ವಿಶೇಷ ಮಾಹಿತಿ ಸಿಗಲಿಲ್ಲ. ವಿಷಯ ಸಂಗ್ರಹಣೆಗೆ ಮುಖ್ಯ ತೊಡಕೆಂದರೆ ಭಾಷೆ, ಮತ್ತೊಂದು ಮಹದೇವ. ಕುರುಮರು ಮಾತಾಡುತ್ತಿದ್ದ ಭಾಷೆ ಇವರಿಗೆ ಅರ್ಥವೇ ಆಗುತ್ತಿರಲಿಲ್ಲ. ಈ ಮಧ್ಯದಲ್ಲಿ ಮಹದೇವ ಆಡಮ್ಸ್ ಅವರಿಂದ ಆದಷ್ಟು ಹಣ ಪೀಕಿಸುವುದರಲ್ಲೇ ಹೆಚ್ಚು ಆಸಕ್ತಿ ಹೊಂದಿದ್ದ. ಆದರೂ ಡಾ||ಆಡಮ್ಸ್ ಇದೆಲ್ಲವನ್ನೂ ಸಹಿಸಿಕೊಂಡು ಹೇಗೋ ಆದಷ್ಟು ಮಾಹಿತಿ ಕಲೆಹಾಕಿದರು. ಅವರಿಗೆ ದೊರೆತ ಮುಖ್ಯ ಮಾಹಿತಿಯೆಂದರೆ ಅವರ ಜನಾಂಗದ ಒಬ್ಬ ವ್ಯಕ್ತಿ ಮೆಟ್ರಿಕ್ ಓದಿ ಧಾರವಾಡದಲ್ಲಿ ಕೆಲಸದಲ್ಲಿ ಇದ್ದಾನೆ ಎಂಬುದು. ಮಹಾದೇವನ ಅವ್ಯವಸ್ಥೆಯಿಂದ ರೇಗಿಹೋಗಿದ್ದ ಆಡಮ್ಸ್ ಅವರು ವಿಶ್ವನಾಥನ್ ನನ್ನು ಧಾರವಾಡಕ್ಕೆ ಕಳಿಸಿ ಆ ವ್ಯಕ್ತಿಯನ್ನು ಕರೆದುಕೊಂಡು ಬರುವಂತೆ ಹೇಳಿದರು. ಮಾಲಿಂಗ ಎಂಬ ಹೆಸರಿನ ಆ ಕೊರಮ ಬಂದ ಮೇಲೆ ಆಡಮ್ಸ್ ಅವರ ಸಂಶೋಧನೆಗೆ ಬಹಳ ಸಹಾಯವಾಯಿತು. ಕನ್ನಡದ ಜೊತೆಗೆ ಸ್ವಲ್ಪ ಇಂಗ್ಲೀಷ್ ಕೂಡ ಬರುತ್ತಿದ್ದ ಮಾಲಿಂಗ ಬಂದೊಡನೆ ಅವರು ಮಹಾದೇವನನ್ನು ಮೈಸೂರಿಗೆ ಕಳಿಸಿಬಿಟ್ಟರು.


ಮಾಲಿಂಗನ ಮೂಲಕ ಕೊರಮರ ಜೊತೆ ಸಂಪರ್ಕ ಆಡಮ್ಸ್ ಅವರಿಗೆ ಸಲೀಸಾಗಿ ಹೋಯಿತು. ಅವರ ಮಾತಿನ ಮೂಲಕ ಅವರಿಗೆ ತಿಳಿದದ್ದೇನೆಂದರೆ ಅವರು ತಮ್ಮನ್ನು ದೇವಿಯ ಮಕ್ಕಳೆಂದು ನಂಬಿದ್ದರು. ತಮ್ಮ ಜನಾಂಗ ಜನರನ್ನು ಬಿಟ್ಟು ಬೇರೆಯವರ ಸಹವಾಸ ಹೆಚ್ಚಾಗಿ ಮಾಡದ ಅವರ ಮಾತಿನಲ್ಲಿ ದಕ್ಷಿಣದ ಅಷ್ಟೂ ಭಾಷೆಗಳ ಕೆಲವು ಪದಗಳನ್ನು ಅವರು ಗಮನಿಸಿದ್ದರು. ಆದರೆ ಅವರಿಗೆ ತಮ್ಮ ಭಾಷೆಗೆ ಲಿಪಿ ಇದೆಯೇ ಎಂದು ತಿಳಿದಿರಲಿಲ್ಲ. ಅವರಿಗೆ ಬರಹದ ವಿಷಯ ತೀರಾ ಪರಕೀಯವಾಗಿತ್ತು. ಆದರೆ ಮಾಲಿಂಗನ ಮೂಲಕ ತಿಳಿದ ವಿಷಯವೆಂದರೆ ಅವರ ಮುಖ್ಯನ ಮನೆಯಲ್ಲಿ ಒಂದು ಪೆಟ್ಟಿಗೆ ಇತ್ತು. ಅದರಲ್ಲಿ ಕೆಲವು ಪುಸ್ತಕಗಳನ್ನು ನೋಡಿದ ನೆನೆಪು ಅವನಿಗಿತ್ತು. ಎಷ್ಟು ಒತ್ತಾಯ ಮಾಡಿದರೂ ಮುಖ್ಯ ಆ ಪೆಟ್ಟಿಗೆಯನ್ನು ಇವರಿಗೆ ಕೊಡಲು ಒಪ್ಪಲಿಲ್ಲ. ತನ್ನ ಅಜ್ಜನ ಕಾಲದಿಂದ ಯಾರೂ ಬಿಚ್ಚದಿದ್ದ ಪೆಟ್ಟಿಗೆಯನ್ನು ಅವನೂ ಕೂಡ ಬಿಚ್ಚಲು ತಯಾರಿರಲಿಲ್ಲ. ಕೊನೆಗೆ ಪೋಲೀಸು, ಅದೂ ಇದೂ ಅಂತ ಹೆದರಿಸಿ ಅವನಿಂದ ಬಲವಂತವಾಗಿಯೇ ಇವರು ಪೆಟ್ಟಿಗೆಯನ್ನು ತೆಗೆದುಕೊಂಡದ್ದಾಯ್ತು. ಆಡಮ್ಸ್ ಅವರಿಗೆ ಇದರಿಂದ ಬೇಸರವಾದರೂ, ತಾವು ಸಮಾಜದ ಒಟ್ಟು ಸಹಾಯಕ್ಕೆ ಈ ಸಂಶೋಧನೆ ಮಾಡುತ್ತಿರುವುದರಿಂದ ಇಂತಹ ಕೃತ್ಯದಿಂದ ತಪ್ಪೇನೂ ಆಗುವುದಿಲ್ಲವೆಂದು ತಮಗೆ ತಾವೇ ಸಮಾಧಾನ ಪಟ್ಟುಕೊಂಡರು.


ಪೆಟ್ಟಿಗೆಯನ್ನು ತೆಗೆದು ನೋಡಿದರೆ ಅದರಲ್ಲಿ ಹತ್ತೊಂಬತ್ತನೇ ಶತಮಾನದು ಅನ್ನಬಹುದಾದಂತಹ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳಿದ್ದವು. ಡಾ||ಆಡಮ್ಸ್ ಅವರಿಗೆ ಇದು ಯಾವುದೋ ಬ್ರಿಟಿಶನ ವಸ್ತುಗಳೆಂದು ಕೂಡಲೇ ಖಚಿತವಾಗಿಹೋಯಿತು. ಅದರಲ್ಲಿ ಸಿಕ್ಕಿದ ಪುಸ್ತಕ ಅವರು ಅಂದುಕೊಂಡಂತೆ ಒಬ್ಬ ಕ್ರೈಸ್ತ ಪಾದ್ರಿಯ ದಿನಚರಿಯಾಗಿತ್ತು. ಹತ್ತೊಂಬತ್ತನೇ ಶತಮಾನದ ಆದಿಯಲ್ಲಿ ಇಲ್ಲಿಗೆ ಕಾಲಿಟ್ಟಿದ್ದ ಆ ಪಾದ್ರಿ ಕೊರಮರನ್ನು ಕ್ರೈಸ್ತ ಮತಕ್ಕೆ ಮತಾಂತರಿಸಲು ಬಂದಿದ್ದ. ಇಲ್ಲಿನ ಕೊರಮರನ್ನು ಅರ್ಥಮಾಡಿಕೊಳ್ಳಲು ಇವರ ನಡುವೆಯೇ ಬಹಳ ಸಮಯವನ್ನು ಕಳೆದ ಅವನು ಕೊನೆಗೆ ಕೊರಮೆ ಭಾಷೆಯನ್ನು ಕೂಡ ಕಲಿತುಕೊಂಡುಬಿಟ್ಟಿದ್ದ. ಅವರ ವಿಶ್ವಾಸ ಗಳಿಸಲು ಅವರ ಹುಡುಗಿಯೊಬ್ಬಳನ್ನು ಮದುವೆ ಆಗಿಯೂ ಇದ್ದ. ಆದರೆ ಇದಕ್ಕಿಂತೆಲ್ಲಾ ಮಹತ್ವದ ವಿಚಾರವನ್ನು ಅವನು ಬರೆದಿದ್ದ.


ಪಾದ್ರಿಗೆ ಬೈಬಲನ್ನು ಕೊರಮರಿಗೆ ತಲುಪಿಸಬೇಕೆಂದು ಬಹಳ ಆಸೆ ಇತ್ತು. ಆದರೆ ಆಗಲೂ ಕೊರಮರರಿಗೆ ಲಿಪಿ ಜ್ಞಾನ ಇರಲಿಲ್ಲ. ಹಾಗಾಗಿ ಕೊರಮಿ ಭಾಷೆಗೆ ಹೊಸ ಲಿಪಿಯೊಂದನ್ನು ಸಿದ್ದಪಡಿಸಲು ಸಹಾಯ ಕೋರಿ ಕಂಪೆನಿ ಸರಕಾರಕ್ಕೆ ಅರ್ಜಿ ಹಾಕಿದ್ದ. ಕಂಪೆನಿ ಸರಕಾರ ಪಾದ್ರಿಯ ಸಹಾಯಕ್ಕೆ ಇಂಗ್ಲೆಂಡಿನಿಂದ ಕೆಲವು ವಿದ್ವಾಂಸರನ್ನು ಕರೆಸಿ ಕೊಟ್ಟಿತ್ತು. ಅವರು ಕೊರಮೆ ಭಾಷೆಯನ್ನು ಕೇಳಿ ಅದನ್ನು ಅಭ್ಯಾಸ ಮಾಡಿದರು. ನಂತರ ಒಕ್ಕೊರಲಿನಿಂದ ಹೇಳಿದ ಮಾತೆಂದರೆ - ಕೊರಮೆ ಒಂದು ಶಾಸ್ತ್ರೀಯ ಭಾಷೆ. ಬಹಳ ಶಿಸ್ತುಬದ್ದವಾದ ಲಕ್ಷಣಗಳುಳ್ಳ ಈ ಭಾಷೆಗೆ ಲಿಪಿ ಇಲ್ಲದೇ ಇರಲು ಸಾಧ್ಯವಿಲ್ಲ. ಈ ಭಾಷೆಗೆ ಒಂದು ಲಕ್ಷಣ ಗ್ರಂಥ ಇದ್ದೇ ಇದೆ. ಮತ್ತು ಅದನ್ನು ಈಗ ಪತ್ತೆ ಹಚ್ಚಬೇಕಿದೆ. ಪಾದ್ರಿಯ ಪ್ರಕಾರ ಅಂತಹ ಪ್ರಯತ್ನ ಆಗ ನಡೆಯಿತಾದರೂ ಅಂತಹಾ ಯಾವುದೇ ಗ್ರಂಥ ಅವರಿಗೆ ಸಿಗಲಿಲ್ಲ. ಕೊನೆಗೆ ಪಾದ್ರಿ ಕನ್ನಡ ಲಿಪಿಯನ್ನೇ ಬಳಸಿ ಬೈಬಲನ್ನು ಕೊರಮೆ ಭಾಷೆಗೆ ಅನುವಾದಿಸಲು ನೋಡಿದ. ಅವನೇ ಹೇಳಿದ ಪ್ರಕಾರ ಅವನಿಗೆ ಈ ಕೆಲಸ ಪೂರ್ತಿ ಮಾಡಲು ಆಗಲಿಲ್ಲ. ಪದೇ ಪದೇ ಕಾಡುತ್ತಿದ್ದ ಜ್ವರ ಅವನನ್ನು ಕೊರಮರ ಹಳ್ಳಿಯಿಂದ ದೂರ ಹೋಗುವಂತೆ ಮಾಡಿತ್ತು.


ದಿನಚರಿ ಓದಿ ಮುಗಿಸಿದ ಮೇಲೆ ಆಡಮ್ಸ್ ಅವರಿಗೆ ಬಂದ ಮೊದಲ ಪ್ರಶ್ನೆ ಅಂದರೆ ಈ ಪುಸ್ತಕ ಕೊರಮರ ಕೈ ಸೇರಿದ್ದು ಹೇಗೆ. ವಿಶ್ವನಾಥನ್ ಇದಕ್ಕೆ ಬಹುಶಃ ಪಾದ್ರಿ ಹೋಗುವಾಗ ಇವರಿಗೇ ಅದನ್ನು ಕೊಟ್ಟು ಹೋಗಿರಬೇಕು ಅಂತ ಹೇಳಿದ. ಆದರೆ ಆಡಮ್ಸ್ ಅವರಿಗೆ ಇದನ್ನು ನಂಬಲಾಗಲಿಲ್ಲ. ಇಂಗ್ಲಿಷ್ ಜನ ದಿನಚರಿಯನ್ನು ಯಾರಿಗೂ ಕೊಡುವುದಿಲ್ಲ. ಕೆಲವರು ತಮ್ಮ ದಿನಚರಿಯನ್ನು ತಾವು ಸತ್ತ ಮೇಲೆ ಕೂಡ ಇಂತವರು ಮಾತ್ರ ಓದಬೇಕೆನ್ನುವ ಮಾತು ಬರೆದಿರುತ್ತಾರೆ. ಹಾಗಿರುವಾಗ ಇಂಗ್ಲಿಷ್ ಗೊತ್ತಿಲ್ಲದ ಕೊರಮರ ಬಳಿ ದಿನಚರಿ ಬಿಟ್ಟುಹೋಗಲು ಕಾರಣವೇ ಇಲ್ಲ ಎಂದು ವಾದಿಸಿದರು. ಹಾಗಾದರೆ ಇದು ಹೇಗೆ ಇಲ್ಲಿಗೆ ಬಂತು. ಇದಕ್ಕೆ ಆಡಮ್ಸ್ ಅವರು - ಇದು ಮುಖ್ಯ ವಿಷಯವಲ್ಲ, ಈಗ ತುರ್ತಾಗಿ ಆ ಲಕ್ಷಣ ಗ್ರಂಥವನ್ನೂ ಮತ್ತು ಸಾಧ್ಯವಾದರೆ ಪಾದ್ರಿ ಅರ್ಧದಲ್ಲಿಯೇ ನಿಲ್ಲಿಸಿದ ಬೈಬಲ್ಲಿನ ಪ್ರತಿಯನ್ನು ಸಂಪಾದಿಸಬೇಕು ಅಂದರು. ಹಾಗಾಗಿ ಅವರೆಲ್ಲಾ ಮತ್ತೆ ಮೈಸೂರಿಗೇ ವಾಪಸ್ ಬಂದರು.


ಮೈಸೂರಿಗೆ ಬಂದ ಆಡಮ್ಸ್ ಅವರಿಗೆ ಆಳಸಿಂಗಾಚಾರ್ಯರು ಇನ್ನೊಂದು ಸಂತೋಷದ ವಿಷಯ ಹೇಳುವವರಿದ್ದರು. ಅದೇನೆಂದರೆ ಅವರ ಕೈಕೆಳಗೆ ಹಳೆಗನ್ನಡ ಕಾವ್ಯದಲ್ಲಿನ ಭಾಷಾ ಪ್ರಯೋಗದ ಮೇಲೆ ಸಂಶೋಧನೆ ಮಾಡುವ ವಿದ್ಯಾರ್ಥಿಯೊಬ್ಬ ಹೊಸ ವಿಷಯವೊಂದನ್ನು ಹೊರಗೆಡವಿದ್ದ. ರಾಘವಾಂಕನ ಸಮಕಾಲಿಕನಾದ ವಿಜಯಧ್ವಜನೆಂಬುವವನು ತನನ್ನು ತಾನು ಚಿರೂರವನ ಮಗನೆಂದು ಹೇಳಿಕೊಂಡಿದ್ದ. ಯಾರೀ ಚಿರೂರವ? ಅಂತ ಹಳೇ ಕೃತಿಗಳನ್ನೆಲ್ಲಾ ಹುಡುಕುತ್ತಿದ್ದಾಗ ಅವನಿಗೆ ಚಿರೂರವ ಎಂಬ ವ್ಯಕ್ತಿಯ ವಿರಾಟ್ ಸ್ವರೂಪದ ದರ್ಶನವಾಗತೊಡಗಿತು. ಅದನ್ನು ಬಂದು ಆಳಸಿಂಗಾಚಾರ್ಯರ ಬಳಿ ಅವನು ಹೇಳಿದಾಗ ನಿಶ್ಚಯವಾಗಿ ಇವನೇ ಕೊರಮೆ ಭಾಷೆಯ ಕಾರಣೀಪುರುಷ ಎಂದು ಅವರಿಗೆ ಅರಿವಾಯಿತು. ಈಗ ಅವರು ತಮ್ಮ ಶಿಷ್ಯ ಹೊರತೆಗೆದ ಕತೆಯನ್ನು ಆಡಮ್ಸ್ ಅವರಿಗೆ ಹೇಳಲು ಶುರುಮಾಡಿದರು.


***********************************************************************************************


ಬಿಂಬಾಪುರ
2 BC


ಶಾತವಾಹನರು ತಮ್ಮ ಆಳ್ವಿಕೆಯಲ್ಲಿ ಕಲೆ, ಸಂಸ್ಕೃತಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದ ಕಾಲ. ಸಂಸ್ಕೃತ ದ ಪ್ರಭಾವದಿಂದ ಹೊರಬಂದು ಪ್ರಾಕೃತಿ ತನ್ನದೇ ಛಾಪನ್ನು ಜನರ ಮೇಲೆ ಒತ್ತಿತ್ತು. ಅಶೋಕನ ಕಾಲದಿಂದ ಅದಕ್ಕೆ ರಾಜಾಶ್ರಯವೂ ಸಿಕ್ಕಿ ಸಂಸ್ಕೃತದ ಪ್ರಭಾವ ದಕ್ಷಿಣದಲ್ಲಿ ಕಡಿಮೆಯಾಗತೊಡಗಿತು. ಸಂಸ್ಕೃತವನ್ನು ಉಪಯೋಗಿಸುತ್ತಿದ್ದವರೂ ಅದನ್ನು ಬೇರೆ ಬೇರೆ ಪ್ರಕಾರದಲ್ಲಿ ತಮತಮಗೆ ಬೇಕಾದ ಹಾಗೆ ಬದಲಿಸಿ ಉಪಯೋಗಿಸುತ್ತಿದ್ದರು. ಆಗ ಪ್ರಾಕೃತ ಭಾಷೆಯ ಪ್ರಮಾಣಕರ್ತನೆಂದೇ ಪ್ರಸಿದ್ದನಾಗಿದ್ದವನು ಚಿರೂರವ. ಜನಸಾಮಾನ್ಯರಿಗೆ ಸಂಸ್ಕೃತದ ಕಟ್ಟುಪಾಡುಗಳು ಬಹಳ ಕಷ್ಟವೆಂದು ಬಲವಾಗಿ ನಂಬಿದ್ದ ಅವನಿಗೆ ನೇರವಾಗಿ, ಸರಳವಾಗಿ ವಿಷಯವನ್ನು ತಿಳಿಸಲು ನೆರವಾಗುವ ಪಾಕೃತಿ ಭಾಷೆಯ ಮೇಲೆ ಅಪಾರ ಒಲವು. ತನ್ನ ಅಪಾರ ಶಿಷ್ಯವೃಂದದ ನೆರವಿನಿಂದ ಪ್ರಾಕೃತಿಯನ್ನು ರಾಜ್ಯದ ಮೂಲೆಮೂಲೆಯಲ್ಲೂ ಜನರು ಬಳಸುವಂತೆ ಮಾಡಿದ.


ಅವನ ಶಿಷ್ಯವರ್ಗದಲ್ಲಿ ನಾಣಿಪನೆಂಬ ಬ್ರಾಹ್ಮಣನೊಬ್ಬನಿದ್ದ. ಎಷ್ಟು ಹೇಳಿದರೂ ವಿದ್ಯೆ ತಲೆಗೆ ಹತ್ತದ ಅವನನ್ನು ಚಿರೂರವ ಕೊನೆಗೆ ಆಶ್ರಮ ಬಿಟ್ಟು ಓಡಿಸಿಬಿಟ್ಟ. ನಾಣಿಪ ದಡ್ಡನಾದರೂ ಛಲಗಾರ. ತನ್ನ ಇಷ್ಟದೇವನಾದ ಶಿವನನ್ನು ಕುರಿತು ತಪಸ್ಸು ಮಾಡಿ ಅವನನ್ನು ಸಾಕ್ಷಾತ್ಕರಿಸಿಕೊಂಡ. ಶಿವನು ಅವನಿಗೆ ಸಂಪೂರ್ಣ ಭಾಷಾ ಭಂಡಾರವನ್ನು ವರವಾಗಿ ನೀಡಿದ. ತಪಸ್ಸಿನ ಫಲದೊಂದಿಗೆ ಊರಿಗೆ ಮರಳಿದ ನಾಣಿಪ ಮಾಡಿದ ಮೊದಲ ಕೆಲಸವೆಂದರೆ ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸುತ್ತಿದ್ದ ಸಂಸ್ಕೃತವನ್ನು ಒಂದೇ ಸೂತ್ರದಲ್ಲಿ ಬಂಧಿಸಿದ್ದು. ಅವನು ಬರೆದ ವ್ಯಾಕರಣ ಸೂತ್ರಗಳು, ಭಾಷಾ ನಿಯಮಾವಳಿಗಳೂ, ಶಬ್ಧಾರ್ಥ ಕೋಶಗಳೂ ಹಿಂದೆಂದೂ ಯಾರೂ ಯಾವ ಭಾಷೆಗೂ ಬರೆದಿರಲಿಲ್ಲ. ಅವನೊಬ್ಬನ ಕೆಲಸದಿಂದ ಸಂಸ್ಕೃತಕ್ಕೆ ಹೊಸಜೀವ ಬಂದಂತಾಯ್ತು. ಜನ ಮತ್ತೆ ಸಂಸ್ಕೃತದೆಡೆಗೆ ಆಕರ್ಷಿತರಾಗತೊಡಗಿದ್ದರು.


ಇದರಿಂದ ಬಹಳ ವಿಚಲಿತನಾದವನೆಂದರೆ ಚಿರೂರವ. ತಾನೇ ಅಪ್ರಯೋಜಕನೆಂದು ಬಯ್ದು ಕಳಿಸಿದ ತನ್ನ ಶಿಷ್ಯನೊಬ್ಬ ಹೀಗೆ ತನಗೆ ಎದುರಾಳಿಯಾಗಿ ನಿಂತರೆ ಗುರುವಾದ ಅವನು ಏನು ತಾನೇ ಮಾಡಬೇಕು? ಉಟ್ಟಬಟ್ಟೆಯಲ್ಲಿಯೇ ದೇಶಬಿಟ್ಟು ಹೊರಟ ಚಿರೂರವ ಕಾಡಿನಲ್ಲಿ ಕುಳಿತು ದೀರ್ಘಕಾಲ ನಾಣಿಪನ ಗ್ರಂಥಗಳನ್ನು ಅಧ್ಯಯನ ಮಾಡಿದ. ಅದೊಂದು ನಿರಂತರ ಧ್ಯಾನವೆಂಬಂತೆ ಕಾಲದ ಪರಿವೇ ಇಲ್ಲದೆ ಗ್ರಂಥದ ಪದ-ಪದವನ್ನೂ ತನ್ನ ಚಿಕಿತ್ಸಕ ಬುದ್ದಿಯಿಂದ ತೂಗಿ ಅದರಲ್ಲಿನ ತಪ್ಪುಗಳನ್ನು ಕಂಡುಹುಡುಕುತ್ತಿದ್ದ. ಬಹಳ ವರ್ಷಗಳ ನಂತರ ಅವನು ನಾಣಿಪನ ಗ್ರಂಥದಲ್ಲಿನ ಮೂಲ ಸತ್ವವನ್ನೇ ಪ್ರಶ್ನಿಸುವಷ್ಟರ ಮಟ್ಟಿಗೆ ಅದನ್ನು ಅರ್ಥಮಾಡಿಕೊಂಡು ಬಿಟ್ಟಿದ್ದ. ಇನ್ನು ತಾನು ಊರಿಗೆ ಹೋಗಿ ನಾಣಿಪನ್ನು ಚರ್ಚೆಗೆ ಆಹ್ವಾನಿಸುವುದೆಂದು ನಿರ್ಧರಿಸಿದ ಅವನಿಗೆ ಇದ್ದಕ್ಕಿದ್ದಂತೆ ಬೇರೆ ಆಲೋಚನೆಯೊಂದು ಹೊಳೆಯಿತು.


ಈಗ ತಾನು ನಾಣಿಪನನ್ನು ಚರ್ಚೆಗೆ ಕರೆದರೆ ಅವನೂ ಪ್ರಾಕೃತಿಯ ದೋಷಗಳನ್ನು ಎತ್ತಿಹಿಡಿಯುತ್ತಾನೆ. ಪ್ರಾಕೃತಿ ಸರಳತೆಗೆ ಹೆಚ್ಚು ಒತ್ತುಕೊಟ್ಟ ಭಾಷೆಯಾದ್ದರಿಂದ ಅದರಲ್ಲಿ ಸಹಜವಾಗಿ ಕೆಲವೊಂದು ಭಾಷಾ ನಿಯಮಾವಳಿಗಳನ್ನು ಸಡಿಸಲಾಗಿತ್ತು. ಹಾಗಾಗಿ ಪ್ರಾಕೃತಿಗೆ ಸಂಸ್ಕೃತದಷ್ಟು ಗಟ್ಟಿಯಾದ ನಿಯಮಗಳ ಬುನಾದಿಯಿರಲಿಲ್ಲ. ಈಗ ಚಿರೂರವನ ಮುಂದೆ ಎರಡು ದಾರಿಗಳಿದ್ದವು. ಒಂದು - ಪ್ರಾಕೃತಿಗೇ ಪ್ರತ್ಯೇಕವಾಗಿ ಭಾಷಾಸೂತ್ರಗಳನ್ನು ಬರೆಯಬೇಕು. ಆದರೆ ಹಾಗೆ ಮಾಡಲು ಹೋದರೆ ಪ್ರಾಕೃತಿಯ ಸರಳತೆ ಮತ್ತು ಮೂಲಸ್ವರೂಪಕ್ಕೇ ದಕ್ಕೆ ಬರುವ ಸಾಧ್ಯತೆ ಇತ್ತು. ಹಾಗಾಗಿ ಚಿರೂರವ ಎರಡನೆಯ ದಾರಿ ಕಂಡುಕೊಂಡ. ಅದೆಂದರೆ ಪ್ರಾಕೃತಿಯ ಸರಳತೆಯನ್ನು ಉಳಿಸಿಕೊಂಡು ಆದರೆ ಸಂಸ್ಕೃತದ ಶಿಷ್ಟತೆಯನ್ನೂ ಜೊತೆಗೂಡಿಸಿ ಹೊಸದೊಂದು ಭಾಷೆಯನ್ನು ಅದಕ್ಕೆ ತಕ್ಕನಾದ ಹೊಸ ಲಿಪಿಯೊಂದನ್ನು ಸಿದ್ದಪಡಿಸುವುದು.


ಇಂತಹ ಒಂದು ಭಾಷೆ ಸಂಸ್ಕೃತದ ಪ್ರಭಾವವನ್ನು ಸಮರ್ಥವಾಗಿ ಎದುರಿಸಬಲ್ಲದು ಮತ್ತು ಜನರಿಗೂ ಪ್ರಿಯವಾಗಬಲ್ಲದು ಎಂಬುದರಲ್ಲಿ ಯಾವ ಸಂಶಯವೂ ಇರಲಿಲ್ಲ. ತನ್ನ ಜೀವನದ ಎಲ್ಲಾ ಅನುಭವವನ್ನು ಧಾರೆಯೆರೆದು ಚಿರೂರವ ಹೊಸ ಭಾಷೆಯೊಂದರ ಹುಟ್ಟಿನಲ್ಲಿ ತೊಡಗಿದ. ಅವನ ಜೀವನದ ಅಂತಿಮಕಾಲದಲ್ಲಿ ಅವನು ಸಿದ್ದಪಡಿಸಿದ ಹೊಸ ಭಾಷೆ ಬಿಂಬಾಪುರ ಮತ್ತು ಸುತ್ತಮುತ್ತ ಚಾಲನೆಯಲ್ಲಿತ್ತು. ವಿದ್ವಜ್ಜನರು ಆ ಭಾಷೆಯನ್ನು ಬಹಳವಾಗಿ ಕೊಂಡಾಡುತ್ತಿದ್ದರು. ನಾಣಿಪನೇ ಸ್ವತಃ ತನ್ನ ಮಹಾಕಾವ್ಯವನ್ನು ಈ ಭಾಷೆಯಲ್ಲಿ ಬರೆದ್ದಾನೆಂದು ನಂತರದ ದಿನಗಳಲ್ಲಿ ದಂತಕತೆಯಾಗಿ ಬೆಳೆಯಿತು.


****************************************************************************************


Mysore 1955


ಆಳಸಿಂಗಾಚಾರ್ಯರ ಪ್ರಕಾರ ಈ ಚಿರೂರವ ರಚಿಸಿದ ಹೊಸ ಭಾಷೆಯೇ ಈಗ ಇವರು ಹುಡುಕುತ್ತಿರುವ ಕೊರಮೆ ಭಾಷೆ. ಕಾಲಘಟ್ಟದ ಲೆಕ್ಕದಲ್ಲೂ ಇದು ತಾಳೆ ಆಗುತ್ತಿತ್ತು. ಅವರ ಪ್ರಕಾರ ಆಗಿನ ಬಿಂಬಾಪುರವೇ ನಂತರ ಕದಂಬರ ಬನವಾಸಿಯಾಯಿತು. ಕ್ರಿ.ಪೂ. ೩ನೇ ಶತಮಾನದ್ದು ಎಂದು ಹೇಳಲಾದ ಪ್ರಾಕೃತಿ ಭಾಷೆಯ ಶಾಸನವೊಂದು ಅಲ್ಲಿ ಸಿಕ್ಕಿತ್ತು. ಮತ್ತೆ ಕ್ರಿ.ಶ. ೩೨೫ ರ ಸುಮಾರಿಗೆ ಕದಂಬರು ಅಲ್ಲಿ ರಾಜ್ಯಸ್ಥಾಪನೆ ಮಾಡಿದ ಮೇಲೆ ಕನ್ನಡ ಸ್ವತಂತ್ರವಾಗಿ ಬೆಳೆಯಿತು. ಅಂದರೆ ಕ್ರಿ.ಪೂ ೪ನೇ ಶತಮಾನದಿಂದ ಆ ಪ್ರದೇಶದಲ್ಲಿ ಆಳಿದ ಶಾತವಾಹನರ ಕಾಲದಲ್ಲಿ ಜೀವ ತಳೆದ ಈ ಭಾಷೆ ನಂತರದ ೪ ಶತಮಾನಗಳ ಬಳಿಕ ಚೂರುಚೂರಾಗಿ ಹೋಗಿದೆ.


ಡಾ||ಆಡಮ್ಸ್ ಅವರಿಗೆ ಈಗ ಎಲ್ಲಾ ವಿಷಯ ಸ್ವಷ್ಟವಾಗತೊಡಗಿತು. ಬ್ರಿಟಿಷ್ ಪಾದ್ರಿಯ ಆ ಹೊತ್ತಿನಲ್ಲಿ ಊಹಿಸಿದಂತೆ ಕೊರಮೆ ಭಾಷೆಗೆ ಶಾಸ್ತ್ರೀಯ ಬುನಾದಿಯಿತ್ತು, ಮತ್ತು ಅದಕ್ಕೆ ಕಾರಣವೂ ಸ್ವಷ್ಠವಾಗಿತ್ತು. ವಿಶ್ವನಾಥನ್ ಆಗ ಒಂದು ಮಹತ್ವದ ಪ್ರಶ್ನೆ ಮುಂದಿಟ್ಟರು. ಕೊರಮೆ ಭಾಷೆ ಅಷ್ಟೊಂದು ವೈಭವದಿಂದ ಮೆರೆದಿದ್ದರೆ ಈ ಭಾಷೆಯ ಒಂದು ಕೃತಿಯೂ ಈಗ ಯಾಕೆ ಲಭ್ಯವಿಲ್ಲ? ಅದಕ್ಕೆ ಆಡಮ್ಸ್ ಅವರೇ ಸಮಾಧಾನ ಹೇಳಿದರು - ಹಿಂದೆಲ್ಲಾ ಒಂದು ಭಾಷೆಯ ಹುಟ್ಟು ಮತ್ತು ಸಾವು ರಾಜಾಶ್ರಯದ ಮೇಲೆ ಅವಲಂಬಿತವಾಗಿತ್ತು. ಒಂದು ರಾಜ್ಯದವರು ಇನ್ನೊಂದು ರಾಜ್ಯದ ಮೇಲೆ ದಂಡೆತ್ತಿ ಹೋಗಿ ಅದನ್ನು ಗೆದ್ದರೆ, ಆ ರಾಜ್ಯದ ಸಂಪತ್ತನ್ನು ಲೂಟಿ ಮಾಡುವುದರ ಜೊತೆಗೆ ಅಲ್ಲಿನ ಜನರ ಭಾಷೆ, ಧರ್ಮ, ಸಂಸ್ಕೃತಿಯನ್ನು ನಾಶಮಾಡುವುದು ಇತಿಹಾಸದಲ್ಲಿ ಯಾವತ್ತೂ ಕಂಡುಬರುವ ವಿಚಾರ. ಇಲ್ಲೂ ಹಾಗೇ ಆಗಿದೆ. ಇಲ್ಲಿ ಕದಂಬರು ಪ್ರಾಬಲ್ಯಕ್ಕೆ ಬರುವ ಹೊತ್ತಿನಲ್ಲಿ ಆಚೆ ಪಲ್ಲವರು ತಮ್ಮದೇ ಭಾಷೆಯ ಮೂಲಕ ಮೈಯಕ್ತಿಕತೆಯನ್ನು ಪ್ರತಿಪಾದಿಸುತ್ತಿದ್ದರು. ಇಬ್ಬರಿಗೂ ಆಗ ಕೊರಮೆ ಬೇಡವಾಗಿತ್ತು ಮತ್ತು ಸಮಾನ ಶತ್ರುವೂ ಆಗಿತ್ತು. ಹಾಗಾಗಿ ಆ ಕಾಲದಲ್ಲಿ ಕೊರಮೆ ಭಾಷೆ ಹೇಳಹೆಸರಿಲ್ಲದಂತೆ ಕಣ್ಮರೆಯಾಗಿ ಹೋಯಿತು. ಈಗಿನ ಕೊರಮರು ಕೂಡ ಉತ್ತರ ಕರ್ನಾಟಕದಲ್ಲಿಯೇ ಇರುವುದರಿಂದ ಆಳಸಿಂಗಾಚಾರ್ಯರು ಹೇಳಿದಂತೆ ಆಗಿನ ಬಿಂಬಾಪುರವನ್ನೇ ಈಗಿನ ಬನವಾಸಿ ಎಂದು ನಂಬಲು ಕಾರಣಗಳಿವೆ.


ಹೀಗೆ ಒಂದಕ್ಕೊಂದು ಕೂಡಿಕೊಂಡ ಮೇಲೆ ಎಲ್ಲರಿಗೂ ವಿಷಯ ಸ್ವಷ್ಟವಾಯಿತು. ತಾವು ಇದ್ದಕ್ಕಿದ್ದಂತೆ ಒಂದು ಮಹತ್ವದ ವಿಷಯವನ್ನು ಹೊರಗೆಡವಲು ಸಿದ್ದರಾಗುತ್ತಿದ್ದೇವೆ ಎಂದು ನೆನೆದೇ ಅವರಿಗೆ ರೋಮಾಂಚನವಾಗುತ್ತಿತ್ತು. ಆಳಸಿಂಗಾಚಾರ್ಯರಂತೂ ತಮ್ಮ ಜೀವನದ ದೊಡ್ಡ ನಂಬಿಕೆಯಾದ ದ್ರಾವಿಡ ಏಕಭಾಷಾ ವಾದಕ್ಕೆ ಈ ರೀತಿಯ ಹೊಸ ಪುರಾವೆ ಸಿಕ್ಕಿದ್ದನ್ನು ನೋಡಿ ಬಹಳ ಸಂತೋಷದಿಂದಿದ್ದರು. ಇನ್ನು ಅವರ ಮುಂದಿದ್ದದ್ದು ಒಂದೇ ಗುರಿ. ತಮ್ಮ ಬಳಿ ಇದ್ದ, ಕೊರಮೆ ಭಾಷೆಯದ್ದು ಅಂತ ಹೇಳಲಾದ ಗ್ರಂಥವನ್ನು ಓದುವುದು. ಅದೊಂದು ಮಾಡಿದರೆ ಈ ಸಂಶೋಧನೆಯನ್ನು ಸರಕಾರಕ್ಕೆ ತಿಳಿಸಬಹುದಿತ್ತು.


ಆದರೆ ಅವರಿಗೆ ಈ ಕೆಲಸದಲ್ಲಿ ಬಹಳ ತೊಡಕುಗಳು ಎದುರಾಗಿದ್ದವು. ಮೊದಲಿಗೆ ಈ ಸಂಶೋಧನೆಯಲ್ಲಿ ಮಹತ್ವವಾದ ಪಾತ್ರವಹಿಸಬೇಕಾಗಿದ್ದ ವೆಂಕಟಸುಬ್ಬಯ್ಯನವರು ತೀರಿಹೋದರು. ಇಂತಹ ವಿಷಯದಲ್ಲಿ ಅವರಿಗಿದ್ದಷ್ಟು ಪರಿಶ್ರಮ ಸ್ವತಃ ಆಳಸಿಂಗಾಚಾರ್ಯರಿಗೂ ಇರಲಿಲ್ಲ. ಮತ್ತೆ ಸರಕಾರದಿಂದಲೂ ಬೇಕಾದಷ್ಟು ಹಣ ಬರುತ್ತಿರಲಿಲ್ಲ. ಜೊತೆಗೆ ಪ್ರಭಾವೀ ವ್ಯಕ್ತಿಗಳಿಂದ ಈ ಸಂಶೋಧನೆಯನ್ನು ನಿಲ್ಲಿಸಲು ಒತ್ತಡಗಳೂ ಬರತೊಡಗಿದವು. ತಮ್ಮನ್ನು ತಾವು ಭಾಷೆಯ ಹೋರಾಟಗಾರರೆಂದು ಹೇಳಿಕೊಂಡ ಕೆಲವು ಮಂದಿ ಸಂಸ್ಥೆಗೆ ಕಲ್ಲುಗಳನ್ನು ಹೊಡೆದು ತಮ್ಮ ಕೋಪವನ್ನೂ ವ್ಯಕ್ತಪಡಿಸಿದರು. ಭಾಷೆ, ಭಾಷೆಯ ಮಧ್ಯ ಸೌಹಾರ್ದಯುತ ವಾತಾವರಣ ಕಲ್ಪಿಸುವಂತಹ ಇಂತಹ ಸಂಶೋಧನೆ ಆಗಿನ ಪರಿಸ್ಥಿತಿಗೆ ಸರಿಹೊಂದುತ್ತಿರಲಿಲ್ಲ. ಇದರಿಂದ ಬಹಳ ನೊಂಡುಕೊಂಡ ಆಳಸಿಂಗಾಚಾರ್ಯರು ರಾಜೀನಾಮೆ ನೀಡಿ ಹೊರಟು ಹೋದರು. ಸರಕಾರ ಅವರ ಬದಲಿಗೆ ನೇಮಿಸಿದ ವ್ಯಕ್ತಿ ಸಂಸ್ಥೆಗೆ ಬಂದಕೂಡಲೇ ಈ ಸಂಶೋಧನೆಯನ್ನು ನಿಲ್ಲಿಸಲು ಆದೇಶ ಹೊರಡಿಸಿಬಿಟ್ಟರು.


ಡಾ|| ಆಡಮ್ಸ್ ಅವರು ತಮ್ಮ ಕೈಯಿಂದಾಗುವಷ್ಟು ಪ್ರಯತ್ನ ಪಟ್ಟರೂ ಇದನ್ನೆಲ್ಲಾ ನಿಲ್ಲಿಸಲಾಗಲಿಲ್ಲ. ವಿಶ್ವನಾಥನ್ ಅವರ ರಜೆ ಬೇರೆ ಮುಗಿಯುತ್ತಾ ಬಂದಿದ್ದರಿಂದ ಅವರು ತಮ್ಮ ಮಾತೃಸಂಸ್ಥೆಗೆ ಮರಳಬೇಕಿತ್ತು. ಆಡಮ್ಸ್ ಅವರಿಗೂ ಅವರ ಯೂನಿವರ್ಸಿಟಿಯಿಂದ ಕಾಗದಗಳು ಬರುತ್ತಿದ್ದವು. ಭಾಷಾ ಆಧಾರದ ಮೇಲೆ ರಾಜ್ಯಗಳ ಪುನರ್ವಿಂಗಡನೆಯ ವಿಷಯ ಕಾವೇರಿದ್ದ ಕಾಲ ಅದು. ದಿನವೂ ಒಂದಲ್ಲಾ ಒಂದು ಗಲಾಟೆ ಆಗುತ್ತಿದ್ದರಿಂದ ಇನ್ನು ಇಲ್ಲಿರುವುದು ಬೇಡವೆಂದು ಅವರು ತಮ್ಮ ಯೂನಿವರ್ಸಿಟಿಗೆ ಮರಳಿದರು.


*******************************************************************


University of Lordshire


Field Notes from research trip to Mysore - 1955 ಎಂಬ ಕೆಂಪು ಬಣ್ಣದ ಡೈರಿ ಓದುತ್ತಿದ್ದ ಆಡಮ್ಸ್ ಅವರಿಗೆ ಮುಂದೆ ಏನು ಮಾಡಬೇಕೆಂದು ಸ್ವಷ್ಟವಾಗಿಹೋಯಿತು. ತಾವು ಈಗ ಕೊರಮೆ ಭಾಷೆಯ ಲಕ್ಷಣ ಮತ್ತು ಅದರ ಲಿಪಿಯನ್ನು ಜಗತ್ತಿಗೆ ಪರಿಚಯಿಸಬೇಕಿತ್ತು. ಹಾಗೆಂದು ಅವರು ೧೯೫೫ ರ ಬಳಿಕ ಈ ಬಗ್ಗೆ ಪ್ರಯತ್ನ ಪಡಲೇ ಇಲ್ಲ ಅಂತೇನೂ ಅಲ್ಲ. ಆದರೆ ಅವರಿಗೆ ಆ ಕಾಲದಲ್ಲಿ ಸರಿಯಾದ ಸೌಕರ್ಯಗಳು ಸಿಕ್ಕಿರಲಿಲ್ಲ. ವಿಶ್ವನಾಥನ್ ಮತ್ತು ಇವರು ಹಲವಾರು ಸಲ ಸರಕಾರಕ್ಕೆ ಪತ್ರ ಬರೆದರೂ ಇವರ ಸಂಶೋಧನೆಗೆ ಹಣಕಾಸಿನ ನೆರವು ಸಿಕ್ಕಿರಲಿಲ್ಲ. ಮತ್ತು ಬೇರೆ ರೀತಿಯ ಕೆಲಸಗಳು ಸರಕಾರದ ಕಡೆಯಿಂದ ಬರುತ್ತಿದ್ದರಿಂದ ಕೊರಮೆ ಭಾಷೆಯ ಕಡೆಗೆ ಹೆಚ್ಚು ಗಮನ ಕೊಡಲಾಗಲಿಲ್ಲ. ಈಗ ಕೊರಮೆ ಭಾಷೆಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಬೇಕಿತ್ತು. ಈ ಕೆಲಸ ಮಾಡಲು ತನ್ನೊಂದಿದೆ ವಿಶ್ವನಾಥನ್ ಇದ್ದರೆ ಒಳ್ಳೆಯದೆಂದು ಯೋಚಿಸಿ ಅವನಿಗೊಂದು ಇ-ಮೈಲ್ ಕಳಿಸಿದರು.


ವಿಶ್ವನಾಥನ್ ಒಂದು ವಾರದಲ್ಲಿ ಆಡಮ್ಸ್ ಅವರನ್ನು ಕೂಡಿಕೊಂಡರು. ಮುಂದಿನ ಏಳು ತಿಂಗಳು ಅವರಿಬ್ಬರ ಪಾಲಿಗೆ ಸಂತೋಷದ ಕಾಲವಾಗಿತ್ತು. Computational Linguistics ನಲ್ಲಿ ವಿಶ್ವನಾಥನ್ ತುಂಬಾ ಕೆಲಸ ಮಾಡಿದ್ದರು. ಆದ್ದರಿಂದ ಅವರು ಮಾಡಿದ ಮೊದಲ ಕೆಲಸವೆಂದರೆ ಎಲ್ಲಾ ದ್ರಾವಿಡೀಯ ಭಾಷೆಗಳ database ಒಂದನ್ನು ಸಿದ್ದಪಡಿಸಿದ್ದು. ನಂತರ ಒಂದು analytical software ಬರೆದು ಈ ಎಲ್ಲಾ ಭಾಷೆಗಳ ಲಿಪಿಗಳಲ್ಲಿನ ಸಮಾನತೆಗಳನ್ನು ಕಂಡುಹಿಡಿದರು. ಹಿಂದೆ ಮೈಸೂರಿನಿಂದ ಬರುವಾಗ ಅಲ್ಲಿದ್ದ ಕೊರಮೆ ಭಾಷೆಯದ್ದು ಎಂದು ಹೇಳಲಾದ ಕೃತಿಯ ಪ್ರತಿಯೊಂದು ಆಡಮ್ಸ್ ಅವರ ಬಳಿ ಇತ್ತು. ವಿಶ್ವನಾಥನ್ ಅವರ manuscript conversion software ನ ನೆರವಿನಿಂದ ಆ ಪುಸ್ತಕವನ್ನು scan ಮಾಡಿ ಅದರ digital copy ಒಂದನ್ನು ಸಿದ್ದಪಡಿಸಿಕೊಂಡರು.


ಆಮೇಲೆ ಅದನ್ನು ಈ ಮೊದಲೇ ಸಿದ್ದಪಡಿಸಿಕೊಂಡ database ನೊಂದಿಗೆ ಹೋಲಿಸಿ ನೋಡಿದಾಗ ವಿಷಯ ಸ್ವಷ್ಟವಾಗತೊಡಗಿತು. ಕೊರಮೆ ಭಾಷೆಯನ್ನು ಚಿರೂರವ ವಿಶೇಷವಾಗಿ ಸಿದ್ದಪಡಿಸಿದ್ದ. ಇದರಲ್ಲಿ ದ್ರಾವಿಡೀಯ ಭಾಷೆಯಲ್ಲಿರುವಂತೆ ಒತ್ತಕ್ಷರಗಳಿರಲಿಲ್ಲ. ಯಾವುದೇ ಕೊಂಬುಗಳು ಆ ಭಾಷೆಯ ಲಿಪಿಯಲ್ಲಿ ಕಾಣುತ್ತಿರಲಿಲ್ಲ. ಇದೊಂದು ಮಹತ್ವದ ವಿಷಯವಾಗಿತ್ತು. ಯಾಕೆಂದರೆ ಎರಡು ಸಮಾನಾಂತರ ರೇಖೆಗಳ ನಡುವೆ ಬರೆಯಬಹುದಾದ ಲಿಪಿಯನ್ನು computer ನಲ್ಲಿ ಅಳವಡಿಸುವುದು ಸುಲಭವಾಗಿತ್ತು. ಭಾರತೀಯ ಭಾಷೆಗಳಲ್ಲಿ ಕೊಂಬು ಮತ್ತು ಒತ್ತಕ್ಷರದ ಬಳಕೆ ಬಹಳವಾದ್ದರಿಂದ ಅವುಗಳನ್ನು ಎರಡು ಗೆರೆಗಳ ಮಧ್ಯೆ ಕೂರಿಸುವುದು ಕಷ್ಟವಾಗಿತ್ತು. ಇಂಗ್ಲಿಷ್ ಭಾಷೆಯಲ್ಲೂ j, p, g, y ಎಂಬ ಅಕ್ಷರ ಎರಡು ಗೆರೆಗಳ ಕೆಳಗೆ ತಮ್ಮ ಬಾಲ ಚಾಚಿದ್ದರೂ ಸುಮಾರಾಗಿ ಅದನ್ನು computer screen ನಲ್ಲಿ ಮೂಡಿಸುವುದು ಸುಲಭದ ಕೆಲಸವಾಗಿತ್ತು. ಆದರೆ ಭಾರತೀಯ ಲಿಪಿಗಳಲ್ಲಿ ಈ ವಿಷಯ ಒಂದು ದೊಡ್ಡ ತೊಡಕಾಗಿ ಪರಿಣಮಿಸಿತ್ತು.


ಆದರೆ ಕೊರಮೆ ಭಾಷೆಯಲ್ಲಿ ಇಂತಹ ಸಮಸ್ಯೆಗಳು ಇರಲೇ ಇಲ್ಲ. ಇದರಲ್ಲಿ ಅಕ್ಷರಗಳು ಎಷ್ಟು ಸರಳವಾಗಿತ್ತೆಂದರೆ camputer ನಲ್ಲಿ ಅದನ್ನು ಮೂಡಿಸಲು ವಿಶ್ವನಾಥನ್ ಅವರಿಗೆ ಹೆಚ್ಚು ಸಮಯ ಹಿಡಿಯಲೇ ಇಲ್ಲ. ಬರುಬರುತ್ತಾ ಕೊರಮೆ ಭಾಷೆಯ ಅಂಶಗಳು ಇವರಿಬ್ಬರನ್ನೂ ಬೆರಗುಗೊಳಿಸುತ್ತಾ ಹೋಯಿತು. ಅಕ್ಷರಗಳು ಸ್ವಷ್ಠವಾದೊಡನೆ ಭಾಷೆಯ ವ್ಯಾಕರಣದ ಬಗ್ಗೆ ತಿಳಿಯಲು grammer identifier ಉಪಯೋಗಿಸಿದರು. ಅದರಲ್ಲಿ ವಿಶ್ವದ ಎಲ್ಲಾ ಶಾಸ್ತ್ರೀಯ ಭಾಷೆಗಳ ಗುಣಲಕ್ಷಣಗಳನ್ನು feed ಮಾಡಲಾಗಿತ್ತು. ಅದರೊಂದಿಗೆ ಹೋಲಿಸಿ ನೋಡಿದಾದ ಕೊರಮೆ ಭಾಷೆ ಎಲ್ಲಾ ತರಹದ ಭಾಷಾನಿಯಮಗಳನ್ನು ಅಳವಡಿಸಿಕೊಂಡಿದೆ ಎಂದು result ಬಂತು. ಮುಂದೆ ಆ software ತಯಾರಿಸಿದ ಕೊರಮೆ ಭಾಷೆಯ ವ್ಯಾಕರಣ ನೋಡಿ ಅವರು ದಿಗ್ಬ್ರಾಂತರಾಗಿ ಹೋದರು. ಎಲ್ಲಾ ದ್ರಾವಿಡೀಯ ಭಾಷೆಗಳ ಸಮಾನತೆಯ report ನೋಡಿದ್ದ ಅವರಿಗೆ ಇದು ಅದರದೇ ತದ್ರೂಪ ಅನಿಸುತ್ತಿತ್ತು. ನಿಸ್ಸಂಶಯವಾಗಿ ಎಲ್ಲಾ ದ್ರಾವಿಡೀಯ ಭಾಷೆಗಳೂ ಕೊರಮೆಯಿಂದಲೇ ಹುಟ್ಟಿದವೆಂದು ನಿರ್ವಿವಾದವಾಗಿ ಸಾಬೀತಾಗಿತ್ತು. Report ಓದಿ ಮುಗಿಸಿದ ಮೇಲೆ ಆಡಮ್ಸ್ ವಿಶ್ವನಾಥನ್ ಅವರನ್ನು ಗಟ್ಟಿಯಾಗಿ ತಬ್ಬಿಕೊಂಡು ಅತ್ತುಬಿಟ್ಟರು. ಅವರಿಗೆ ಗೊತ್ತಿತ್ತು - ತನ್ನ ವಿಭಾಗ ಇನ್ನು ಮುಚ್ಚದು.


***********************************************************************

 ಟಿಪ್ಪಣಿಗಳು
Sunday, March 11, 2007
ಗಣೇಶ ಬಂದ

ಚಂದ್ರು ಸರಸರನೆ ಬಣ್ಣದ ಕಾಗದಗಳನ್ನು ತೆಗೆದುಕೊಂಡು ಅವನೇ ಮಾಡಿದ ತೆಂಗಿನ ಗರಿಗಳ ಚಪ್ಪರದ ಸುತ್ತಾ ಅಂಟಿಸುತ್ತಿದ್ದರೆ ಅಲ್ಲಿದ್ದವರೆಲ್ಲಾ ಆಶ್ಚರ್ಯದಿಂದ ಅವನನ್ನೇ ನೋಡುತ್ತಿದ್ದರು. "ಅರೇ ಇವನು ನಮ್ಮ ಚಂದ್ರುನಾ?" ಅಂತ ಅವರೆಲ್ಲಾ ಮಾತಾಡಿಕೊಳ್ಳುತ್ತಿದ್ದರೆ ಚಂದ್ರು ಇದೇ ತನ್ನ ಜೀವನದ ಪರಮಗುರಿಯೇನೋ ಎಂಬಂತೆ ಕಾಗದ ಸುತ್ತುತ್ತಿದ್ದ. ಚಪ್ಪರ ಮದುವೆಮನೆಯಂತೆ ಸಿಂಗಾರಗೊಂಡ ಮೇಲೆ ಶರ್ಟಿನ ಜೇಬಿನಿಂದ ಬೀಡಿ, ಕಡ್ಡಿ ತೆಗೆದು ಹೊರಗೆ ಸೇದುತ್ತಾ ಕುಳಿತುಬಿಟ್ಟ. ಅಲ್ಲಿದ್ದವರು ಗಣೇಶನನ್ನ ಎಲ್ಲಿ ಕೂರಿಸುವುದಪ್ಪಾ ಅಂತಾ ತಮ್ಮತಮ್ಮಲ್ಲಿ ಚರ್ಚೆ ಆರಂಭಿಸಿದರು. "ಈ ಸಲ ಏನಾದರೂ ಬಹುಮಾನ ಇದ್ದಿದ್ದರೆ ನಾವೇ ಗೆಲ್ಲುತ್ತಿದ್ದೆವು" ಕಮಿಟಿ ಪ್ರೆಸಿಡೆಂಟ್ ಜೋರಾಗಿಯೇ ಹೇಳಿದರು - ಚಂದ್ರುವಿಗೂ ಕೇಳಿಸಲಿ ಅಂತ.

ಯಾರು ಶುರು ಮಾಡಿದರೋ ಗೊತ್ತಿಲ್ಲ ಆದರೆ ಆ ಊರಲ್ಲಿ ಗಣೇಶನ ಜಾತ್ರೆ ದೊಡ್ಡದಾಗಿ ನಡೆಯುತ್ತಿತ್ತು. ಮೊದಮೊದಲು ಬರೇ ದೇವಸ್ಥಾನದಲ್ಲಿ ನಡೆಯುತ್ತಿದ್ದ ಉತ್ಸವ ಈಗ ಬೀದಿ ಬೀದಿಗೆ ಕಾಲಿಟ್ಟಿತ್ತು. ಈ ಮಧ್ಯೆ ಯಾರೋ ಬುದ್ದಿವಂತರು ಒಳ್ಳೇ ಪೆಂಡಾಲಿಗೆ ಬಹುಮಾನ ಕೊಡೋ ವ್ಯವಸ್ಥೆ ಕೂಡ ಮಾಡಿದ್ದರಿಂದ ಉತ್ಸವಕ್ಕೆ ಮತ್ತಷ್ಟು ರಂಗು. ಆದರೇನು ಪ್ರಯೋಜನ? ಬಹುಮಾನ ಬಂದ ತಕ್ಷಣ ಜಗಳ ಶುರುವಾಗ್ತಾ ಇತ್ತು. ಗೆದ್ದವರು ಕಪ್ ಎತ್ತುವ ಮೊದಲೇ ಒಂದೆರಡು ತಲೆಬುರುಡೆ ಒಡೆಯುತ್ತಿತ್ತು. ಗಣೇಶ ಬರುವಾಗ ಏನು ತಂದನೋ ಗೊತ್ತಿಲ್ಲ, ಆದರೆ ಹೋಗುವಾಗ ಮನಸ್ಸುಗಳನ್ನು ಒಡೆದು, ರಕ್ತದ ಹೊಳೆಯನ್ನು ಹರಿಸಿಯೇ ಹೋಗುತ್ತಿದ್ದ.


ಹೀಗೆ ಒಂದು ವರ್ಷ ಜಾತ್ರೆಯ ಸಮಯದಲ್ಲಿ ಚಂದ್ರುವಿನ ಬದುಕು ಬುಡಮೇಲಾಗಿ ಹೋಗಿತ್ತು. ಆಗಿದ್ದು ಇಷ್ಟು. ಆ ವರ್ಷ ಎಂದಿನಂತೆ ಚಂದ್ರುವೇ ಮುಂದೆ ನಿಂತು ತನ್ನ ಓಣಿಯ ಪೆಂಡಾಲಿನ ಉಸ್ತುವಾರಿ ವಹಿಸಿದ್ದ. ಒಂದು ಇಡೀ ತಿಂಗಳು ತಲೆಕೆಡಿಸಿಕೊಂಡು ಪೆಂಡಾಲಿನ ಡಿಸೈನ್ ಮಾಡಿದ ಮೇಲೆ ಸಾಮಾನು ತರಲು ಬೆಂಗಳೂರಿಗೆ ಬಂದಿಳಿದ. ಬಣ್ಣ ಬಣ್ಣದ ಕಾಗದ, ಮಿಣಿ ಮಿಣಿ ಬತ್ತಿ, ಚಿತ್ತಾರದ ಚಾದರ ಎಲ್ಲಾ ತೆಕೊಂಡು ಊರಿಗೆ ಬಂದ. ಹುಡುಗರನ್ನೆಲ್ಲಾ ಕೂಡಿಸಿಕೊಂಡು ರಾತ್ರಿ ಹಗಲು ಕಷ್ಟ ಪಟ್ಟಿದ್ದೇ ಪಟ್ಟಿದ್ದು. ಕೊನೆಗೂ ಗಣೇಶ ಬಂದ. ಆದರೆ ಇವರಲ್ಲಿಗೆ ಜನವೇ ಇಲ್ಲ. ಎಲ್ಲರ ಬಾಯಲ್ಲೂ ಆಚೆ ಬೀದಿಯವರ ಪೆಂಡಾಲಿನವರದೇ ಮಾತು.


ಅಲ್ಲಿ ಗಣೇಶನನ್ನ ಸಿಂಹದ ಮೇಲೆ ಕೂರಿಸಿದ್ದರು. ಪಕ್ಕದಲ್ಲಿಯೇ ರಾಕ್ಷಸನೂ ಇದ್ದ. ಸ್ವಿಚ್ ಹಾಕಿದರೆ ಸಾಕು, ಸಿಂಹ ಘರ್ಜಿಸುತ್ತಿತ್ತು, ಗಣೇಶ ಖಡ್ಗ ಎತ್ತಿ ಅಟ್ಟಹಾಸ ಮಾಡುವ ರಾಕ್ಷಸನ ತಲೆ ಕಡಿಯುತ್ತಿದ್ದ. ಮಕ್ಕಳು, ದೊಡ್ಡವರು ಎಲ್ಲಾ ಹೋ! ಅಂತಾ ಕಿರಿಚುತ್ತಿದ್ದರೆ ಚಂದ್ರುವಿಗೆ ತನ್ನ ಕಣ್ಣನ್ನ ತಾನೇ ನಂಬಲಾಗಲಿಲ್ಲ. ಈ ಬೀದಿಯಲ್ಲಿ ಯಾರಿದ್ದಾರಪ್ಪಾ ಇಷ್ಟೆಲ್ಲಾ ಮಾಡುವವರು ಅಂತ ತುಂಬಾ ಯೋಚಿಸಿ ನೋಡಿದ. ಅವನ ತಲೆಗೆ ಯಾರ ಹೆಸರು ಹೊಳೆಯಲಿಲ್ಲ. ಮತ್ತೆ ಎಲ್ಲ ಕಡೆ ವಿಚಾರಿಸಿ ನೋಡಿದಾಗ ತಿಳಿಯಿತು - ಇದೆಲ್ಲಾ ಬಾಂಬೆಯಿಂದ ಬಂದ ಸಾಮಾನು ಅಂತ. ಅಲ್ಲಿ ನವರಾತ್ರಿಗೆ ಇಂತಾ ಗೊಂಬೆ ಕೂರಿಸುತ್ತಾರಂತೆ. ಇಲ್ಲಿನ ಒಬ್ಬ ಬ್ಯಾರಿ ಅಲ್ಲಿಂದ ಈ ಗೊಂಬೆ ಮಾಡುವವರನ್ನ ಕರೆಸಿ ಗಣೇಶನನ್ನ ಮಾಡಿಸಿದಂತೆ.


"ಅಬ್ಬಾ ಬ್ಯಾರಿ ನಿನ್ನ ಸೊಕ್ಕೇ" ಚಂದ್ರುವಿಗೆ ಮೈಯೆಲ್ಲಾ ಹೊತ್ತಿಕೊಂಡು ಉರಿದಂತೆ ಆಗತೊಡಗಿತು. ತಾನು ಕಷ್ಟ ಪಟ್ಟು ಮಾಡಿದ ಪೆಂಡಾಲನ್ನ ಈ ಬಾಂಬೆ ಜನ ಬಂದು ಹೀಗೆ ಮೂರು ಕಾಸಿಗೆ ಗತಿ ಇಲ್ಲದ ಹಾಗೆ ಮಾಡಿದರಲ್ಲಾ, ಇವರನ್ನು ಏನಾದರೂ ಮಾಡಿ ಗೆಲ್ಲಲಿಕ್ಕೆ ಬಿಡಬಾರದು ಅಂದುಕೊಂಡ. ಹನ್ನೊಂದನೆಯ ದಿನ ಪರೀಕ್ಷೆಯ ದಿನ. ಬಹುಮಾನ ಕೊಡುವ ಕಮಿಟಿಯವರು ಎಲ್ಲಾ ಪೆಂಡಾಲಿಗೆ ಬಂದು ನೋಡಿ ಹೋದರು. ಮೊದಲ ಬಹುಮಾನ ಆಚೆ ಈಚೆ ಹೋಗುವ ಬಾಂಬೆ ಗಣೇಶನಿಗೇ ಬಂತು. ಚಂದ್ರುವಿಗೆ ಸಿಟ್ಟು ತಡೆದುಕೊಳ್ಳಲಾಗಲಿಲ್ಲ. ಇಲ್ಲಿನವರು ಮಾಡಿದರೆ ಮಾತ್ರ ಬಹುಮಾನ ಕೊಡಬೇಕು - ಅಂತ ತಗಾದೆ ತೆಗೆದ. ಸಿಂಹದ ಘರ್ಜನೆ ಕೇಳಿದವರಿಗೆ ಇವನ ಮಾತು ಕಿವಿಗೆ ಬೀಳಲೇ ಇಲ್ಲ. ಅವತ್ತು ಅಲ್ಲಿಂದ ನೇರ ಅವರ ಪೆಂಡಾಲಿಗೆ ನುಗ್ಗಿ ಸಿಂಹ, ರಾಕ್ಷಸ ಎರಡನ್ನೂ ಪುಡಿ ಪುಡಿ ಮಾಡಿಬಿಟ್ಟ. ಯಾಕೋ ಗಣೇಶನನ್ನ ಮುಟ್ಟಲು ಅವನಿಗೆ ಮನಸ್ಸಾಗಲಿಲ್ಲ.


"ಹಿಡಿಯಿರಿ, ಹೊಡೆಯಿರಿ" ಅಂತ ಜನ ಬರುವುದರೊಳಗೆ ಚಂದ್ರು ಪರಾರಿ. ಅವನ ಹುಡುಗರು ರಾತ್ರಿ ಎಲ್ಲಾ ಕುಣಿದು ಬೆಳಗ್ಗೆ ಗಣೇಶನನ್ನು ನೀರಿಗೆ ಬಿಟ್ಟು ಬಂದರೂ ಅವನ ಪತ್ತೆ ಇಲ್ಲ. ಇಲ್ಲೇ ಎಲ್ಲೋ ಹೋಗಿರಬಹುದು, ಈಗ ಬಂದಾನು ಅಂದುಕೊಂಡು ಸುಮ್ಮನಿದ್ದರು. ಆದರೆ ಎಲ್ಲಿ! ಆಸಾಮಿಯ ಪತ್ತೆಯೇ ಇಲ್ಲ. ಆಚೆ ಬೀದಿಯವರೂ ಅವನನ್ನ ಕಾಯುತ್ತಿದ್ದರು. ಬ್ಯಾರಿಗೆ ವಿಪರೀತ ನಷ್ಟವಾಗಿತ್ತು. ಹೇಳಿ ಕೇಳಿ ಅವತ್ತು ಬಾಂಬೆಯವರು ಸಿಂಹ ಮತ್ತು ರಾಕ್ಷಸನನ್ನ ವಾಪಸ್ ತೆಗೆದುಕೊಂಡು ಹೋಗಬೇಕಿತ್ತು. ಇನ್ನೇನು ಕೆಲವೇ ಸಮಯ. ದಸರಾ ಬಂತೆಂದರೆ ಸಿಂಹಕ್ಕೆ, ರಾಕ್ಷಸರಿಗೆ ವಿಪರೀತ ಡಿಮ್ಯಾಂಡ್. ಇಂತಹ ಸಮಯದಲ್ಲಿ ಬೊಂಬೆ ಹಾಳಾದ ಕಾರಣ ಬಾಂಬೆಯವರೂ ಸಿಟ್ಟಿನಿಂದಿದ್ದರು. ಬ್ಯಾರಿ ಅವರಿಗೆ ಕೈಯಿಂದ ಹಣ ಕೊಟ್ಟು ಕಳಿಸಿದನಾದರೂ ಅವನಿಗೆ ಇದಕ್ಕೆಲ್ಲಾ ಕಾರಣನಾದ ಚಂದ್ರುವಿನ ಮೇಲೆ ವಿಶೇಷ ಕೋಪವಿತ್ತು.


ಅವನ ಕೋಪಕ್ಕೆ ಇನ್ನೊಂದು ಕಾರಣವೂ ಇತ್ತು. ಅವನು ಬಾಂಬೆಯಿಂದ ಬೊಂಬೆ ತರಿಸಿದಾಗ ಅವನ ಕಡೆಯವರೆಲ್ಲಾ ಅವನನ್ನು ಆಡಿಕೊಂಡಿದ್ದರು. "ನಾವು ಬ್ಯಾರಿಗಳಿಗೆ ಯಾಕೋ ಗಣೇಶನ ಸಹವಾಸ" ಅಂತ ಎಷ್ಟು ಹೇಳಿದರೂ ಅವನು ಅದನ್ನ ಕಿವಿಗೆ ಹಾಕಿಕೊಂಡಿರಲಿಲ್ಲ. ಅವನು ಲೋಕ ಸುತ್ತಿದವನು. ಬಾಂಬೆಯಲ್ಲಿ ಹೇಗೆ ಜನ ಗಣಪತಿಗೆ ಖರ್ಚು ಮಾಡ್ತಾರೆ ಅಂತ ಅವನು ನೋಡಿದ್ದ. ಅದೇ ಕೆಲಸ ಊರಲ್ಲಿ ಮಾಡಬೇಕು. ನಾನು ಬ್ಯಾರಿ, ಗಣೇಶ ನಮ್ಮ ದೇವರಲ್ಲ - ಇವೆಲ್ಲಾ ಅವನಿಗೆ ಬೇಡವಾದ ವಿಷಯ. ಹಾಗಾಗಿ ಅವನು ಬಾಂಬೆಯಿಂದ ಬೊಂಬೆಗಳನ್ನ ಬಾಡಿಗೆಗೆ ತರಿಸಿಯೇ ಬಿಟ್ಟ. ಮೊದಲು ಛೀಮಾರಿ ಹಾಕಿದ ಅವನ ಕೆಡೆಯವರೇ ಈಗ ಹೆಂಗಸರು-ಮಕ್ಕಳನ್ನು ಕರೆದುಕೊಂಡು ಆಚೀಚೆ ಹೋಗುವ ಗಣೇಶನನ್ನು ನೋಡಲು ಬರುತ್ತಿದ್ದರು. ಇಷ್ಟೆಲ್ಲಾ ಮಾಡಿದ ತನಗೆ ಕೊನೆಯಲ್ಲಿ ಆ ಚಂದ್ರು ಮಾಡಿದ ಕೆಲಸದಿಂದ ಜನರ ಮಧ್ಯೆ ತಲೆ ಎತ್ತಿಕೊಂಡು ತಿರುಗಾಡದ ಹಾಗೆ ಆಯಿತು. "ನೋಡೋ ಎಷ್ಟು ಮಾಡಿದರು ಅಷ್ಟೆ! ಬ್ಯಾರಿ ಇಟ್ಟ ಗಣೇಶನನ್ನ ಅವರು ಕೊನೆಗೂ ಬಿಡಲಿಲ್ಲ. ಬೇಕಿತ್ತಾ ನಿನಗೆ" ಅಂತ ಅವನ ಕಡೆಯವರು ಹೇಳಿದಾಗ ಇವನು ಹೇಗೆ ಬಾಯಿ ಬಿಟ್ಟಾನು?


ಹೀಗೆ ಚಂದ್ರುವಿಗಾಗಿ ಕಾಯುವ ಒಂದು ದಂಡೇ ಆ ಊರಲ್ಲಿ ತಯಾರಾಗಿತ್ತು. ತಿಂಗಳಾಯಿತು, ಮೂರಾಯಿತು - ಅವನ ಸುಳಿವೇ ಇಲ್ಲ. ಕೊನೆಕೊನೆಗೆ ಅವನ ಹೆತ್ತವರನ್ನ ಬಿಟ್ಟರೆ ಅವನನ್ನ ಎಲ್ಲರೂ ಮರೆತುಹೋಗುವಷ್ಟು ಸಮಯ ಕಳೆಯಿತು. ಆದರೂ ವರ್ಷದಲ್ಲಿ ಒಂದು ಸಲ ಅವನನ್ನ ಊರಿಗೆ ಊರೇ ನೆನೆಯುವ ಹಾಗಿತ್ತು. ಯಾಕೆಂದರೆ ಅವತ್ತು ಅವನು ಗಲಾಟೆ ಮಾಡಿಹೋದಾಗಿನಿಂದ ಆ ಊರಲ್ಲಿ ಗಣೇಶನೇನೂ ಬರುತ್ತಿದ್ದ. ಆದರೆ ಹಿಂದಿನ ತರ ರಕ್ತ ಹರಿಯುತ್ತಿರಲಿಲ್ಲ, ಯಾಕೆಂದರೆ ಪೆಂಡಾಲಿಗೆ ಬಹುಮಾನ ಕೊಡುವ ವ್ಯವಸ್ಥೆಯನ್ನು ನಿಲ್ಲಿಸಿಬಿಟ್ಟಿದ್ದರು. ಹುಡುಗರೆಲ್ಲಾ ಇದಕ್ಕೆ ಕಾರಣನಾದ ಚಂದ್ರುವಿಗೆ ಹಿಡಿಶಾಪ ಹಾಕಿದರೆ, ದೊಡ್ಡವರು ಈ ಗಲಾಟೆ ನಿಲ್ಲಿಸಿದ ಚಂದ್ರುವಿಗೆ ಮನಸ್ಸಿನಲ್ಲೇ ಒಂದು ನಮಸ್ಕಾರ ಹಾಕುತ್ತಿದ್ದರು.


ಗೊತ್ತಿದ್ದಲ್ಲೆಲ್ಲಾ ಮಗನನ್ನು ಹುಡುಕಿಸಿ ಚಂದ್ರುವಿನ ಹೆತ್ತವರೂ ಸುಸ್ತಾಗಿದ್ದರು. ಅಂಜನ, ಜಾತಕ, ಮಲೆಯಾಳಿ ಕವಡೆ- ಊಹೂಂ ಯಾರಿಂದಲೂ ಚಂದ್ರುವಿನ ಪತ್ತೆ ಮಾಡಲು ಆಗಲಿಲ್ಲ. ಒಂದಕ್ಕಿಂತ ಒಂದು ದೇವರಿಗೆ ಹರಕೆ ಹೇಳಿಕೊಂಡರೂ ಅವನು ಬರಲಿಲ್ಲ ಅಂದ ಮೇಲೆ ಪೋಲೀಸ್ ಕಂಪ್ಲೇಂಟ್ ನಿಂದ ಬಂದಾನಾ? ಅಂತೂ ಎಲ್ಲೋ ಅವನ ಪಾಡಿಗೆ ಇರ್ತಾನೆ ಅಂತ ಎಲ್ಲರೂ ಸಮಾಧಾನ ಪಟ್ಟುಕೊಂಡಿದ್ದರು. ಇಂತಹ ಒಂದು ದಿವಸ ಇದ್ದಕ್ಕಿದ್ದಂತೆ ಚಂದ್ರು ಪ್ರತ್ಯಕ್ಷನಾದ. ಅದೂ ಗಣೇಶ ಬರಲು ಒಂದು ತಿಂಗಳು ಇದೆ ಅನ್ನೋವಾಗ. ಬಂದವನು ಮಾತ್ರ ಹಳೇ ಚಂದ್ರು ಆಗಿರಲಿಲ್ಲ. ಅದೇ ಮುಖ ಇದ್ದ ಇನ್ಯಾರೋ ಇದ್ದ ಹಾಗೆ ಇದ್ದುಬಿಟ್ಟ.


ಮೊದಲೆಲ್ಲಾ ಮಾತಾಡದೆ ಒಂದು ಕ್ಷಣವೂ ಕೂರದವನು ಈಗ ಮೂರು ಮಾತಿಗೆ ಒಂದು ಉತ್ತರ ಕೊಡುತ್ತಿದ್ದ. ಯಾರು ಏನು ಕೇಳಿದರೂ ತಾನು ಇಷ್ಟು ಸಮಯ ಎಲ್ಲಿದ್ದೆ ಅಂತ ಮಾತ್ರ ಬಾಯಿಬಿಟ್ಟಿರಲಿಲ್ಲ. ಊರಿಗೆ ಬಂದು ಅವನು ಮಾಡಿದ ಮೊದಲ ಕೆಲಸವೆಂದರೆ ತನ್ನ ಬೀದಿಯಲ್ಲಿ ಮೊದಲಿನಿಂದಲೂ ಗಣೇಶ ಕೂರಿಸಿವ ಪ್ರೆಸಿಡೆಂಟರ ಮನೆಗೆ ಹೋಗಿ ಈ ವರ್ಷ ಪೆಂಡಾಲನ್ನು ತಾನೇ ಮಾಡುವುದಾಗಿ ಹೇಳಿದ್ದು. ಮೊದಲಿನಿಂದಲೂ ಚಂದ್ರುವೇ ಈ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಅಭ್ಯಂತರ ಇರಲಿಲ್ಲ. ಆದರೆ ಓಡಿಹೋದ ವರ್ಷ ಅವನು ಮಾಡಿದ ಗಲಾಟೆ ನೆನಪಾಗಿ ಸ್ವಲ್ಪ ಹುಶಾರಾಗಿರುವಂತೆ ಹೇಳಿದರು. "ನಾಳೆ ಬಂದು ದುಡ್ಡು ತೆಕೊಂಡು ಹೋಗು" ಅಂತ ಹೇಳಿದ್ದು ಕಿವಿಗೆ ಬೀಳದಂತೆ ಚಂದ್ರು ಅಲ್ಲಿಂದ ನಡೆದುಬಿಟ್ಟ.


ಮರುದಿನ ಗಣೇಶ ಇಡುವ ಮೈದಾನದ ಹತ್ತಿರ ಒಂದು ದೊಡ್ಡ ಪ್ಲಾಸ್ಟಿಕ್ ಟೆಂಟ್ ಕಟ್ಟಿಸಿ ಅದರ ಒಳಗೆ ಸೇರಿಕೊಂಡುಬಿಟ್ಟ. ಬರುವಾಗ ತನ್ನೊಡನೆ ತಂದಿದ್ದ ದೊಡ್ಡ ದೊಡ್ಡ ಚೀಲಗಳನ್ನು ಹೊತ್ತುಕೊಂಡು ಟೆಂಟಿನ ಒಳಗೆ ಹೋದ ಚಂದ್ರು ಯಾವಾಗಾದರೊಮ್ಮೆ ಮನೆಗೆ ಬರುತ್ತಿದ್ದ. ಯಾರನ್ನು ಒಳಗೆ ಬಿಡದ ಅವನು ಇನ್ನೇನು ಗಣೇಶ ಬರಲು ಒಂದು ವಾರ ಇದೆ ಅನ್ನೋವಾಗ ಟೆಂಟ್ ಮುಚ್ಚಿ ಪೆಂಡಾಲ್ ಹಾಕಲು ಶುರುಮಾಡಿದ. ಮದುವೆಮನೆಯ ತರಹ ಪೆಂಡಾಲ್ ಶೋಭಿಸುತ್ತಿತ್ತು. ಒಬ್ಬನೇ ಕಲಸ ಮಾಡುತ್ತಿದ್ದ ಚಂದ್ರು ಬೇಕಾದಾಗ ಕೆಲಸದವರನ್ನು ತಾನೇ ಕರೆದು ತರುತ್ತಿದ್ದ. "ಈ ಸಲ ಏನಾದರೂ ಬಹುಮಾನ ಇದ್ದಿದ್ದರೆ ನಾವೇ ಗೆಲ್ಲುತ್ತಿದ್ದೆವು" ಅಂತ ಕಮಿಟಿ ಪ್ರೆಸಿಡೆಂಟರು ಜೋರಾಗಿ ಹೇಳಿದ್ದು ಈ ಕಾರಣಕ್ಕಾಗಿಯೇ.


ಚಂದ್ರು ಈ ಮಾತಿಗೆಲ್ಲ ತಲೆ ಕೆಡಿಕೊಳ್ಳುವವನ ಹಾಗೆ ಕಾಣಿಸಲಿಲ್ಲ. ಯಾವುದೋ ಜಿದ್ದಿಗೆ ಬಿದ್ದವನಂತೆ ಪೆಂಡಾಲನ್ನು ಸಿಂಗಾರಗೊಳಿಸಿದ. ಕೊನೆಗೂ ಗಣೇಶ ಬರುವ ಹಿಂದಿನ ದಿನ ರಾತ್ರಿ ಪ್ರೆಸಿಡೆಂಟರು ಮತ್ತೆ ಕೆಲವು ಹುಡುಗರನ್ನು ತಾನು ಕಟ್ಟಿಕೊಂಡಿದ್ದ ಟೆಂಟಿನೊಳಕ್ಕೆ ಕರೆದುಕೊಂಡು ಹೋದ. ಅಲ್ಲಿ ಅವರಿಗೆ ಮಹಾ ಆಶ್ಚರ್ಯ ಕಾದಿತ್ತು. ಅವರು ಎಂದೂ ನೋಡದಷ್ಟು ಸುಂದರ ಗಣೇಶನ ಮೂರ್ತಿ ಅಲ್ಲಿತ್ತು. ಅಲ್ಲಿದ್ದವರೆಲ್ಲಾ ಬಿಟ್ಟ ಬಾಯಿ ಬಿಟ್ಟಂತೇ ಇರುವಾಗ ತಾನು ಕರೆದುಕೊಂಡು ಬಂದ ಹುಡುಗರಿಗೆ ಗಣೇಶನನ್ನು ಪೆಂಡಾಲಿಗೆ ಸಾಗಿಸುವಂತೆ ಹೇಳಿದ. ಅಲ್ಲಿ ಕೆಲವು ಹೊತ್ತು ಕೆಲಸ ಮಾಡಿದ ಮೇಲೆ ಸ್ವಿಚ್ ಹಾಕಿದರೆ ಮೇಲಿಂದ ಹೂಮಳೆ ಆಗುತ್ತಿತ್ತು. ಬಿದ್ದ ಹೂವಿನ ರಾಶಿಯ ಮಧ್ಯದಿಂದ ಬಿಳಿ ಮೋಡದಂತೆ ಹೊಗೆ ಬರುತ್ತಿತ್ತು. ಇದರ ಅಡಿಯಿಂದ ಗಣೇಶ ಮೆಲ್ಲನೆ ಮೇಲೆ ಬರುತ್ತಿದ್ದರೆ ಇದ್ದವರೆಲ್ಲಾ ಪವಾಡ ನೋಡುತ್ತಿರುವವರಂತೆ ನಿಂತುಬಿಟ್ಟರು.


"ಈ ಸಲ ಎಲ್ಲರೂ ನಮ್ಮಲ್ಲಿಗೇ ಬರಬೇಕು" ಅಂತ ಚಂದ್ರು ಬಾಯಿಬಿಟ್ಟಾಗ ಅಲ್ಲಿದ್ದವರಿಗೆಲ್ಲಾ ಇಲ್ಲವೆನ್ನಲಾಗಲಿಲ್ಲ. ರಾತ್ರಿ ಎಲ್ಲರೂ ಮನೆಗೆ ಹೋದ ಮೇಲೆ ಚಂದ್ರು ತನ್ನ ನಂಬಿಕೆಯ ಹುಡುಗರ ಜೊತೆಯಲ್ಲಿ ಅಲ್ಲೇ ಇದ್ದುಬಿಟ್ಟ. ಬೆಳಗ್ಗೆ ಎದ್ದು ಎಲ್ಲರೂ ಪೆಂಡಾಲಿಗೆ ಬರ್ತಾರೆ, ಗಣೇಶ ಆವಾಗಲೇ ಅಲ್ಲಿ ಶೋಭಿಸುತ್ತಾ ಕೂತಿದ್ದ. ಬಂದವರೆಲ್ಲಾ ಗಣೇಶನನ್ನು ನೋಡಿ ಮಾಡಿದ್ದು ನಮ್ಮ ಚಂದ್ರುನಾ ಅಂತ ಮಾತಾಡಿಕೊಂಡರು. ಆದರೆ ಸುತ್ತ ಎಲ್ಲೂ ಚಂದ್ರು ಮಾತ್ರ ಇರಲಿಲ್ಲ.


"ಅಮ್ಮಾ ಗಣೇಶ ಬಂದ ದಿನ ಯಾಕೆ ಯಾರೂ ಚಂದ್ರನನ್ನ ನೋಡಬಾರದು?" ಚಿಕ್ಕ ಹುಡುಗಿಯೊಬ್ಬಳು ಅಮ್ಮನನ್ನು ಕೇಳುತ್ತಿದ್ದರೆ ಪೆಂಡಾಲಿನಲ್ಲಿದ್ದವರೆಲ್ಲಾ ಚಂದ್ರುವನ್ನು ಹುಡುಕುವುದರಲ್ಲೇ ತೊಡಗಿದ್ದರು.

 ಟಿಪ್ಪಣಿಗಳು
Thursday, March 01, 2007
ರಾಜೀನಾಮೆ

"ಹೇ! ನಿನಗೆ ಹೊಸ ವಿಷಯ ಗೊತ್ತಾಪ್ಪಾ"

"ನೀನು ಬಂದಿದ್ಯಾ ಅಂದ್ರೆ ನನಗೆ ಗೊತ್ತಿಲ್ಲದ್ದು ನಿನಗೆ ಏನೋ ಗೊತ್ತಿದೆ ಅಂತಾಯ್ತು"

"ನಿನ್ಗೆ ನಿಜವಾಗಲು ಗೊತ್ತಿಲ್ವಾಪ್ಪಾ"

"ಅಯ್ಯೋ ರಾಮ. ಏನು ವಿಷಯ ಅಂತ ನನಗೆ ಗೊತ್ತಿಲ್ಲ ಕಣೋ. ಹೇಳಿ ಒಮ್ಮೆ ತೊಲಗು. ಕೆಲಸ ಇದೆ ಇಲ್ಲಿ"

"ಯೇ, ನಂಗೊತ್ತಿಲ್ವಾ ನಿನ್ನ ಕೆಲಸ. ಆದ್ರೆ ವಿಷಯ ಸೀರಿಯಸ್ ಇದೆಯಪ್ಪಾ"

"ಪೀಠಿಕೆ ಸಾಕು. ವಿಷಯಕ್ಕೆ ಬಾ"

"ಹೇಳೇಬಿಡ್ಲಾ....ಕೇಳಿ ನೀನು ಸುಸ್ತಾಗ್ತೀಯಪ್ಪಾ.."

"ಜಜ್ಜಿ ಹಾಕ್ತೀನಿ ನೋಡು ಈಗ ಬಾಯಿಬಿಡದಿದ್ರೆ"

"ಕೋಪ ಬೇಡಪ್ಪಾ...ಕೇಳು ಹೊಸ ವಿಷಯ. ಬಾಸು....ರಾಜೀನಾಮೆ ಕೊಟ್ಟಿದ್ದಾರೆ"

"ಏನು....?"

"ಹೌದಪ್ಪಾ..ಬಾಸು ಇವತ್ತಿನಿಂದ ಕೆಲಸಕ್ಕೆ ಬರಲ್ಲ"

"ಛೆ ಹೋಗೋ. ಹುಚ್ಚುಚ್ಚು ಮಾತಾಡ್ಬೇಡ. ಬಾಸ್ ಯಾಕೆ ಕೆಲಸ ಬಿಡ್ಬೇಕು"

"ಆಯ್ತಪ್ಪಾ, ನನ್ನ ಮಾತಿನ ಮೇಲೆ ನಂಬಿಕೆ ಇಲ್ವಲ್ಲಾ ನಿಂಗೆ. ಹೋಗಿ ಅವರ ಕುರ್ಚಿ ನೋಡು"

"ಲೇಟ್ ಬರಬಹುದು. ಅದಕ್ಕೆ ಈ ಸುದ್ದಿನಾ?"

"ನೋಡಪ್ಪಾ ಅವರು ಯಾವತ್ತಾದರೂ ಲೇಟ್ ಬಂದಿದ್ದುಂಟಾ?"

"ಏನೋ ಹುಷಾರಿಲ್ಲದೆ ಇರಬಹುದು. ಮದುವೆ, ಮುಂಜಿ ಯೇನಾದ್ರೂ....."

"ಏ ನೀನು ಸುಮ್ಮನೆ ಗೊತ್ತಿಲ್ಲದವನ ಹಾಗೆ ಮಾತಾಡಬೇಡಪ್ಪಾ. ಅವರ ಮಗಳ ಮದುವೆಯನ್ನೇ ರಜಾ ದಿನದಲ್ಲಿ ಮಾಡಿದ್ದರು. ಗೊತ್ತಿಲ್ವಾ ನಿನಗೆ. ಇಲ್ಲಿಗೆ ಬರದೆ ಒಂದು ದಿನವಾದರೂ ಮನೇಲಿ ಬಾಸ್ ಯಾವತ್ತಾದರೂ ಕೂತಿದ್ದಾರಾ?"

"ನಾನು ನೋಡಿದ ಹಾಗೆ...... ಇಲ್ಲ"

"ಮತ್ತೆ ನಾನು ಏನು ಬಾಯಿ ಬಡಿತಿರೋದಪ್ಪಾ. ಬಾಸು ಪರ್ಮನೆಂಟಾಗಿ ಮನೆಗೆ ಹೋಗಿದ್ದಾರೆ"

"ಆದ್ರೂ ನಂಬಕ್ಕಾಗೊಲ್ಲ. ಬಾಸ್ ರಾಜೀನಾಮೆ ಕೊಡ್ತಾರಾ"

"ಕೊಟ್ಟಿದ್ದಾರೆ. ಅದಕ್ಕೇ ಇವತ್ತು ಈ ಕಡೆ ತಲೆ ಹಾಕಿಲ್ಲಪ್ಪಾ"

"ಏ, ನೀನು ಹೇಳೋದು ಸತ್ಯ ತಾನೇ?"

"ತೆಗೋಪ್ಪಾ. ನಾನ್ಯಾಕಪ್ಪಾ ಸುಳ್ಳು ಹೇಳ್ಲಿ. ನಂಬಿದ್ರೆ ನಂಬಪ್ಪಾ...ಇಲ್ಲದಿದ್ರೆ ನಿನ್ನಿಷ್ಟ"

"ಆಯ್ತು ಬಾಸ್ ರಾಜೀನಾಮೆ ಕೊಟ್ಟಿದ್ದು ಸತ್ಯ ಅಂತ ಇಟ್ಕೋಳೋಣ. ಮುಂದೇನು"

"ಅಂದ್ರೆ ಏನಪ್ಪಾ?"

"ಅಂದ್ರೆ ಮುಂದೆ ನಮಗೆಲ್ಲಾ ಯಾರು ದಿಕ್ಕೂ ಅಂತ"

"ಅಯ್ಯಾ, ನಿಂದೊಳ್ಳೆ ಆಯ್ತಲ್ಲಾ. ಹೊಸ ಬಾಸು ಬರ್ತಾರೆ ಅಷ್ಟೇ"

"ಆದ್ರೂ ಬಾಸ್ ಅಂದ್ರೆ ಅವ್ರೇ ಕಣೋ. ಏನೊಳ್ಳೆಯವ್ರಾಗಿದ್ರು. ಛೇ! ಅವರ್ಯಾಕೆ ಹೋದ್ರು"

"ನನಗೇನಪ್ಪಾ ಗೊತ್ತು. ಕಂಡುಹಿಡಿ ಮತ್ತೆ ನೋಡುವ"

"ಹೊಸ ಬಾಸ್ ಏನಾದ್ರೂ ಬರ್ತಾರೇಂತ ಸುದ್ದಿ ಇದ್ಯಾ?"

"ಹೋಗಪ್ಪಾ..ಈ ಬಾಸು ಹೋಗಿರೋದೇ ತುಂಬ ಜನಕ್ಕೆ ಗೊತ್ತಿಲ್ಲ. ಇನ್ನು ಹೊಸ ಬಾಸಿನ ಕತೆ ಯಾರಿಗೆ ತಾನೇ ಗೊತ್ತಿರುತ್ತೆ"

*********************************************************************************

"ನಮಸ್ಕಾರಪ್ಪಾ....."

"ಒಹೋ ಏನು ನಮ್ಮೆಡೆಗೆ ತಮ್ಮ ಪಾದ ಬೆಳೆದದ್ದು"

"ಬಿಡಪ್ಪಾ ಸುಮ್ಮನೇ ತಮಾಷೆ ಮಾಡಬೇಡ ಸಣ್ಣವರ ಮೇಲೆ"

"ಯಾರು..ಯಾರು ಸಣ್ಣವರು? ನೀವಾ? ಇಲ್ಲಿ ಆಗೋ ಪ್ರತಿಯೊಂದು ವಿಷಯ ಗೊತ್ತಾಗೋದೇ ನಿಮಗೆ. ನೀವು ಸಣ್ಣವರಾ? ಹಾಗಾದರೆ ನಾವೇನು?"

"ಇರಲಿ ಬಿಡಪ್ಪಾ. ಬಾಸು ವಿಷಯ ಯಾಕೆ ಹೀಗಾಯ್ತು?"

"ಏನು?...ಏನಾಯ್ತು?"

"ಹೋಗಪ್ಪಾ. ಎಲ್ಲಾ ಗೊತ್ತಿದ್ದೂ ನಾಟಕ ಮಾಡ್ತೀಯ"

"ಏನು ನಾಟಕ. ಬಾಸ್ ಹೋಗಿದ್ದಾರೆ ಅಂತ ಗೊತ್ತಲ್ವಾ ನಿಂಗೆ"

"ಹೂಂ"

"ಹಾಗಾದ್ರೆ ಅವ್ರು ಹೋಗಿದ್ದೂ ಯಾಕೆ ಅಂತ ಗೊತ್ತಿರಬೇಕಲ್ವಾ?"

"ಇಲ್ಲಪ್ಪಾ...ಸಣ್ಣವರಿಗೆಲ್ಲಿ ಗೊತ್ತಾಗುತ್ತೆ ದೊಡ್ಡವರ ವಿಚಾರ"

"ಬಲೇ ಕಿಲಾಡಿ ಕಣಯ್ಯಾ ನೀನು. ಎಲ್ಲಾ ನನ್ನ ಬಾಯಿಂದಲೇ ಕೇಳಬೇಕೂಂತಾನಾ?"

"ಏನೋ ಬೇಸರ ಕಣಪ್ಪಾ. ಇಲ್ಲಿ ಎಷ್ಟು ವರ್ಷದಿಂದ ಕೆಲಸ ಮಾಡಿದ್ದಾರೆ ಬಾಸು. ಈಗ ಇದ್ದಕ್ಕಿದ್ದಂತೆ ಹೋದರೆ..ನಮಗೆ ಯಾಕೇಂತಾದ್ರೂ ಗೊತ್ತಾಗಬೇಕಲ್ವಾ?"

"ನಮಗೆ ಅಂದರೆ....ಎಲ್ಲರಿಗೂ ನೀನೇನಾ ವಿಷಯ ಹಬ್ಬಿಸ್ತಾ ಇರೋದು?"

"ಹೋಗಪ್ಪಾ ಸುಮ್ಮನೆ. ನಾನು ಹೇಳೋಕೆ ಮೊದಲೇ ಎಲ್ಲರಿಗೂ ಗೊತ್ತಿತ್ತು ಬಾಸು ಬಿಟ್ಟಿದ್ದಾರೆ ಅಂತ"

"ನನ್ಗೆ ಒಂದು ವಿಷ್ಯ ಅರ್ಥ ಆಗೋದೇ ಇಲ್ಲ. ಇಲ್ಲಿ ಗುಟ್ಟಾದ ವಿಷ್ಯ ಇಲ್ಲರಿಗೂ ತಿಳಿದುಬಿಡುತ್ತೆ. ಅದೇ ಗೊತ್ತಿರಬೇಕಾದ್ದು ಯಾರಿಗೂ ಎಷ್ಟು ಹೇಳಿದ್ರೂ ನೆನಪಿರೊಲ್ಲಾ"

"ಅದು ಹಾಗೇನೇ ಬಿಡಪ್ಪಾ. ಬಾಸು ಯಾಕೆ ಬಿಟ್ಟಿದ್ದು?"

"ಅರೇ ನನನ್ನ ಯಾಕೆ ಕೇಳ್ತೀಯಾ? ಯಜಮಾನರನ್ನ ಕೇಳು"

"ನೀನೂ ಒಳ್ಳೇ ಇದ್ದೀಯ ಬಿಡಪ್ಪಾ. ನಾನು ಯಜಮಾನರ ಮುಂದೆ ನಿಂತು ಕೇಳಕಾಗುತ್ತಾ?"

"ನಿನ್ನ ಬಾಸ್ ಅಲ್ವಾ. ಕೇಳು ನೀನೇ"

"ಯಜಮಾನರನ್ನ ಕೇಳೋದು, ನಿನ್ನ ಕೇಳೋದು, ಎರಡೂ ಒಂದೇ ಅಲ್ವೇನಪ್ಪಾ"

"ಅರೆರೇ..ಏನು ನನ್ನನ್ನ ಹತ್ತಿಸ್ತಾ ಇದ್ದೀಯ"

"ನಿನ್ನನ್ನ ಏನಪ್ಪಾ ಹತ್ಸೋದು? ನೀನಿರೋದೇ ಅಲ್ಲಿ ಮೇಲೆ. ನಮ್ಮೆಲ್ಲರಿಗಿಂತ ಮೇಲೆ"

"ಓಹೋ ಈಗ ನೆನಪಿಗೆ ಬಂತಾ ನಿಮಗೆಲ್ಲಾ ನಾನು ಯಾರು ಅಂತ"

"ನನಗಂತೂ ಮೊದಲಿನಿಂದಲೂ ನೀನು ಅಲ್ಲೇ ಇದ್ದೆ ಕಣಪ್ಪಾ"

"ನಿನ್ನ ಬಾಸು ಹಾಗೇ ಯೋಚಿಸಿದ್ದರೆ ಇವತ್ತು ಅವನಿಗೆ ಈ ಪರಿಸ್ಥಿತಿ ಬರ್ತಾ ಇರ್ಲಿಲ್ಲ"

"ಅಂದ್ರೆ"

"ಅಂದ್ರೆ ನಿಮ್ಮ ಬಾಸು ತನ್ನನ್ನ ತಾನು ಏನು ಅಂದ್ಕೊಂಡಿದ್ದ ಅಂತ. ಅದಕ್ಕೇ ಯಜಮಾನರು ಅವನನ್ನ ಮನೆಗೆ ಕಳಿಸಿದರು"

"ಹಾಗಾದ್ರೆ ಬಾಸು ರಾಜೀನಾಮೆ ಕೊಟ್ಟಿಲ್ವಾಪ್ಪಾ. ಅವರನ್ನ ತೆಗೆದು ಹಾಕಿದ್ರಾ?"

"ಒಂಥರಾ ಹಾಗೇನೇ. ಆ ಮನುಷ್ಯ ತಲೆ ಗಟ್ಟಿ ಇದೆ ಅಂತ ಬಂಡೆಗೆ ಚಚ್ಚಲು ಹೋದ್ರು. ನಾವು ಬಿಡ್ತೀವಾ? ತಲೆ ಜೊತೆ ಅವನ ಪೂರ್ತಿ ದೇಹ ಚೂರು ಚೂರು ಮಾಡಿದ್ದೇವೆ"

"ಏನಪ್ಪಾ ನೀನು ಹೇಳೋದು. ಒಂದೂ ಅರ್ಥ ಆಗ್ತಾ ಇಲ್ಲ"

"ಏ! ಆ ನಿನ್ನ ಬಾಸ್ ಇದ್ದಾನಲ್ಲಾ. ಅವನಿಗೆ ಯಜಮಾನ್ರು ಹೇಳೀದ್ರು. ನೀನೇ ರಾಜೀನಾಮೆ ಕೊಡು. ಇಲ್ಲದಿದ್ದರೆ ನಾನೇ ತೆಗೆದು ಹಾಕ್ತೀನಿ ಅಂತ. ಬರೆದು ಹೋದ ನೆನ್ನೇನೇ. ಇನ್ನೇನು ಮಾಡ್ತಾನೆ? ಇನ್ನು ನಿನ್ನ ಬಾಸು ಈ ಕಡೆ ತಲೆ ಹಾಕೀನೂ ಮಲಗಲ್ಲ"

"ಮತ್ತೆ ಪೀ.ಎಫೂ, ಅದೂ ಇದೂ ಅಂತ ಸೆಟ್ಲಮೆಂಟ್ ಇರುತ್ತಲ್ಲಪ್ಪಾ"

"ಏನು...ಪೀ.ಎಫ್ಫಾ? ಅದನ್ನೆಲ್ಲಾ ನಾವೇ ಹಿಡಿದುಕೊಂಡಿದ್ದೇವೆ. ಏನು ಮಾಡಿದ್ದಾನೆ ಗೊತ್ತಾ ನಿನ್ನ ಬಾಸು. ರಾಶಿ ರಾಶಿ ದುಡ್ಡು ನುಂಗಿದ್ದಾನೆ. ಅದಕ್ಕೇ ಅವನ ಎಕೌಂಟೂ ಹಿಡಿದಿಟ್ಟಿದ್ದೇವೆ. ಅವನೇ ಯಜಮಾನ್ರಿಗೆ ಇನ್ನೂ ದುಡ್ಡು ಕೊಡಬೇಕು. ಅದಕ್ಕೇ ಹೇಳಿದ್ದು - ಅವನ ದೇಹವನ್ನೂ ಪುಡಿ ಪುಡಿ ಮಾಡಿದ್ದೇನೆ ಅಂತ"

"ಏನು....ನಮ್ಮ ಬಾಸು ದುಡ್ಡು ತಿಂದಿದ್ದಾರಾ...ಇಲ್ಲಪ್ಪಾ...ನಾನು ನಂಬೊಲ್ಲಾ"

"ಏ ಹೋಗೋ. ನೀನು ನಂಬಿದ್ರೆಷ್ಟು, ಬಿಟ್ರೆಷ್ಟು. ನಂಬಬೇಕಾದ ಯಜಮಾನರು ನಂಬಿಯಾಗಿದೆ. ನಿಮ್ಮ ಬಾಸಿಗೆ ತಕ್ಕ ಪಾಠ ಕಲಿಸಿಯೂ ಆಗಿದೆ"

"ಛೇ! ಹೋಗ್ಲಿ ಬಿಡಪ್ಪಾ..ಈಗ ಮುಂದೇನು"

"ಮುಂದ್ರೆ ಅಂದ್ರೆ...ಅವನ ಅಪ್ಪನಂತಾ ಬಾಸ್ ಬರ್ತಾರೆ ನಿನಗೆ ನಾಳೆಯಿಂದ"

"ಅಂದ್ರೆ ಅಷ್ಟು ಬೇಗ ಹೊಸ ಬಾಸು ಸಿಕ್ಕಿದರಾ?"

"ಬಾಸ್ ಅಂದ್ರೆ ಏನು ಆಕಾಶದಲ್ಲಿರ್ತಾರೇನೋ? ಕಾಸು ಸುರಿದ್ರೆ ಲೈನಲ್ಲಿ ನಿಲ್ತಾರೆ ನಿನ್ನ ಬಾಸುಗಳು"

"ಆದ್ರೆ ಹಳೇ ಬಾಸಿನ ತರದವರು ಸಿಗಬೇಕಲ್ಲಪ್ಪಾ. ಅವರಷ್ಟು ಶ್ರದ್ಧೆ, ಅವರು ಗಳಿಸಿದ ಗೌರವ, ಅವರಿಗಿದ್ದ ವಿದ್ಯೆ..."

"ಏ ನಿಲ್ಸೋ. ಏನು ನಿನ್ನ ಬಾಸ್ ಒಬ್ಬನೇನಾ ಸಾಚಾ ಇಲ್ಲಿ. ನಾವೆಲ್ಲಾ ಗತಿ ಇಲ್ಲದೇ ಬಿದ್ದವರಾ"

"ನಾನೇನು ಹಾಗೆ ಹೇಳಿಲ್ಲಾಪ್ಪಾ...."

"ಬಿಡು ಬಿಡು. ನೀವೆಲ್ಲಾ ಎಷ್ಟಾದರೂ ಅವನ ಪಾರ್ಟೀನೇ. ಇರಲಿ ಈ ಹೊಸ ಬಾಸ್ ಬಂದ ಮೇಲೆ ಇದೆ ನಿಮಗೆ ಶನಿಕಾಟ"

"ಇರಲಿ ಬಿಡಪ್ಪಾ. ನಮಗೆ ಯಾರು ಬಾಸಾದರೇನು? ನಮ್ಮ ಕೆಲಸ ನಾವು ಮಾಡ್ಕೊಂಡಿರೋದು ಅಷ್ಟೇ. ತಿಂಗಳ ಕೊನೆಯಲ್ಲಿ ಸಂಬಳಕ್ಕೆ ಮೋಸ ಆಗದಿದ್ದರೆ ಆಯ್ತು ಅಷ್ಟೇ."

"ಹಾಗೆ. ಹಾಗೆ ಸುಮ್ಮನಿದ್ದರೆ ನಿನ್ನ ಬಾಸ್ ಈಗ ಮನೆಯಲ್ಲಿ ಕೂರ್ತಾ ಇರ್ಲಿಲ್ಲ"

"ಆಯ್ತಪ್ಪಾ. ನಾನಿನ್ನ ಬರಲಾ"

"ಹೂಂ ಹೋಗು. ಎಲ್ಲರಿಗೂ ತಮಟೆ ಬಾರಿಸಿ ಹೇಳು. ಯಜಮಾನರ ದುಡ್ಡು ತಿಂದು ಓಡಿ ಹೋದ ನಿನ್ನ ಆ ಬಾಸ್ ಅಂತ. ಮತ್ತೆ ನಾಳೆ ಹೊಸ ಬಾಸ್ ಬರ್ತಾರೆ. ಅವರ ಜೊತೆ ಎಲ್ಲರಿಗೂ ಸರಿಯಾಗಿರಲು ಹೇಳು. ಇಲ್ಲದಿದ್ದರೆ ಎಲ್ಲರಿಗೂ ನಿನ್ನ ಬಾಸ್ ಗೆ ಆದ ಗತಿಯೇ ಆಗುತ್ತೆ. ನಿನಗೂ"

**********************************************************************************


"ಹೋಗಿ ಬಂದ್ಯಾ. ಏನು ವಿಷಯಾಂತ ಗೊತ್ತಾಯ್ತ?"

"ಹೋಗಪ್ಪಾ. ನೀವಲ್ಲಾ ಸೇರಿ ನನ್ನನ್ನೇ ಯಾವತ್ತು ಬಕರಾ ಮಾಡ್ತೀರಾ"

"ಇರಲಿ ಬಿಡು. ಏನು ವಿಷಯ ಅಂತ ಹೇಳು. ಎಲ್ಲರೂ ಕಾಯ್ತಿದ್ದಾರೆ"

"ಬಾಸನ್ನ ಯಜಮಾನರು ಬಯ್ದು ಮನೆಗೆ ಕಳಿಸಿದ್ರಂತೆ"

"ನಾನು ಹೇಳ್ಲಿಲ್ವಾ ನಿಮಗೆಲ್ಲಾ. ಪಕ್ಕಾ ಇದೇ ಕೇಸೂಂತ. ಯಾರೂ ನಂಬ್ಲಿಲ್ಲ. ಈಗ ಕೇಳಿ"

"ಏ ನೀನು ಸುಮ್ನಿರೋ. ಅವನು ಕತೆ ಹೇಳಿ ಮುಗಿಸಲಿ. ಆಮೇಲೆ ನಾನು ನಾವು ಡಿಸ್ಕಸ್ ಮಾಡೋಣ"

"ನಮಗೇನು ಹಕ್ಕಿದೆ ಇಲ್ಲಿ ಅಂತ. ಡಿಸ್ಕಸ್ ಅಂತೆ ಡಿಸ್ಕಸ್"

"ಹುಶ್!ಹುಶ್! ಯಾರೂ ಮಧ್ಯೆ ಮಾತಾಡಬೇಡಿ. ಅವನ ಕತೆ ಮುಗಿಯಲಿ ಮೊದಲು. ನೀನು ಹೇಳು, ಯಜಮಾನರು ಯಾಕಂತೆ ಬಾಸ್ ನ ಬಯ್ದಿದ್ದು"

"ಏನೋಪ್ಪಾ. ನಮ್ಮ ಬಾಸು ದುಡ್ಡು ತಿಂದಿದ್ದಾರಂತೆ. ಅದು ಯಜಮಾನರಿಗೆ ಗೊತ್ತಾಯ್ತಂತೆ. ಅದಕ್ಕೇ ನೆನ್ನೆ ಬಯ್ದು ಕೆಲಸ ಬಿಡಿಸಿದರಂತೆ"

"ಹಾಗಂತ ಆ ಚೇಲಾ ನಿನಗೆ ಹೇಳಿದ್ನಾ?"

"ಹೇ ಸುಮ್ನಿರೂ. ಅವನು ಚೇಲಾ ಅಲ್ಲ. ಯಜಮಾನರ ಖಾಸಾ ಮಚ್ಚ"

"ಈಗೀಗ ಯಜಮಾನರಿಗಿಂತ ಅವನದೇ ಜೋರು ದರ್ಬಾರಿಲ್ಲಿ"

"ಅವನೇ ಒಂದು ದಿನ ಯಜಮಾನರನ್ನೂ ಓಡಿಸಿ ಅವರ ಕುರ್ಚಿಯಲ್ಲಿ ಕೂತ್ಕೋತಾನೆ"

"ಹಾಗಾದರೆ ನಾವಲ್ಲಾ ಮನೆಗೆ ಗ್ಯಾರೆಂಟಿ"

"ಅಂತಾ ಬಾಸ್ ನನ್ನೇ ಮನೆಗೆ ಕಳಿಸಿದ...ಪಾಪಿ...ನಮ್ಮನ್ನ ಬಿಡ್ತಾನಾ?"

"ಅಲ್ಲಾ...ನಮ್ಮ ಬಾಸ್ ದುಡ್ಡು ತಿನ್ತಾರಾ?"

"ಇಲ್ಲ"

"ಇಲ್ಲವೇ ಇಲ್ಲ"

"ಬಾಸ್ ಇಲ್ಲಿ ಸೇರಿ ಒಂದು ವರ್ಷಕ್ಕೆ ನಾನು ಇಲ್ಲಿಗೆ ಬಂದೆ. ನಾನು ಬಾಸ್ ನ ಸರಿಯಾಗಿ ಅರ್ಥ ಮಾಡಿಕೊಂಡು ಹೇಳ್ತೀನಿ - ಇದೆಲ್ಲಾ ಸುಳ್ಳು. ಆ ಚೇಲಾನೇ ಏನೋ ಮಾಡಿದ್ದಾನೆ. ಏಯ್. ಅವನು ನಮ್ಮ ಬಾಸ್ ಬಗ್ಗೆ ಇನ್ನೇನು ಹೇಳ್ದ?"

"ಇನ್ನೇನು ಇಲ್ಲಪ್ಪಾ. ಅಷ್ಟೇ. ಬಾಸು ಹಣ ತಿಂದಿದ್ದಾರಂತೆ. ಅದಕ್ಕೇ ಅವರನ್ನ ಮನೆಗೆ ಕಳಿಸಿದ್ದಾರಂತೆ. ಬಾಸಿನ ಪಿ.ಎಫ್ ಎಲ್ಲಾ ಹಿಡಿದಿಟ್ಟಿದ್ದಾರಂತೆ, ಬಾಕಿ ವಸೂಲಿಗೆ"

"ಮೈ ಗಾಡ್! ಬಾಸ್ ತಮ್ಮ ಮಗಳ ಮದುವೆ ಮುಗಿಸಿ ವರ್ಷವಾಗಿಲ್ಲ. ಭಯಂಕರ ಸಾಲ ಬೇರೆ ಮಾಡಿದ್ದಾರೆ. ಪಾಪ ಹೀಗೇನಾ ಅವರನ್ನ ನೋಡಿಕೊಳ್ಳೋದು ಇವರು"

"ಇಲ್ಲಿ ಅವರ ಜೊತೆ ಮೊದಲಿನಿಂದಲೂ ಕೆಲಸ ಮಾಡ್ತಾ ಇದ್ದೀನಿ. ಮೊದಲಿದ್ದಿದ್ದು ನಾವಿಬ್ಬರೇ. ನನ್ನನ್ನ ಮನೆಗೆ ರಾತ್ರಿ ಕಳಿಸಿ ಬಾಸ್ ಮತ್ತೂ ಬಹಳ ಹೊತ್ತು ಕೆಲಸ ಮಾಡ್ತಾ ಇದ್ರು"

"ಹೌದು. ನಾನು ಸೇರೋವಾಗ್ಲೂ ನನಗೆ ಅವರೇ ಎಲ್ಲಾ ಕೆಲಸ ಹೇಳ್ಕೊಟ್ಟಿದ್ರು"

"ನಾನು ಅವರೂ ಮೊದಲ ವರ್ಷಗಳಲ್ಲಿ ಪಟ್ಟ ಪಾಡು ದೇವರಿಗೇ ಪ್ರೀತಿ"

"ನನಗೆ ಗೊತ್ತಿರುವಂತೆ ಇಲ್ಲಿ ಲಾಭ ಜಾಸ್ತಿ ಆಗುವಂತೆ ಮಾಡಿದ್ದೇ ಬಾಸು"

"ಹೌದು ನಾವು ಮೊದಲು ಬಂದಾಗ ಇಲ್ಲಿ ಏನಿತ್ತು. ಬಾಸ್ ತಮ್ಮ ಜೀವನವನ್ನೇ ಪಣ ಇಟ್ಟು ಲಾಭ ತಂದರು. ಈಗ...."

"ಹೌದಪ್ಪಾ. ನಾನು ರಾತ್ರಿ ಇರ್ತೇನೆ ಅಂದ್ರೆ ನನ್ನನ್ನೂ ಮನೆಗೆ ಕಳಿಸಿ ಒಬ್ಬರೇ ಕೆಲಸ ಮಾಡ್ತಾ ಕೂತಿದ್ರು"

"ಅವರು ಇಲ್ಲಿ ಮಾಡಿದ ಕೆಲಸಾನೇ ಬೇರೆ ಕಡೆ ಮಾಡಿದ್ರೆ...ರಾಜ..ರಾಜನ ತರ ಇರಬಹುದಿತ್ತು"

"ಅವರಿಗೆ ಮೊದಲಿನಿಂದಲೂ ಸೆಂಟಿಮೆಂಟ್. ಯಾರೂ ಕೆಲಸ ಕೊಡದಾಗ ಯಜಮಾನರು ಕರೆದು ಕೆಲಸ ಕೊಟ್ರೂ ಅಂತ"

"ಯಜಮಾನರು ದೇವರು ಬಿಡಿ"

"ಹೌದು. ಯಜಮಾನರು ಒಳ್ಳೆಯವರೇ. ಅವರು ಈ ಚಿಲ್ಲರೆ ಮನುಷ್ಯನ ಮಾತು ಯಾಕೆ ನಂಬ್ತಾರೋ ಗೊತ್ತಿಲ್ಲ"

"ನನಗೂ ಅದೇ ಸಂಶಯ. ಮೊದಲೆಲ್ಲಾ ಬಾಸ್ ಮತ್ತು ನಾನು ನೇರವಾಗಿ ಯಜಮಾನರನ್ನ ನೋಡ್ತಿದ್ದೆವು. ಈ ಮನುಷ್ಯ ಬಂದ ಮೇಲೆ ಯಜಮಾನರ ಮುಖ ನೋಡೋದೇ ಕಡಿಮೆ ಆಗಿದೆ"

"ಹೌದು ನಮಗೆಲ್ಲಾ ಯಜಮಾನರ ಮುಖ ನೋಡಿದ್ದೇ ನೆನೆಪಿಲ್ಲ"

"ಆ ಕಾಲದಲ್ಲಿ ನಾನೇ ಯಜಮಾನರಿಗೆ ಟೀ ಕೊಡ್ತಾ ಇದ್ದೆಪ್ಪಾ. ಮೊನ್ನೆ ಕಾಲು ನೋವು ಜಾಸ್ತಿಯಾಗಿ ಸ್ವಲ್ಪ ರಜಾ ಕೇಳೋಣಾಂತ ಅಂತ ಹೋದ್ರೆ ಬಿಡ್ಲಿಲ್ವಲ್ಲಪ್ಪಾ ಆ ಮನುಷ್ಯ"

"ನೀನೇನು ಬಿಡು ಅವನ ಜೊತೆಗೂ ಹಾಯಾಗಿ ಮಾತಾಡ್ತೀಯಾ"

"ನಾನೇನಪ್ಪಾ ಮಾಡಲಿ. ನಾನು ಯಾರನ್ನೂ ಬಿಡಕ್ಕಾಗೊಲ್ಲ"

"ಹುಶ್...ಹುಶ್..ಪಾಪ ಅವನನ್ನ ಯಾಕೆ ಗೋಳು ಹೊಯ್ಕೋತೀರಾ? ಅವನ ವಿಷಯ ಬಿಡಿ. ಈಗ ಬಾಸ್ ನ ಮ್ಯಾಟರ್ ಏನು ಮಾಡೋಣ"

"ಅದಕ್ಕಿಂತ ಮೊದಲು ನಮಗೆ ಸತ್ಯ ಏನೂಂತ ಗೊತ್ತಾಗ್ಬೇಕು"

"ಏನು ಮಹಾ ಸತ್ಯ? ಯಾಕೆ ನೀವಲ್ಲಾ ಇಷ್ಟು ಇನೋಸೆಂಟ್ ಗಳ ತರಾ ಆಡ್ತೀರಾ?"

"ಅಂದ್ರೆ"

"ಅಂದ್ರೆ ನಿಮಗೂ ಗೊತ್ತಿದೆ, ನನಗೂ ಗೊತ್ತಿದೆ ಬಾಸ್ ಯಾಕೆ ಹೋದ್ರೂಂತ. ಮತ್ತೆ ಯಾಕೆ ಇಷ್ಟೆಲ್ಲಾ ರಾದ್ದಾಂತ"

"ಇವತ್ತು ಬಾಸ್. ನಾಳೇ ನಾನು, ನೀನು ಯಾರಿಗಾದರೂ ಹೀಗೆ ಆಗಬಹುದು. ಅದಕ್ಕೆ"

"ಅದಕ್ಕೆ...ಅದಕ್ಕೆ...ಏನು ಮಾಡಬೇಕೂಂತ ನಿನ್ನ ಮಾತು"

"ನ್ಯಾಯ ಕೇಳೋಣ"

"ಯಾರ ಹತ್ರ"

"ಎನ್ಯಾರ ಹತ್ರ. ಯಜಮಾನರ ಬಳಿ ಹೋಗಿ ಕೇಳೋಣ"

"ಏನೂಂತ ಕೇಳ್ತೀಯ?"

"ಅರೇ! ಇದೊಳ್ಳೆ ಕತೆ ಆಯ್ತಲ್ಲಾ. ಬಾಸ್ ನ ಯಾಕೆ ತೆಗೆದ್ರಿ ಅಂತ ಕೇಳೋದು"

"ಆಗ ಯಜಮಾನರು - ಇಲ್ಲ ಬಾಸ್ ರಾಜೀನಾಮೆ ಕೊಟ್ಟು ಹೋಗಿದ್ದಾರೆ ಅಂತ ಹೇಳ್ತಾರೆ. ಏನ್ಮಾಡ್ತೀಯ"

"ಕಮಾನ್ ನಮಗೆಲ್ಲಾ ಗೊತ್ತು. ಅವರು ಬೇಕೂಂತ ರಾಜೀನಾಮೆ ಕೊಟ್ಟಿಲ್ಲ, ಬಲವಂತದಿಂದ ತೆಕೊಂಡಿದ್ದಾರೆ ಅಂತ"

"ಹಾಗೇಂತ ನೀನು ಯಜಮಾನರ ಮುಂದೆ ಹೇಳ್ತೀಯಾ"

"ನಾನೊಬ್ಬ ಯಾಕೆ...ನಾವೆಲ್ಲಾ ಸೇರಿ ಕೇಳೋಣ"

"ಸ್ವಲ್ಪ ಸುಮ್ಮನಿರ್ತೀಯಾ. ಯಾರು ಬರ್ತಾರೆ ಸ್ವಲ್ಪ ಕೇಳು"

"ಯಾಕೆ ಸಂಶಯ. ಬಾಸ್ ಇಲ್ಲಿ ತುಂಬಾ ವರ್ಷದಿಂದ ದುಡ್ದಿದ್ದಾರೆ. ನಮಗೆಲ್ಲಾ ಕೆಲಸ ಕಲಿಸಿಕೊಟ್ಟಿದ್ದಾರೆ. ನಮ್ಮೆಲ್ಲರಿಗೂ ಒಂದಲ್ಲಾ ಒಂದು ತರದಲ್ಲಿ ಸಹಾಯಾನೂ ಮಾಡಿದ್ದಾರೆ"

"ಹೌದು. ನಾನು ಇಲ್ಲಾ ಅಂತ ಹೇಳಲ್ಲ. ಆದರೆ ಈ ಸಮಯದಲ್ಲಿ ಅದೆಲ್ಲಾ ಮುಖ್ಯ ಅಲ್ಲ. ಅವರು ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಅಷ್ಟೇ"

"ಹಾಗಾದರೆ ನೀನು ಹೇಳೋದು ನಾನು ಹೀಗೆ ಸುಮ್ಮನಿರಬೇಕೂಂತಲಾ?"

"ಇನ್ನೇನೂ ನಾವು ಮಾಡಕ್ಕೇ ಆಗೊಲ್ಲಾ"

"ನಾನು ಒಪ್ಪಲ್ಲ. ನಾನು ಯಜಮಾನರನ್ನ ಹೋಗಿ ಕೇಳಲೇ ಬೇಕು"

"ಏಯ್ ನಿನಗೆ ನಾನು ಹೇಳ್ತಾ ಇರೋದು ಅರ್ಥ ಆಗ್ತಾ ಇಲ್ವಾ? ಇಲ್ಲಿ ನಮಗೆಲ್ಲಾ ಬಾಸ್ ಬಗ್ಗೆ ಗೌರವ ಇದೆ. ಆದರೆ ಈಗ ನಾವೇನೂ ಮಾಡೊಕ್ಕಾಗಲ್ಲ"

"ಇಲ್ಲ. ನಾನು ಯಜಮಾನರ ಹತ್ರ ಹೋಗ್ತೇನೆ. ನಂಗೊತ್ತು, ನನ್ನ ಜೊತೆ ಇವರೆಲ್ಲಾ ಬರ್ತಾರೆ. ನೀನೂ ಬರ್ತೀಯಾ. ನಾವೆಲ್ಲಾ ಸೇರಿ ಕೇಳೋಣ ಯಜಮಾನರನ್ನ - ಇದು ನ್ಯಾಯಾನಾ ಅಂತ"

"ನಿನಗೆ ಎಷ್ಟು ಹೇಳಿದ್ರು ಅಷ್ಟೇ. ಆಯ್ತು ಕೇಳಿ ನೋಡು. ನಿನ್ನ ಜೊತೆ ಬರೋಕೆ ಯಾರ್‍ಯಾರು ತಯಾರಿದ್ದಾರೆ ಅಂತ"

"ಅದನ್ನೇನು ಕೇಳೋದು. ಎಲ್ಲಾರೂ ಬರ್‍ತಾರೆ ಅಷ್ಟೇ"

"ಹಾಗಾದರೆ ನಾನೇ ಕೇಳ್ತೀನಿ. ನೋಡೀಪ್ಪಾ ನೀವೀಗ ಯಜಮಾನರ ಜೊತೆ ಹೋಗೋಕೆ ತಯಾರಿದ್ದೀರಾ?"

"....."

"........"

".................."

"........"

"....."

"ನೋಡೋ...ನೋಡೋ...ಇಷ್ಟೇ...ಹೋಗಲಿ ಬಿಡು ನಾನು ಬರ್‍ತೀನಿ. ನೀನು ಯಜಮಾನರ ಹತ್ರ ವಿಷ್ಯ ಹೀಗೆ ಹೀಗೆ ಅಂತ ಹೇಳ್ತೀಯಾ"

"ಓಹೋ. ಅದರಲ್ಲೇನಂತೆ"

"ನೋಡು ನೀನು ಅಲ್ಲಿಗೆ ಹೋದರೆ ಆ ಮನುಷ್ಯನ ಕೆಟ್ಟ ದೃಷ್ಟಿ ನಿನ್ನ ಮೇಲೂ ಬೀಳುತ್ತೆ. ಮತ್ತೆ ನೀನೂ ಮನೆಗೆ ಹೋಗ್ತೀಯ ಅಷ್ಟೇ"

"ಹೋಗೋ ಹಾಗೇನು ಆಗೊಲ್ಲ"

"ಏಯ್ ಯಾವ ಲೋಕದಲ್ಲಿ ಇದ್ದೀಯ ನೀನು. ಅಂತಾ ಬಾಸ್ ನನ್ನೇ ಮನೆಗೆ ಕಳಿಸಿದ್ರು. ನಿನಗೆ ಅವರ ಅನುಭವದಷ್ಟು ವಯಸ್ಸಾಗಿಲ್ಲ. ನೀನ್ಯಾವ ಲೆಕ್ಕ ಇಲ್ಲಿ"

"ಅಂದ್ರೆ ನಾನು ಸುಮ್ಮನೇ ಕೂತಿರ್‍ಬೇಕಾ. ಇಷ್ಟೆಲ್ಲಾ ಅನ್ಯಾಯ ಆಗ್ತಿದೆ ಇಲ್ಲಿ..ಆದ್ರೂ.."

"ಶ್!!ಶ್!! ಒಳ್ಳೇ ಮಗು ತರಾ ಮಾತಾಡ್ತೀಯಪ್ಪಾ ನೀನು. ಪ್ರಪಂಚದ ತಿಳುವಳಿಕೇನೇ ಇಲ್ಲ ನಿನಗೆ. ನೋಡೋ ಹಳೇ ಬಾಸ್ ಒಳ್ಳೇಯವರು. ಅವರಿಂದ ನಾವು ಬೇಕಾದಷ್ಟು ಕಲಿತೆವು. ಅಷ್ಟೇ ಬಿಡು. ನಾಳೆ ಹೊಸ ಬಾಸ್ ಬರ್‍ತಾರೆ. ಅಷ್ಟೇ"

"ಹೊಸ ಬಾಸ್ ಹಳೇ ಬಾಸ್ ನ ಹಾಗೆ ಇಲ್ಲಾಂದ್ರೆ?"

"ಖಂಡಿತ ಹೇಳ್ತೀನಿ ಕೇಳು. ಹಳೇ ಬಾಸ್ ನ ಹಾಗೆ ನಮೆಗೆ ಇನ್ಯಾರೂ ಸಿಗೊಲ್ಲ. ಆದ್ರೆ ಹೊಸ ಬಾಸ್ ನಿಂದಾನೂ ಏನಾದ್ರೂ ಕಲಿಯೋದು ಇರುತ್ತೆ. ಅವರು ಒಳ್ಳೆಯವರಲ್ಲ ಅಂತಾ ಈಗಲೇ ಹೇಗೆ ಹೇಳ್ತೀಯಾ. ನೋಡೋಣ"

"ಏನಾದ್ರೂ...."

"ಏಯ್! ಒಳ್ಳೇವರಿಂದ ಮಾತ್ರೆನೇ ಕಲಿಯೋದಲ್ಲಾ ಕಣೋ. ಕೆಟ್ಟವರಿಂದನೂ ಕಲೀಬೇಕು. ಕೆಟ್ಟವರನ್ನ ನೋಡಿ ಹೀಗಿರಬಾರದು ಅಂತ ಕಲೀಬೇಕು. ಒಳ್ಳೆಯವರನ್ನ ನೋಡಿ ಹೇಗಿರಬೇಕು ಅಂತ ಕಲೀತಿವಲ್ಲಾ, ಹಾಗೆ"

"ನೀನೆನಪ್ಪಾ ಅಂದ್ರೆ......ಸುಮ್ನೆ...ಬಂದಿದೆಲ್ಲಾ ಇರ್‍ಲಿ ಅಂತಾ....."

"ವಿಷಾನೂ ಕುಡಿತೀನಿ ಅಂತಾನಾ. ಹಾಗಲ್ಲ ಅದು. ಇರ್‍ಲಿ ಬಿಡು. ನಾಳೆ ಹೊಸ ಬಾಸ್ ಬರ್‍ತಾರೆ. ಅದಕ್ಕೆಲ್ಲಾ ರೆಡಿ ಮಾಡೋಣಪ್ಪಾ ಮತ್ತೆ"

"ಏನಪ್ಪಾ ಯಾವ ಹಾರ ತರೋಣ ನಾಳೆ ಹೊಸ ಬಾಸಿಗೆ......"

*****************************************************************************

 ಟಿಪ್ಪಣಿಗಳು
ಅಮ್ಮನ ಕ್ಲಬ್ಬು ಮತ್ತು ಮುಂಗಾರು ಮಳೆ

ಇತ್ತೀಚೆಗೆ ಒಂದು ದಿನವೂ 'ಮುಂಗಾರು ಮಳೆ' ಚಿತ್ರದ ಬಗ್ಗೆ ಮಾತಾಡದೆ ಕಳೆಯೋದಿಲ್ಲ. ಈ ಲಿಸ್ಟಿಗೆ ಹೊಸ ಸೇರ್ಪಡೆ ಅಂದರೆ ನನ್ನ ಅಮ್ಮ ಚಿತ್ರ ನೋಡಿ ಬಂದಿದ್ದಾರೆ. ಅರೇ ಇದರಲ್ಲೇನು ಆಶ್ಚರ್ಯ ಇದೆ ಅನ್ನಬೇಡಿ. ಟೀವಿಯಲ್ಲಿ ಬರುವ ನೂರೊಂದು ಸಿನೆಮಾವನ್ನು ಎಂದೂ ನೋಡದ ಅವರು 'ಮು ಮ' ನೋಡಿ ಬಂದಿದ್ದಾರೆ. ಅದೂ ಅವರನ್ನ ನಾವ್ಯಾರೂ ಕರೆದುಕೊಂಡು ಹೋಗಿಲ್ಲ. ಮಲ್ಲೇಶ್ವರಕ್ಕೂ, ಯಶವಂತಪುರಕ್ಕೂ ಇನ್ನೂ ವ್ಯತ್ಯಾಸ ತಿಳಿಯದ ಅಮ್ಮ ತಮ್ಮ ಲೇಡೀಸ್ ಕ್ಲಬ್ಬಿನ ಮಂದಿಯ ಜೊತೆಗೆ ಹೋಗಿ ಸಿನೆಮಾ ನೋಡಿದ್ದಾರೆ. ವಿಶೇಷವೆಂದರೆ ಅವರ ಕ್ಲಬ್ಬಿನಲ್ಲಿ ಅಮ್ಮನಿಗೇ ಹೆಚ್ಚು ಬೆಂಗಳೂರು ಗೊತ್ತಿರೋದು!

ಅರವತ್ತು ದಾಟಿದ ಭಯಂಕರ ಮಡಿಯ 'ಪಾಟಿ ಅಮ್ಮ', ತನ್ನ ಮನೆ ಎಂಬ ಗೂಡಲ್ಲೇ ಪರ್ಮನೆಂಟಾಗಿ ಪ್ರತಿಷ್ಟಾಪನೆಗೊಂಡವರಂತೆ ಕಾಣುವ ಕಮಲಕ್ಕ, ಟೀವಿಯಲ್ಲಿ ಬರುವ ಎಲ್ಲಾ ಧಾರವಾಹಿ ಪಾತ್ರಗಳ ಬಗ್ಗೆ ಸ್ವಂತ ಮನೆಯವರ ಹಾಗೆ ಮಾತಾಡುವ ಸುಶೀಲಮ್ಮ - ಇವರೇ ನಮ್ಮ ಅಮ್ಮನ ಕ್ಲಬ್ಬಿನ ಖಾಯಂ ಸದಸ್ಯರು. ಇನ್ನೂ ಕೆಲವು ಹಂಗಾಮಿ ಸದಸ್ಯರು ಇವರ ಕಮಿಟಿಯಲ್ಲಿ ಇದ್ದಾರೆ. ಕ್ಲಬ್ಬಿನ ಸದಸ್ಯರು ಏನಾದರೂ ಭಯಂಕರ ಸಮಸ್ಯೆ ಎದುರಾದಾಗ ಪರಿಹಾರಕ್ಕಾಗಿ ಈ ಹಂಗಾಮಿ ಸದಸ್ಯರ ಮೊರೆ ಹೋಗುತ್ತಾರೆ.

ಉದಾಹರಣೆಗೆ ಸುಶೀಲಮ್ಮನ ಮಗನಿಗೆ ಈಚೆಗೆ ಮದುವೆ ನಿಶ್ಚಯವಾಯಿತು. ಸೊಸೆ ಮನೆಗೆ ಬಂದ ಮೇಲೆ ಅತ್ತೆಯ ಪಾತ್ರ ಹೇಗಿರಬೇಕೆಂದು ಸಭೆಯಲ್ಲಿ ವಿಸ್ತ್ರುತ ಚರ್ಚೆ ಆಯಿತು. ಇದ್ದುದರಲ್ಲಿ ಪಾಟಿ ಅಮ್ಮನಿಗೆ ಮಾತ್ರ ಸ್ವಲ್ಪ ಅನುಭವ ಇತ್ತು. ಆದರೆ ಅವರಿಗೆ ಮಗ ಇರಲಿಲ್ಲ. ಇದ್ದದ್ದು ಎರಡು ಹೆಣ್ಣು ಮಕ್ಕಳು. ಒಬ್ಬಳು ಅಮೇರಿಕಾದಲ್ಲಿದ್ದರೆ ಇನ್ನೊಬ್ಬಳು ಇಲ್ಲೇ ಇದ್ದಳು. ಪಾಟಿ ಮಗಳ ಮನೆಯಲ್ಲಿಯೇ ಮೊಮ್ಮಕ್ಕಳನ್ನ ನೋಡಿಕೊಂಡು ಇದ್ದರು. ಆದರೆ ಅವರಿಗೂ ಅತ್ತೆಯ ಪಾರ್ಟಿನ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ.

ಹಾಗಾಗಿ ಕ್ಲಬ್ಬಿನ ಸದಸ್ಯರು ತಮ್ಮ ಸಮಸ್ಯೆಯನ್ನು ಹಂಗಾಮಿ ಸದಸ್ಯರೊಬ್ಬರು ಮುಂದಿಟ್ಟರು. ಅವರು ತಮ್ಮ ನಾಕು ಜನ ಗಂಡುಮಕ್ಕಳಿಗೆ ಮದುವೆ ಮಾಡಿ, ಎಲ್ಲರನ್ನೂ ತಮ್ಮ ಸುತ್ತಲೇ ಇಟ್ಟುಕೊಂಡು ದರ್ಬಾರು ನಡೆಸುತ್ತಿದ್ದ 'ಮಹಾ ಅತ್ತೆ'. ಸುಶೀಲಮ್ಮ ಮತ್ತು ಇತರರಿಗೆ ಅವರು ಭರ್ಜರಿಯಾಗಿಯೇ ಸಲಹೆ ನೀಡಿದರೆಂದು ಅಮ್ಮ ನನಗೆ ಆಮೇಲೆ ಹೇಳಿದ್ದರು. ಹೀಗೆ ಅಮ್ಮನ ಕ್ಲಬ್ಬಿಗೆ ಆಗಾಗ ಹಂಗಾಮಿ ಸದಸ್ಯರ ಎಂಟ್ರಿ ಆಗುತ್ತಿತ್ತು. ಅವರೆಲ್ಲಾ ಹಂಗಾಮಿ ಯಾಕೆ ಅಂದರೆ ಅವರೆಲ್ಲಾ ಕ್ಲಬ್ಬಿನ ಮುಖ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ.

ಅಮ್ಮನ ಕ್ಲಬ್ಬಿನ ಮುಖ್ಯ ಕಾಯಕ ಸಂಜೆಯ ವಾಕಿಂಗ್. ಕ್ಲಬ್ಬಿನ ಖಾಯಂ ಸದಸ್ಯರೆಲ್ಲಾ ಒಂದು ನಾಕುವರೆ ಸುಮಾರಿಗೆ ನಮ್ಮ ಮನೆಯಲ್ಲಿ ಜಮಾಯಿಸುತ್ತಾರೆ. ದೂರದ ಪಾರ್ಕೊಂದಕ್ಕೆ ಹೋಗುವ ಈ ಮಂದಿ ಅಲ್ಲಿ ವಾಕಿಂಗ್ ಮಾಡ್ತಾರಂತೆ. ಅಮ್ಮ ಪ್ರಕಾರ ಇಡೀ ಕ್ಲಬ್ಬಿನ ಮಂದಿ 'ಹತ್ತಕ್ಕಿಂತ ಹೆಚ್ಚು' ರೌಂಡನ್ನು ಸ್ಪೀಡಾಗಿ ಹಾಕ್ತಾರಂತೆ. ಹೋಗುವಾಗ ಇಡೀ ರೋಡೇ ತಮ್ಮದೆನ್ನುವಂತೆ ಜೋರಾಗಿ ಬೊಬ್ಬೆ ಹೊಡೆದುಕೊಂಡು ಹೋಗುವ ಇವರು ಅಲ್ಲಿ ಮಾತಾಡದೆ ಮತ್ತು ಒಟ್ಟಾಗಿ ವಾಕಿಂಗ್ ಮಾಡುತ್ತಾರೆಂದು ನಾನು ಇವತ್ತಿನವರೆಗೂ ನಂಬಿಲ್ಲ.


ಇರಲಿ. ಆದರೆ ಅಮ್ಮನ ಪ್ರಕಾರ ಪಾಟಿ ಅಮ್ಮನ ಕಾಲು ನೋವು ಮತ್ತು ಸುಶೀಲಮ್ಮನ ತೂಕ ಎರಡೂ ಕಮ್ಮಿ ಆಗಿದ್ದು ಈ ವಾಕಿಂಗ್ ಮೂಲಕವೇ. ಪಾರ್ಕೇ ಅಮ್ಮನ ಕ್ಲಬ್ಬಿನ ಕಛೇರಿ. ಅಲ್ಲೇ ಚರ್ಚೆಗಳು ನಡೆಯುತ್ತವೆ, ನಿರ್ಧಾರಗಳು ಮಂಡನೆಯಾಗುತ್ತವೆ ಮತ್ತು ಹಂಗಾಮಿ ಸದಸ್ಯರ 'ಎಂಟ್ರಿ' ಕೂಡ ನಡೆಯುತ್ತದೆ. ಅಲ್ಲಿ ನಡೆದ ವಿದ್ಯಮಾನಗಳ ಪೂರ್ತಿ ವಿವರ ಅಮ್ಮ ನನ್ನೆದುರು ರಾತ್ರಿ ತೆರೆದಿಡುತ್ತಾರೆ; ಕೆಲವೊಮ್ಮೆ 'ಯಾರಿಗೂ ಹೇಳಬಾರದು' ಎಂಬ ಕ್ಲಬ್ಬಿನ ನಿಯಮವನ್ನೂ ಮೀರಿ.


ವಾಕಿಂಗ್ ಮುಗಿಸಿ ಮೂಲೆಯ ಬೆಂಚಿನಲ್ಲಿ ಕೂತು ಇವರ ಸಭೆ ಆರಂಭವಾಗುತ್ತದೆ. ನಾನು ನಂಬಿರುವಂತೆ ಪಾರ್ಕಿಗೆ ಬರುವ ಜನರ ಮೇಲೆ ಕಮೆಂಟ್ ಮಾಡುವ ಮೂಲಕವೇ ಸಭೆ ಶುರುವಾಗುತ್ತದೆ. ಪಿಸುಪಿಸು ಮಾತಾಡುತ್ತಾ ಕೂತ 'ಸಂಸ್ಕಾರ ಇಲ್ಲದ' ಜೋಡಿಗಳು, ಮೊಮ್ಮಕ್ಕಳನ್ನ ಆಡಲು ಕರೆದುಕೊಂಡು ಬರುವ ಅಜ್ಜ-ಅಜ್ಜಿಯರು, ಖಾಯಿಲೆಯಿಂದ ಎದ್ದು ಸುಧಾರಿಸಿಕೊಳ್ಳಲು ಬರುವ ರೋಗಿಗಳು, ಬಸುರಿಯರು - ಇವರೇ ಕ್ಲಬ್ಬಿನ ಸಭೆಯಲ್ಲಿ ಚರ್ಚೆಗೊಳಗಾಗುವವರು.


ಪಾರ್ಕಿಗೆ ಬರುವ ಜನರಿಗೆ ತಮ್ಮಿಂದಾದ ಸಹಾಯ ಮಾಡಲು ಕ್ಲಬ್ಬು ಸಿದ್ದವಿರುತ್ತದೆ ಎಂದು ನನಗೆ ತಿಳಿದದ್ದು ಇತ್ತೇಚೆಗೆ. ಒಂದು ದಿನ ಅಮ್ಮ ತಮ್ಮ ಹಳೇ ಮರದ ಪಟ್ಟಿಗೆಯಿಂದ ಏನೋ ಹುಡುಕುತ್ತಿದ್ದರು. ಏನು ಅಂತ ಕೇಳಿದ್ರೆ "ಪಾರ್ಕಿನಲ್ಲಿ ದಿನಾ ಸಿಕ್ತಾಳೆ ಅಂತ ಹೇಳಿಲ್ವೇನೋ ಆ ಬಸುರಿ ಹೆಂಗಸು. ಅವಳು ಹೆರಲಿಕ್ಕೆ ಊರಿಗೆ ಹೋಗ್ತಾಳಂತೆ. ಹುಟ್ಟೋ ಮಗುವಿಗೆ ಇರಲಿ ಅಂತ ಬಜೆ ಕೊಡ್ತಿದ್ದೇನೆ. ಅಮ್ಮ ಅಂತೂ ಬೆಬ್ಬೆಬ್ಬೆ ಅಂತ ಮಾತಾಡುತ್ತೆ. ಮಗುವಾದರೂ ಬಜೆ ತಿಂದು ಸ್ಪಷ್ಟವಾಗಿ ಮಾತಾಡಲಿ ಅಂತ"


ಹಾಗೆ ಒಮ್ಮೊಮ್ಮೆ ಪಾರ್ಕಿನಲ್ಲಿ ನಡೆಯುವ ಸಂಗತಿಗಳು ಅಮ್ಮನ ಮೇಲೆ ವಿಶೇಷ ಪ್ರಭಾವ ಬೀರುತ್ತವೆ. ಮೊನ್ನೆ ಇದ್ದಕ್ಕಿದ್ದಂತೆ ಅವರು "ನನಗೆ ಎಲ್ಲಾ ಚೆಕ್ ಮಾಡಿಸಬೇಕು ಕಣೋ" ಅಂದರು. ಆಯ್ತೂಂತ ಎಲ್ಲಾ ಟೆಸ್ಟ್ ಮಾಡಿಸಿ ಆಯ್ತು. ಕೊನೆಗೆ ಅಮ್ಮ "ಕ್ಯಾನ್ಸರ್ ಟೆಸ್ಟೂ ಮಾಡ್ತಾರೇನೋ ಇಲ್ಲಿ. ಅದೂ ಮಾಡಿಸಬೇಕು ನನಗೆ" ಅಂದರು. ಅಲ್ಲಿ ಮಾತಾಡೋದು ಒಳ್ಳೇದಲ್ಲ ಅಂತ ಅದನ್ನೂ ಮಾಡಿಸಿ ಆಯಿತು. ರಿಪೋರ್ಟ್ ಎಲ್ಲಾ ಒಕೆ ಅಂತ ಬಂದ ಮೇಲೆ ಅಮ್ಮನಿಗೆ ಸಮಾಧಾನ ಆಯಿತೂಂತ ಕಾಣ್ತದೆ ಅದ್ದಕ್ಕೆ ಬಾಯಿಬಿಟ್ಟರು "ಅಲ್ಲಾ ಪಾರ್ಕಿಗೆ ಬರ್ತಾ ಇದ್ದ ನನ್ನದೇ ವಯಸ್ಸಿನ ಹೆಂಗಸು ಮೊನ್ನೆ ಕ್ಯಾನ್ಸರ್ ನಿಂದ ಸತ್ತು ಹೋದಳಂತೆ. ಅದಕ್ಕೆ ನಾನೂ ಚೆಕ್ ಮಾಡಿಸಿಕೊಂಡಿಸಿದ್ದು". ಆಮೇಲೆ ತಿಳಿದ ವಿಷಯವೆಂದರೆ ಅಮ್ಮನ ಕ್ಲಬ್ಬಿನ ಎಲ್ಲಾ ಸದಸ್ಯರೂ ಕಾಲಕಾಲಕ್ಕೆ ಟೆಸ್ಟ್ ಮಾಡಿಸಬೇಕೆಂದು ಠರಾವು ಪಾಸಾಗಿತ್ತಂತೆ.


ಕ್ಲಬ್ಬಿನ ಸದಸ್ಯರು ವಾಕಿಂಗ್ ಮುಗಿಸಿ ಪಾರ್ಕಿನಲ್ಲಿ 'ಗರಿಕೆ ಹುಲ್ಲು' ಕುಯ್ಯಲು ಶುರು ಮಾಡುತ್ತಾರೆ. ಅಮ್ಮನ ಪ್ರಕಾರ ಇದು ಕ್ಲಬ್ಬಿನ ಅತೀ ದೊಡ್ಡ ಸಾಧನೆ. ಮೊದಮೊದಲು ಅಲ್ಲಿದ್ದ ಸೆಕ್ಯೂರಿಟಿ ಮನುಷ್ಯ ಇವರಿಗೆ ಗರಿಕೆ ಕೊಯ್ಯಲು ಅಡ್ಡಿಪಡಿಸುತ್ತಿದ್ದನಂತೆ. ಆದರೆ ಅಮ್ಮ ಮತ್ತವರ ಗುಂಪಿನವರು ಗರಿಕೆ ಹುಲ್ಲಿನ ಮಹಾತ್ಮ್ಯವನ್ನು ಅವನಿಗೆ ತಿಳಿಹೇಳಿ ಅವನಿಂದ ಬರುವ ವಿರೋಧವನ್ನು ಶಮನ ಮಾಡಿದ್ದರು. ಅಮ್ಮನ ಪ್ರಕಾರ ಈಗ ಕ್ಲಬ್ಬಿನ ಸದಸ್ಯರು ಯಾರಾದರು ಪಾರ್ಕಿಗೆ ಬರದಿದ್ದರೆ ವಿಚಾರಿಸುವಷ್ಟರ ಮಟ್ಟಿಗೆ ಸೆಕ್ಯೂರಿಟಿ ಇವರಿಗೆ ಪರಿಚಯವಾಗಿಬಿಟ್ಟಿದ್ದ.


ಪಾರ್ಕಿನ ಗರಿಕೆ ಸೇರುವುದು ಹತ್ತಿರದ ಗಣಪನಿಗೆ. ಕ್ಲಬ್ಬಿನ ಸದಸ್ಯರು ಪಾರ್ಕಿನಲ್ಲಿ 'ವಾಕಿಂಗ್' ಮುಗಿಸಿ ಈ ದೇವಸ್ಥಾನಕ್ಕೆ ಬರುತ್ತಾರೆ. ಅಲ್ಲಿ ಪ್ರಸಾದ ತಿಂದು ಮುಂದೆ ಮಾರ್ಕೆಟ್ ಗೆ ಪ್ರಯಾಣ. ಅಮ್ಮ ಒಮ್ಮೆ ಗುಟ್ಟಾಗಿ ಹೇಳಿದ ಪ್ರಕಾರ ಯಾರಿಗಾದರೂ ಹೆಚ್ಚು ಹಸಿವಾದ ದಿವಸ ಹತ್ತಿರದ ಅಂಗಡಿಯಲ್ಲಿ ಕ್ಲಬ್ಬಿನ ಸದಸ್ಯರು ಪಾನಿ-ಪುರಿ ತಿನ್ನುವುದೂ ಉಂಟು. ಮತ್ತು ನನಗೆ ಬಂದ ಮಾಹಿತಿಯ ಪ್ರಕಾರ ದಿನವೂ ಯಾರಿಗಾದರೂ ಹಸಿವು ಬಂದೇ ಬರುತ್ತದೆ. ಮಾರ್ಕೆಟ್ ನಲ್ಲಿ ಎಲ್ಲರೂ ಒಟ್ಟಾಗಿ ಪಾಪದ ತರಕಾರಿಯವರ ತಲೆ ತಿಂದು ಬ್ಯಾಗ್ ತುಂಬಿಸಿಕೊಂಡು ಮನೆಗೆ ಬರ್ತಾರೆ.


ನೋಡಿ ಅಮ್ಮ 'ಮು ಮ' ಗೆ ಹೋದ ಕತೆ ಹೇಳಲು ಹೊರಟವನು ಏನೋ ಬೇರೆ ಪ್ರವರ ಹೇಳಿಕೊಂಡು ಕೂತೆ. ಒಕೆ ವಿಷ್ಯ ಏನಂದರೆ ಅಮ್ಮನಿಗೆ 'ಮು ಮ' ನೋಡಬೇಕೆಂದು ಒಂದು ದಿನ ಅನಿಸಿಬಿಟ್ಟಿತು. ಅದು ಹೇಗೆ ಅಂದು ಒಂದೇ ಒಂದು ಉಪಕತೆ ಹೇಳಿ ಮೈನ್ ಸ್ಟೋರಿಗೆ ಬರ್ತೀನಿ, ಕ್ಷಮಿಸಿ.


ಅಮ್ಮ ಗಮನ ಇಟ್ಟು ನೋಡೋ ಒಂದೇ ಕಾರ್ಯಕ್ರಮ ಅಂದರೆ 'ಶುಭಾಷಯ'. ಅದರಲ್ಲಿ ಬರುವ ಮಕ್ಕಳ ಭಾವಚಿತ್ರ ನೋಡಿಕೊಂಡು ಅದರ ಮೇಲೆ ರನ್ನಿಂಗ್ ಕಮೆಂಟರಿ ಕೊಡುವುದು ಅವರ ಹಳೇ ಅಭ್ಯಾಸ. "ನೋಡೋ ಎಷ್ಟು ಚೆನ್ನಾಗಿದೆ ಮಗು", "ನಮ್ಮ ವಿನೋದನ ಮಗು ಇದೇ ತರ ಇದೆ ಅಲ್ವೇನೋ", "ದೊಡ್ಡದಾದ ಮೇಲೆ ಘಾಟಿ ಹುಡುಗಿ ಆಗುತ್ತೆ ಕಣೋ ಈ ಮಗು" ಅಂತ ನನಗೆ ಹೇಳುವುದು ಅವರಿಗೆ ರೂಡಿ. ನಾನು ಹಾಂ, ಹೂಂ ಅನ್ನದಿದ್ದರೆ "ಛೇ ಚಡ್ಡಿ ಇಲ್ಲದೇ ಪೋಟೋಕ್ಕೆ ನಿಂತಿದ್ದೀಯಾ ಕಳ್ಳ", "ಕೆಮರಾ ನೋಡಿ ನೆಗಾಡೋ ಪುಟ್ಟ" ಅಂತ ಟೀವಿಯಲ್ಲಿ ಕಾಣುವ ಮಕ್ಕಳ ಜೊತೆನೇ ಮಾತಾಡೋದು ಅವರಿಗೆ ಮಾತ್ರ ಒಲಿದ ವಿಶೇಷ ವಿದ್ಯೆ.


ಹೀಗೆ ಮಕ್ಕಳ ಮೇಲೆ ಕಮೆಂಟ್ ಮಾಡುವ ಅವರಿಗೆ ಇನ್ನೊಂದು ಅಭ್ಯಾಸವೂ ಇದೆ. ಅದೆಂದರೆ ಶುಭಾಷಯ ಹೇಳುವವರ ಪಟ್ಟಿಯನ್ನು ಗಮನ ಇಟ್ಟು ಕೇಳುವುದು. ಅದು ಬೇರೆ ಬೇರೆ ತರಹದ ಭಾವನೆಯನ್ನು ಅವರಲ್ಲಿ ಮೂಡಿಸುತ್ತದೆ. ಪಟ್ಟಿಯಲ್ಲಿ ಕುಟುಂಬದ ಎಲ್ಲರ ಹೆಸರಿದ್ದರೆ ಅಮ್ಮನಿಗೆ ಏನೋ ಖುಷಿ. "ತುಂಬು ಸಂಸಾರದ ಮಗು ಕಣೋ. ಅದೃಷ್ಟವಂತ ಮಗು" ಅನ್ನೋದು ಸ್ಟಾಂಡರ್ಡ್ ಮಾತು. ಇನ್ನು ನಮ್ಮ ಊರಿನ ಹೆಸರು ಅಪ್ಪಿ ತಪ್ಪಿ ಬಂದರಂತೂ ಮುಗೀತು. "ಯಾರೋ ಇದು. ಅವರ ಮಗನಾ....ಆ ಮೂಲೆ ಮನೆಯವರ ತಮ್ಮನಾ...." ಅಂತ ಅವರು ಭಯಂಕರ ಯೋಚನೆಗೆ ಬಿದ್ದುಬಿಡುತ್ತಾರೆ.


ಇದೆಲ್ಲಾ ಮುಗಿದು ಅದರಲ್ಲಿ ಹಾಡು ಶುರುವಾದ ಕೂಡಲೆ ಅವರು ಪರಾರಿ. ಅವರ ಮಟ್ಟಿಗೆ ಈ ಕಾರ್ಯಕ್ರಮ ಕೇವಲ ಮಕ್ಕಳ ಭಾವಚಿತ್ರ ಮತ್ತು ಶುಭಾಷಯ ಕೋರುವವರಿಗಷ್ಟೇ ಸೇರಿದ್ದು. ಮತ್ತೆ ಹಾಡು ಮುಗಿದ ತಕ್ಷಣ ಅವರು ಮತ್ತೆ ಟೀವಿಯ ಮುಂದೆ ಹಾಜರ್. ಹೀಗೆ ಪ್ರತಿನಿತ್ಯ ನಡೆಯುವ ದಿನಚರಿಯಲ್ಲಿ ಬದಲಾವಣೆ ಬಂದದ್ದು 'ಮು ಮ' ದ ಹಾಡ ದಿನವೂ ಎಡೆಬಿಡದೆ ಬರಲು ಶುರು ಆದಾಗ. ಅಷ್ಟರಲ್ಲಿ ನಾನು 'ಮು ಮ' ವನ್ನ ನೋಡಿ, ನೋಡಿ, ನೋಡಿ (!) ಬಂದು ಸಿನೆಮಾ ಹಾಗಿದೆ, ಸಿನೆಮಾ ಹೀಗಿದೆ ಅಂತೆಲ್ಲಾ ಹೇಳ್ತಾ ಇದ್ದೆ. ಹ್ಯಾಗೋ ಅವರ ಮನಸಿನಲ್ಲಿ ಸಿನೆಮಾ ನೋಡಬೇಕೆಂದು ಬಂದಿದೆ.


ನೆನ್ನೆ ಸಂಜೆ ಮನೆಗೆ ಬರ್ತೇನೆ ಅಮ್ಮ ಭಯಂಕರ ಖುಷಿಯಲ್ಲಿದ್ದಾರೆ. ಕಾಲು ತೊಳೆದು ಮನೆ ನುಗ್ಗಿದ ತಕ್ಷಣ ಜೋರಾಗಿ "ಹೇ ನಾನು ಮುಂಗಾರು ಮಳೆ ನೋಡಿ ಬಂದೆ ಕಣೋ" ಅಂದಾಗ ನನಗೆ ಹೇಗಾಗಿರಬೇಡ. ಯಾರ ಜೊತೆ ಅಂದರೆ "ನೀನು ಹೇಳ್ತಾ ಇರ್ತೀಯಲ್ಲಪ್ಪಾ ಲೇಡೀಸ್ ಕ್ಲಬ್ ಅಂತ. ನಾವೇ ಕ್ಲಬ್ಬಿನ ಮೆಂಬರ್ಸ್ ಎಲ್ಲಾ ಸೇರಿ ಹೋಗಿದ್ದೆವು" ಅಂದಾಗ ನಾನು ಇನ್ನೂ ಸಂದೇಹದಿಂದಲೇ ಇದ್ದೆ. ಅದನ್ನು ಗಮನಿಸಿದವರಂತೆ ಅಮ್ಮ "ಪಾಪ ಆ ದೇವದಾಸ ಸಾಯಬಾರ್ದಿತ್ತು ಕಣೋ" ಅಂದಾಗ ನಾನು ವಿಷಯ ನಂಬದೇ ವಿಧಿ ಇರಲಿಲ್ಲ. ಹೇಗಾಯ್ತಪ್ಪಾ ಈ ಪವಾಡ ನಿಮ್ಮ ಕ್ಲಬ್ಬಿನಿಂದ ಅಂತ ಕೇಳಿದಾಗ ಅಮ್ಮ ತೆರೆದಿಟ್ಟ ಕತೆ ಹೀಗಿತ್ತು.


ಅಮ್ಮನ ಕ್ಲಬ್ಬಿನ ಹಂಗಾಮಿ ಸದಸ್ಯರಲ್ಲಿ ರೋಸಿ ಬೋಪಯ್ಯ ಕೂಡ ಒಬ್ಬರು. ನಮ್ಮ ಊರಿನವರೇ ಆದ ರೋಸಿಯವರಿಗೆ ಅಮ್ಮನ ಕ್ಲಬ್ಬಿನಲ್ಲಿ ವಿಶೇಷ ಮರ್ಯಾದೆ ಇತ್ತು. ಯಾಕೆಂದರೆ ಅವರು ಅಮ್ಮನ ಕ್ಲಬ್ಬಿನವರನ್ನು ಮನೆಗೆ ಕರೆದಾಗ ಅವರಿಗೆಲ್ಲಾ ಬೆಳ್ಳಿ ಲೋಟದಲ್ಲಿ ಹಾಲು ಕೊಟ್ಟಿದ್ದರಂತೆ. ಬ್ರಾಹ್ಮಣರೆಂದರೆ ಇವತ್ತಿಗೂ ಇಷ್ಟು ಗೌರವ ಕೊಡುವವರು ಇದ್ದಾರಲ್ಲಾ ಅಂತ ಅಮ್ಮನಿಗೆ ಅವರ ಮೇಲೆ ವಿಶೇಷ ಪ್ರೀತಿ. ಹೀಗೆ ಒಂದು ದಿನ ಅವರು 'ಮು ಮ' ಬಗ್ಗೆ ಕ್ಲಬ್ಬಿನವರಿಗೆ ಹೇಳಿದ್ದಾರೆ. ಅವರು ಹೇಳಿದ ವಿಷಯದಲ್ಲಿ ಅಮ್ಮನ ತಲೆಯಲ್ಲಿ ಉಳಿದದ್ದು ಒಂದೇ. 'ಮು ಮ' ಯಲ್ಲಿ ಮಳೆಯನ್ನ ಭಯಂಕರವಾಗಿ ತೋರಿಸಿದ್ದಾರೆ ಅಂತ.


ಸಾಮಾನ್ಯವಾಗಿ ಕೊಡಗಿನಿಂದ ಬಂದವರಿಗೆ ಮಳೆಯ ಬಗ್ಗೆ ವಿಶೇಷ ಪ್ರೀತಿ ಇದ್ದೇ ಇರುತ್ತದೆ. ಅಮ್ಮನಿಗೂ ಮಳೆ ಅಂದರೆ ಒಂಥರಾ ಇಷ್ಟ. ಕೊಡಗಿನಲ್ಲಿ ಇದ್ದಾಗ ನಿಲ್ಲದ ಮಳೆಗೆ ಯಾವಾಗಲೂ ಬಯ್ಯುತ್ತಿದ್ದವರು ಈಗ ಇಲ್ಲಿ ಬಂದು ಮಳೆ ನೋಡದೆ ಬೇಸರವಾಗಿದ್ದರು. ಮಳೆಗಾಲಕ್ಕೆ ಅಂತ ಹಪ್ಪಳ, ಸೆಂಡಿಗೆ ಹಾಕುವ ಕೆಲಸ ಅವರು ಈಗಲೂ ಇಲ್ಲೂ ಬಿಟ್ಟಿಲ್ಲ. ಈ ಬೆಂಗಳೂರಿನಲ್ಲಿ ಬರುವ ಮಳೆಗೆ ಹಪ್ಪಳ ಕಾಯಿಸಿ ತಿನ್ನೋಕ್ಕಾಗುತ್ತಾ? ಮಳೆ ಬಂತೂಂತ ಹಪ್ಪಳ ಕಾಯಿಸಲು ಕೂತರೆ ಎಣ್ಣೆ ಕಾಯುವ ಮೊದಲೇ ಮಳೆ ನಿಂತಿರುತ್ತದೆ. ಹಾಗಾಗಿ ಅಮ್ಮ ಒಳ್ಳೆ ಮಳೆ ನೋಡಲು ಕಾತರರಾಗಿದ್ದು ಸತ್ಯ.


ಮೊದಲೇ ಶುಭಾಷಯ ಕಾರ್ಯಕ್ರಮದಲ್ಲಿ 'ಮು ಮ' ಹಾಡನ್ನು ನೋಡಿ ಹೇಗೋ ಇಂಪ್ರೆಸ್ ಆಗಿದ್ದ ಅಮ್ಮನಿಗೆ ಮಳೆಯ ಮಾತು ಕೇಳಿ ಕಿವಿ ನಿಮಿರಿದೆ. ಅಮ್ಮ ಆಗಾಗ ಕ್ಲಬ್ಬಿನ ಸದಸ್ಯರಿಗೆ ಕೊಡಗಿನ ಮಳೆ ಬಗ್ಗೆ ಹೇಳಿದ್ದರಂತೆ. "ಇಲ್ಲಿ ಏನ್ರೀ ಮಳೆ. ಮಳೆ ಬರುತ್ತೆ ನಮ್ಮ ಊರಲ್ಲಿ" ಅಂತೆಲ್ಲಾ ಅಮ್ಮ ಮಳೆ ಪ್ರವರ ಹೇಳಿದ್ದಾರೆ. ಊರಿಂದ ಯಾರಾದರೂ ಫೋನ್ ಮಾಡಿ ಮಳೆ ಬರ್ತಾ ಇದೆ ಅಂದರೆ ಅಮ್ಮನ ಮುಖ ಬಾಡಿ ಹೋಗುತ್ತಿತ್ತು. ನನಗನ್ನಿಸ್ತಾ ಇದ್ದ ಹಾಗೆ ಅವರು ಮಳೆಯನ್ನ ಭಯಂಕವಾಗಿ ಮಿಸ್ ಮಾಡ್ತಾ ಇದ್ದರು.


ಅಮ್ಮನಿಗೆ ಕ್ಲಬ್ಬಿನ ಸದಸ್ಯರೆಲ್ಲರಿಗೆ ತಮ್ಮೂರಿನ ಮಳೆ ತೋರಿಸಬೇಕು ಅಂದುಕೊಂಡಿದ್ದರಂತೆ. ಆದರೆ ತಮ್ಮ ತಮ್ಮ ಕೆಲಸದಲ್ಲಿ ಮುಳುಗಿದ್ದ ಅವರೆಲ್ಲಾ ಊರಿಗೆ ಬರುವ ಮಾತು ದೂರವೇ ಉಳಿದಿತ್ತು. ಹೀಗಿದ್ದಾಗ 'ಮು ಮ' ಸಿನೆಮಾದಲ್ಲಿ ಮಳೆ ಇದೆ ಅಂದಾಗ ಅವರಿಗೆ ಎಲ್ಲರಿಗೂ ಮಳೆ ತೋರಿಸುವ ಆಸೆಯಾಗಿದೆ. ಹಾಗಾಗಿ ಕ್ಲಬ್ಬಿನ ಮೀಟಿಂಗನ್ನು ಅರ್ಜಂಟಾಗಿ ನೆನ್ನೆ ಬೆಳಗ್ಗೆ ೧೧.೦೦ ಗಂಟೆಗೆ ಕರೆದಿದ್ದಾರೆ. ಎಲ್ಲರೂ ನಮ್ಮ ಮನೆಗೆ ಬಂದ ಮೇಲೆ ಸಿನೆಮಾಗೆ ಹೋಗುವ ತಮ್ಮ ಐಡಿಯಾ ತಿಳಿಸಿದ್ದಾರೆ. ಅದೇನಾಯ್ತೋ ಎಲ್ಲರೂ ಒಕೆ ಅಂದಿದ್ದಾರೆ. ಆದರೆ ಹೋಗೋಕೆ ಯಾರಿಗೆ ಗೊತ್ತಿದೆ ದಾರಿ!


ಹಾಗೂ ಹೀಗೂ ಮೆಜೆಸ್ಟಿಕ್ ನ ಯಾವುದೋ ಥಿಯೇಟರ್ ನಲ್ಲಿ 'ಮು ಮ' ಇದೆ ಅಂತ ಅಮ್ಮನಿಗೆ ಗೊತ್ತಿತ್ತು. ಆದರೆ ಯಾವ ಥಿಯೇಟರ್ ಅಂತ ಅವರಿಗೆ ಗೊತ್ತಿರಲಿಲ್ಲ. ಬೇರೆಯ ಸದಸ್ಯರು ಅಮ್ಮನಿಗಿಂತ ಬುದ್ದಿವಂತರು. ಹಾಗಾಗಿ ಕೇಳಿ ನೋಡಿ ಗೊತ್ತಿರದ ಥಿಯೇಟರ್ ನಲ್ಲಿ 'ಮು ಮ' ನೋಡಲು ಈ ಕ್ಲಬ್ಬಿನ ಮೆಂಬರುಗಳು ನಿರ್ಧರಿಸಿದ್ದಾರೆ. ಕೊನೆಗೆ ಅಮ್ಮ ಪೇಪರ್ ನೋಡಿ ಇಂತಾ ಥಿಯೇಟರ್ ಅಂತ ಖಚಿತಪಡಿಸಿಕೊಂಡಿದ್ದಾರೆ. ಮೆಚ್ಚಬೇಕಲ್ವಾ ಇವರ ಧೈರ್ಯ!!


ಶಾಲೆಯಿಂದ ಬರುವ ಮೊಮ್ಮಕ್ಕಳನ್ನ ನೋಡಿಕೊಳ್ಳಲು ಪಕ್ಕದ ಮನೆಯವರಿಗೆ ಪಾಟಿ ಅಮ್ಮ ಹೇಳಿ ಬಂದರು. ಸುಶೀಲಮ್ಮನಿಗೆ ಸೊಸೆ ಇರುವುದರಿಂದ ತೊಂದರೆ ಇರಲಿಲ್ಲ. ಕಮಲಕ್ಕ ಮೊದಲು ಒಪ್ಪಲಿಲ್ಲವಂತೆ. ಆದರೆ ಗಂಡ ಬರುವ ಮೊದಲು ನಾವು ಬಂದುಬಿಡ್ತೇವೆ ಅಂತ ಪುಸಲಾಯಿಸಿ ಕರೆದುಕೊಂಡು ಹೋದರಂತೆ. ಪಾಟಿಯೇ ಹೊರಟ ಮೇಲೆ ಕಮಲಕ್ಕನೂ ಧೈರ್ಯ ಮಾಡಿ ಹೊರಟರಂತೆ. ಹೀಗೆ ಈ ನಾಕೂ ಜನ ಆಟೋ ಸ್ಟಾಂಡಿಗೆ ಬಂದು ತಮ್ಮನ್ನು 'ಮು ಮ' ನಡೆಯುವ ಮೆಜೆಸ್ಟಿಕ್ಕಿನ ಥಿಯೇಟರಿಗೆ ಕರೆದುಕೊಂಡು ಹೋಗುವಂತೆ ತಾಕೀತು ಮಾಡಿದೆ.


ಅಲ್ಲಿ ಹೋಗಿ ಭರ್ಜರಿಯಾಗಿಯೇ ಸಿನೆಮಾ ನೋಡಿದ್ದಾರೆ. ಇಂಟರ್ವೆಲ್ ನಲ್ಲಿ ಸಕತ್ತಾಗಿಯೇ ಖರ್ಚು ಮಾಡಿ ವಾಪಸ್ ಬಂದ ಅಮ್ಮನಿಗೆ ಕೊನೆವರೆಗೂ ನೆನೆಪಿನಲ್ಲಿ ಉಳಿದದ್ದು ಮಳೆ ಮತ್ತು ದೇವದಾಸ ಮಾತ್ರ. ದೇವದಾಸ ಸತ್ತಿದ್ದು ಸಾಂಕೇತಿಕ. ಅದಿಲ್ಲದೆ ಕತೆ ಮುಗಿಯುವುದಕ್ಕೆ ಸಾಧ್ಯವಿರಲಿಲ್ಲ ಅಂತ ಅವರಿಗೆ ಹೇಳೋಕೆ ಆಗ್ತಾ ಇಲ್ಲ. "ಊರಿನ ಮಳೆಯನ್ನ ನೋಡಿ ಖುಷಿ ಆಯ್ತು ಕಣೋ" ಅಂತ ಅಮ್ಮ ನೆನ್ನೆಯಿಂದ ಹೇಳುತ್ತಿದ್ದಾರೆ. ಅದು ಕೊಡಗಿನ ಮಳೆಯಲ್ಲ ಅಂತ ಅವರಿಗೆ ಹೇಳಲು ಮನಸ್ಸು ಒಪ್ತಾ ಇಲ್ಲ. ಮತ್ತೆ ಸುರಿವ ಮಳೆಗೆ ಊರಿನ ಹೆಸರು ಸೇರಿಸಬೇಕಾ? ಅಂತಾನೂ ಅನ್ನಿಸ್ತಾ ಇದೆ.


ಸುಡುವ ಬಿಸಿಲು ಶುರು ಆಗಿದೆ. ಇಂತಹ ಸಮಯದಲ್ಲಿ ತಂಪಿನ ಸಿನೆಮಾ ಕೊಟ್ಟು ಅಮ್ಮ ಮತ್ತವರ ಕ್ಲಬ್ಬಿನ ಮೆಂಬರುಗಳನ್ನು ಥಿಯೇಟರ್ ಮೆಟ್ಟಲು ಹತ್ತುವಂತೆ ಮಾಡಿ, ಅಮ್ಮನಿಗೆ ಬೆಂಗಳೂರಿನಲ್ಲೇ ಕೊಡಗು ತೋರಿಸಿಕೊಟ್ಟ ಭಟ್ಟರಿಗೊಂದು ಥ್ಯಾಂಕ್ಸ್ ಇರಲಿ.

 ಟಿಪ್ಪಣಿಗಳು
Monday, January 01, 2007
ಒಂದು ಬ್ಯಾಂಕಿನ ಕತೆ

ಸದಾಶಿವರಾಯರಿಗೆ ಜೀವನದಲ್ಲಿ ಕಷ್ಟವೇನೂ ಇರಲಿಲ್ಲ. ಪಾರಂಪರಿಕವಾಗಿ ಬಂದ ಆಸ್ತಿ, ಜೊತೆಗೆ ಗೌರವ, ಈಗ ಪಂಚಾಯ್ತಿ ಅಧ್ಯಕ್ಷರ ಪಟ್ಟ ಎಲ್ಲವೂ ಅವರಿಗೆ ನಿರಾಯಾಸವಾಗಿಯೇ ದಕ್ಕಿತ್ತು. ಹಾಗೆಂದು ಅವರೆಂದೂ ಕೆಲಸಕ್ಕೆ ಮೋಸ ಮಾಡಿದವರಲ್ಲ. ಊರಿನಲ್ಲಿ ಇದು ಆಗಬೇಕು ರಾಯರೇ ಅಂದರೆ ಅವರು ಯಾವತ್ತೂ ಸಿದ್ದ. ಬೀದಿಗೆಲ್ಲಾ ಎಣ್ಣೆ ದೀಪದ ಬದಲಿಗೆ ಕರೆಂಟ್ ದೀಪ ಹಾಕೋಣ ಅಂತ ಯಾರೋ ಮೀಟಿಂಗ್ ನಲ್ಲಿ ಹೇಳಿದ್ದೇ ತಡ ಬೆಂಗಳೂರಿನವರೆಗೆ ಹೋಗಿ, ಅಲ್ಲಿ ಮಾತಾಡಿ ಊರಿಗೆ ಕರೆಂಟ್ ತಂದಿದ್ದರು. ಈಗ ಊರಿನ ಮಕ್ಕಳು ಸೀಮೆಯಣ್ಣೆ ಹೊಗೆ ಕುಡಿಯದೆ ಓದುತ್ತಿದ್ದಾರೆಂದರೆ ಅದಕ್ಕೆ ರಾಯರೇ ಕಾರಣ. ಊರಿನಲ್ಲಿ ಯಾವುದೇ ಕಾರ್ಯ ನಡೆಯಲಿ - ಅದು ಒಳ್ಳೆಯದೆ ಇರಲಿ, ಕೆಟ್ಟದ್ದೇ ಇರಲಿ - ಅದು ರಾಯರಿಗೆ ತಿಳಿಯದೆ ನಡೆಯುವುದು ಸಾಧ್ಯವಿರಲಿಲ್ಲ. ಆದ್ದರಿಂದಲೇ ಗೋವಿಂದ ಪೈ ತನ್ನ ಹೊಸ ಯೋಜನೆಯನ್ನು ರಾಯರಿಗೇ ಮೊದಲು ತಿಳಿಸಿದ್ದು.

ಈ ಗೋವಿಂದ ಪೈ ಮೂಲತಃ ಘಟ್ಟದ ಕೆಳಗಿನಿಂದ ಇಲ್ಲಿಗೆ ಬಂದವನು. ಅವನಿಗೆ ಇದೇ ಕೆಲಸ ಆಗಬೇಕು ಅಂತೇನೂ ಇರಲಿಲ್ಲ. ಏನು ಕೆಲಸ ಮಾಡಿ ಬೇಕಾದರೂ ಬದುಕುವ ಕಲೆ ಅವನಿಗೆ ಒಗ್ಗಿ ಹೋಗಿತ್ತು. ಬಂದ ಮೊದಲಿಗೆ ಅವನು ಒಂದು ತರಕಾರಿ ಅಂಗಡಿ ಇಟ್ಟುಕೊಂಡಿದ್ದ. ಊರಿನಲ್ಲಿ ಆಗ ವಾರಕ್ಕೆ ಒಂದು ದಿನ ಸಂತೆಯಲ್ಲಿ ಮಾತ್ರ ತರಕಾರಿ ಸಿಗುತ್ತಿದ್ದದು ನೋಡಿ ಅವನು ಈ ಅಂಗಡಿ ಶುರುಮಾಡಿದ. ಮೈಸೂರಿನ ದೊಡ್ಡ ಮಾರ್ಕೆಟ್ ನಿಂದ ತರಕಾರಿ ತಂದು ದಿನವೂ ಮಾರಿದರೆ ಹೆಚ್ಚು ಲಾಭ ಬರುವುದೆಂಬ ಅವನ ಎಣಿಕೆ ಸುಳ್ಳಾಗಲಿಲ್ಲ. ಮೆಲ್ಲೆ ಮೆಲ್ಲೆ ತರಕಾರಿಯ ಜೊತೆ ಹಣ್ಣುಗಳನ್ನೂ ತರಲು ಶುರುಮಾಡಿದ ಅವನಿಗೆ ಯಾವಾಗಲೂ ಏನಾದರೂ ಹೊಸ ವಿಷಯದ ಬಗ್ಗೆಯೇ ಯೋಚನೆ.



ಹೀಗೆ ಒಮ್ಮೆ ಬೆಂಗಳೂರಿಗೆ ಹೋದವನಿಗೆ ಅಲ್ಲಿ ಹಾಲು, ಮೊಸರು ಬೇಕಾದಾಗ ಸಿಗುತ್ತಿದ್ದದು ನೋಡಿ ತಾನು ಏನಾದರು ಮಾಡಬೇಕು ಅನ್ನಿಸಿತು. ಆಗ ಊರಿನಲ್ಲಿ ಹಸು ಇದ್ದವರ ಮನೆಯಲ್ಲಿ ಮಾತ್ರ ಹಾಲು. ಉಳಿದವರು ತೊಟ್ಟು ಹಾಲಿಗೆ ಪರದಾಡಬೇಕಿತ್ತು. ಇಂತಹ ಸಮಯದಲ್ಲಿ ಪೈ ಸುತ್ತಮುತ್ತಲಿನ ಹಳ್ಳಿಯ ಜನರ ಹತ್ತಿರ ಮಾತಾಡಿಕೊಂಡು ಡೈರಿ ತರಹದ ಒಂದು ವ್ಯವಸ್ಥೆ ಹುಟ್ಟುಹಾಕಿದ. ಆದರೆ ಹಳ್ಳಿಗಳಿಂದ ಹಾಲನ್ನು ತರುವುದೇ ಒಂದು ಮಹಾ ಸಾಹಸವಾಗಿತ್ತು. ಬೆಳಗ್ಗೆ ಕರೆದ ಹಾಲನ್ನು ಊರಿಗೆ ತರುವಾಗ ಅರ್ಧ ಹುಳಿಯಾಗಿ ಹೋಗುತ್ತಿತ್ತು. ಪೈಗಳ ತಲೆಗೆ ಆಗ ಒಂದು ಭಯಂಕರ ಐಡಿಯಾ ಬಂತು. ತಲೆಗೆ ವಿಷಯ ಬಂತೆಂದರೆ ಸುಮ್ಮನೆ ಕೂರುವವರಲ್ಲ ಅವರು. ಹೊರಟೇ ಬಿಟ್ಟರು ಮಂಗಳೂರಿಗೆ. ಮುಂದೆ ಒಂದೇ ವಾರದಲ್ಲಿ ಆ ಊರಿಗೆ ಬಸ್ಸು ಬಂತು!


ಪೈಗಳದ್ದು ಭಯಂಕರ ತಲೆ. ಹಾಲು ತರಲು ಒಂದು ಲಾರಿ ತರುವುದೆಂದು ಅವರು ಮೊದಲು ಯೋಚಿಸಿದ್ದರು. ಆದರೆ ಮತ್ತೆ ಅವರಿಗೆ ಲಾರಿಗಿಂತ ಬಸ್ಸೇ ಒಳ್ಳೆಯದೆನಿಸಿತು. ಹೇಗಿದ್ದರೂ ಹತ್ತಿರದ ಹಳ್ಳಿಗಳಿಂದ ಬರುವ ಶಾಲೆ ಹುಡುಗರು, ಕೆಲಸಕ್ಕೆ ಬರುವ ಆಳುಗಳು ನಡೆದುಕೊಂಡೇ ಬರುತ್ತಿದ್ದರು. ಕಾಯಿಲೆ-ಕಸಾಲೆ ಇದ್ದವರು, ವಯಸ್ಸಾದ ಮುದುಕರು, ಬಸುರಿ-ಬಾಣಂತಿಯರು ನಡೆಯಲಾಗದೆ ಕಷ್ಟ ಪಡುತ್ತಿದ್ದರು. ಬಸ್ಸು ಹಾಕಿದರೆ ಹಾಲಿನ ಜೊತೆ ಇವರೆಲ್ಲರಿಗೂ ಉಪಕಾರವಾಗಬಹುದೆಂದು ಅವರಿಗೆ ಅನ್ನಿಸಿತು. ಹಾಗೆಂದು ಅವರು ತುಂಬ ದೊಡ್ಡ ಮನಸ್ಸಿನವರೇನಲ್ಲ. ಬರೇ ಜನರಿಗೆ ಉಪಕಾರ ಮಾಡುವ ಬುದ್ದಿಯೇನೂ ಅವರದಲ್ಲ. ಮುಂದಿನ ಭಯಂಕರ ಯೋಜನೆಗೆ ಹೀಗೆಲ್ಲಾ ಅವರು ಅಡಿಪಾಯ ಹಾಕಿದ್ದರು.


ಎಲ್ಲಿಂದಲೋ ಬಂದು ಹೀಗೆ ಊರಿನವರಿಗೆ ತರಕಾರಿ, ಹಣ್ಣು, ಹಾಲು, ಮೊಸರು ಎಲ್ಲಾ ಸಿಗುವಂತೆ ಮಾಡಿದ್ದ ಪೈಗಳ ಬಗ್ಗೆ ಊರಿನವರಿಗೆ ಸಹಜವಾಗಿಯೇ ಗೌರವ ಬೆಳೆದಿತ್ತು. ಒಂದೆರಡು ಬಾರಿ ಪಂಚಾಯ್ತಿ ಚುನಾವಣೆಗೆ ನಿಲ್ಲಬೇಕೆಂದು ಸ್ವಲ್ಪ ಜನ ಕೇಳಿಕೊಂಡರೂ ಇವರು ಅದಕ್ಕೆಲ್ಲಾ ರಾಯರೇ ಸರಿ ಅಂತ ಸುಮ್ಮನಿದ್ದರು. ತನ್ನ ಬಸ್ಸಿನ ಮೊದಲ ಟ್ರಿಪ್ಪಿಗೆ ರಾಯರೇ ಕುಂಬಳಕಾಯಿ ಒಡೆಯಬೇಕೆನ್ನುವ ಆಸೆಯನ್ನು ರಾಯರು ಪೂರೈಸುವುದರೊಂದಿಗೆ ಅವರ ಸ್ನೇಹ ಮುಂದೆ ಗಾಡವಾಗಿ ಬೆಳೆಯುವಂತಾಯ್ತು. ಮುಂದೆ ಏನಾದರು ಮಾಡುವುದಿದ್ದರೆ ಒಟ್ಟಿಗೇ ಸೇರಿ ಮಾಡಬೇಕೆಂದು ಅವರು ಮಾತಾಡಿಕೊಂಡಿದ್ದರು. ಹಾಗಾಗಿ ಇವತ್ತು ಪೈಗಳು ಬೆಳಗ್ಗೆಯೇ ರಾಯರ ಮನೆಗೆ ಬಂದಿದ್ದರು.


"ರಾಯರೇ ನಾವು ಯಾಕೆ ಒಂದು ಬ್ಯಾಂಕ್ ಶುರು ಮಾಡಬಾರದು?" ಪೈಗಳ ಮಾತು ಕೇಳಿ ರಾಯರು ಮೂರ್ಛೆ ಹೋಗುವುದೊಂದು ಬಾಕಿ. ಆದರೆ ಪೈಗಳೆಂದರೆ ಹಾಗೇನೇ. ಬೇರೆಯವರು ಯೋಚಿಸಲೂ ಹೆದರುತ್ತಿದ್ದ ವಿಷಯಗಳನ್ನು ಇವರು ಕಾರ್ಯಗತ ಮಾಡಲು ನಡೆಯುತ್ತಿದ್ದರು. ಆದರೆ ಬ್ಯಾಂಕ್ ಶುರುಮಾಡುವ ಕೆಲಸ ಮಾತ್ರ ರಾಯರಿಗೆ ಬಹಳ ದೊಡ್ಡ ವಿಷಯವೆಂದೇ ಅನ್ನಿಸುತ್ತಿತ್ತು. ಊರಿನಲ್ಲಿ ಆಗ ಒಂದು ಬ್ಯಾಂಕೂ ಇರಲಿಲ್ಲ. ದೂರದ ಮಂಗಳೂರಿನಲ್ಲಿ ಬ್ಯಾಂಕಗಳು ಒಂದಾದ ಮೇಲೆ ಒಂದು ಶುರು ಆಗುತ್ತಿದ್ದರೂ ಇಲ್ಲಿ ಯಾರೂ ಅಂತಹ ಸಾಹಸಕ್ಕೆ ಕೈಹಾಕಿರಲಿಲ್ಲ. ಮೇಲಾಗಿ ಬ್ಯಾಂಕ್ ಶುರುಮಾಡುವುದೆಂದರೆ ಅಂಗಡಿ ಹಾಕಿದಂತೆ, ಬಸ್ ಓಡಿಸಿದಂತೆ ಅಲ್ಲವಲ್ಲ. ಇದಕ್ಕೆ ಜನ ಬೆಂಬಲ ಬೇಕು, ಕಾಯಿದೆ-ಕಾನೂನು ತಿಳಿದವರು ಬೇಕು. ಈ ಊರಲ್ಲಿ ಅದೆಲ್ಲಾ ಸಾಧ್ಯವೇ? ರಾಯರು ಪೈಗಳನ್ನು ಈ ಎಲ್ಲಾ ವಿಷಯವನ್ನು ಕೇಳಿದರು.


ಪೈಗಳೇನೂ ಸುಮ್ಮನೇ ಈ ವಿಷಯಕ್ಕೆ ಕೈಹಾಕಿದವರಲ್ಲ. ಅವರೆಲ್ಲಾ ಯೋಚಿಸಿಯೇ ಈ ನಿರ್ಧಾರಕ್ಕೆ ಬಂದಿದ್ದರು. ಸುತ್ತಮುತ್ತದ ಊರುಗಳಲ್ಲಿ ಶೆಟ್ಟರ ಕೈಯಿಂದ ಹಣ ತೆಗೆದುಕೊಂಡು ಕಷ್ಟ ಪಡುತ್ತಿದ್ದ ಜನರು ತುಂಬಾ ಇದ್ದರು. ಬ್ಯಾಂಕ್ ಅಂತ ಒಂದಾದರೆ ಅವರೆಲ್ಲಾ ಆ ಶೆಟ್ಟಿಯ ಮನೆ ಕಾಯುವುದು ಬಿಟ್ಟು ತಮ್ಮ ಹತ್ತಿರ ವ್ಯವಹಾರಕ್ಕೆ ಬರುತ್ತಾರೆ ಎಂದು ಪೈಗಳಿಗೆ ತುಂಬಾ ನಂಬಿಕೆ ಇತ್ತು. ಮತ್ತೆ ಬ್ಯಾಂಕ್ ನೋಡಿಕೊಳ್ಳಲು ವ್ಯವಹಾರ ಗೊತ್ತಿರುವ ಮನುಷ್ಯ ಬೇಕು. ಪೈಗಳು ಆವಾಗಲೇ ಒಬ್ಬನನ್ನು ಈ ವಿಷಯಕ್ಕೆ ನೋಡಿಟ್ಟಿದ್ದರು. ನರಹರಿ ಅಂತ ಪೈಗಳ ಹೆಂಡತಿಯ ಕಡೆಯ ಹುಡುಗ. ನಯ-ವಿನಯ ಇದ್ದವನು, ಕೆಲಸ ಗೊತ್ತಿದ್ದವನು; ಅವನ್ನನ್ನೇ ಕರೆದುಕೊಂಡು ಬಂದು ಮ್ಯಾನೇಜರ್ ಅಂತ ಕೂರಿಸುವುದು ಅಂತ ರಾಯರಿಗೆ ಹೇಳಿದರು. ರಾಯರಿಗೆ ಈ ವಿಷಯದಲ್ಲಿ ಏನೂ ಅಭ್ಯಂತರವಿರಲಿಲ್ಲ.


ಬ್ಯಾಂಕ್ ಗೆ ಡೈರೆಕ್ಟರ್ ಗಳಾಗಿ ತಾವಿಬ್ಬರೇ ಇದ್ದರೆ ಚೆನ್ನಾಗಿರುವುದಿಲ್ಲ ಅಂತ ಪೈಗಳು ರಾಯರಿಗೆ ಹೇಳಿದರು. ಜನರು ತಮ್ಮ ಬಳಿ ಹಣ ಇಡಲು ಬರಬೇಕೆಂದರೆ ಅವರು ನಂಬುವಂತಹ ಜನರು ತಮ್ಮ ಜೊತೆ ಇರಬೇಕು. ಮತ್ತು ಊರಿನಲ್ಲಿ ಸಾದಾರಣವಾಗಿ ಎಲ್ಲರೂ ಗೊತ್ತಿರುವಂತಹ ಮನುಷ್ಯ ತಮ್ಮ ಜೊತೆಗೆ ಇದ್ದರೆ ವಾಸಿ ಅಂತ ಯೋಚಿಸಿದಾಗ ಅವರಿಗೆ ನಾರಾಯಣ ಮಾಸ್ಟರ ಹೆಸರು ತಟ್ಟನೆ ಹೊಳೆಯಿತು. ಹಳೆ ತಲೆ, ಊರಿನ ಎರಡು ತಲೆಮಾರಿಗೆ ಪಾಠ ಮಾಡಿದ ಜೀವ. ಕಳೆದ ತಿಂಗಳಷ್ಟೇ ಕೆಲಸದಿಂದ ನಿವೃತ್ತರಾಗಿದ್ದರು. ಅವರೊಬ್ಬರು ತಮ್ಮ ಜೊತೆಗೆ ಬಂದರೆ ಬ್ಯಾಂಕಿನ ಬಗ್ಗೆ ಊರವರಿಗೆ ನಂಬಿಕೆ ಬರುವುದು ಖಂಡಿತ ಎಂದು ತೀರ್ಮಾನಿಸಿ ಮಾಸ್ಟರನ್ನು ಒಪ್ಪಿಸಲು ಅವರ ಮನೆಯ ಕಡೆ ಹೊರಟರು.


ಇದ್ದಕ್ಕಿದ್ದಂತೆ ಊರಿನ ಪಂಚಾಯ್ತಿ ಅಧ್ಯಕ್ಷರೂ, ಬಸ್ ಓನರ್ ಪೈಗಳೂ ತಮ್ಮ ಮನೆಗೆ ಬರುದಿರುವುದು ನೋಡಿ ಮಾಸ್ಟರ್ ರಿಗೆ ಎದೆ ಧಸಕ್ಕೆಂದಿತು. ಬಂದವರಿಗೆ ನೀರು-ಬೆಲ್ಲ ಕೊಟ್ಟು ಮಾತಾಡಲು ಕೂತಾಗೆ ಪೈಗಳೇ ವಿಷಯ ಹೀಗೆ ಹೀಗೆ, ನೀವು ನಮ್ಮ ಜೊತೆ ಇದರಲ್ಲಿ ಬರಬೇಕು ಅಂದಾಗ ಮಾಸ್ಟರರಿಗೆ ಏನು ಹೇಳಬೇಕೆಂದೇ ತೋಚಲಿಲ್ಲ. ತಮಗೆ ಈ ವಿಚಾರ ಏನೇನೂ ತಿಳಿಯದು, ಮೇಲಾಗಿ ತಾವು ಮನೆಯಲ್ಲಿಯೇ ಮಕ್ಕಳಿಗೆ ಪಾಠ ಹೇಳಲು ಯೋಚಿಸುತ್ತಿರುವುದಾಗಿ ಪರಿಪರಿಯಾಗಿ ಹೇಳಿದರೂ ಅವರು ಬಿಡಬೇಕೇ. ನೀವು ಏನೂ ಮಾಡುವುದು ಬೇಡ, ಸುಮ್ಮನೆ ದಿನಕ್ಕೊಂದು ಸಲ ಬ್ಯಾಂಕಿನ ಕಡೆ ಬಂದರೆ ಸಾಕು, ನಿಮಗೆ ಗೊತ್ತಿರುವ ಒಂದೆರಡು ಜನರನ್ನು ಬ್ಯಾಂಕಿನಲ್ಲಿ ಹಣ ಇಡುವಂತೆ ಹೇಳಿದರೆ ಮತ್ತೇನೂ ಕೆಲಸವಿಲ್ಲ ಎಂದು ಪೈಗಳು ತಮ್ಮ ಯಾವತ್ತಿನ ನಯಗಾರಿಕೆಯಲ್ಲಿ ಹೇಳುತ್ತಿದ್ದರೆ ಮೇಸ್ಟರು ಆಗಬಹುದೆಂದು ಯೋಚಿಸಿದರು.


ಆದರೆ ರಾಯರು ಹೇಳಿದ ಒಂದು ಮಾತು ಅವರನ್ನು ಚಿಂತೆಗೀಡು ಮಾಡಿತು. ಬ್ಯಾಂಕಿನ ಡೈರೆಕ್ಟರ್ ಗಳು ಒಬ್ಬೊಬ್ಬರೂ ಇಂತಿಷ್ಟು ಅಂತ ಮೂಲಧನ ಹಾಕಬೇಕೆಂದು ಕಾನೂನಂತೆ. ಹಾಗಾಗಿ ನೀವೆಷ್ಟು ಕೊಡುತ್ತೀರ ಮಾಷ್ಟರೇ ಅಂತ ರಾಯರು ಕೇಳಿದಾಗ ಅವರ ಬಾಯಿ ಕಟ್ಟಿದಂತಾಯಿತು. ಅಲ್ಲಾ ಜೀವನ ಇಡೀ ಮಕ್ಕಳಿಗೆ ಪಾಠ ಮಾಡಿ ನಿವೃತ್ತರಾದ ಅವರ ಹತ್ತಿರ ಎಷ್ಟು ಹಣ ಇರಲು ಸಾಧ್ಯ. ಪೈಗಳು, ರಾಯರು ಈ ವಿಷಯವನ್ನು ಮೊದಲೇ ಯೋಚಿಸಿದ್ದರು. ಅವರು ಮಾತಾಡಿಕೊಂಡು ಬಂದ ನಿರ್ಧಾರವನ್ನು ಈಗ ಮೇಷ್ಟರಿಗೆ ಹೇಳಿದರು. ಅದರಂತೆ ಮೇಷ್ಟರ ಮನೆಯ ಹಿಂದಿನ ಸ್ವಲ್ಪ ಜಾಗವನ್ನು ರಾಯರು ಕ್ರಯಕ್ಕೆ ತೆಗೆದುಕೊಳ್ಳುವುದು. ಆ ಹಣವನ್ನು ಮೇಷ್ಟರು ಬ್ಯಾಂಕಿನಲ್ಲಿ ಹೂಡುವುದು, ಮತ್ತೆ ಒಂದೆರಡು ವರ್ಷದಲ್ಲಿ ಬ್ಯಾಂಕಿನ ವ್ಯವಹಾರ ಚೆನ್ನಾಗಿ ನಡೆದ ಮೇಲೆ ಡೈರೆಕ್ಟರುಗಳಿಗೆ ಸಿಗುವ ಬೋನಸ್ಸಿನ ದುಡ್ಡಿನಲ್ಲಿ ಮೇಷ್ಟರು ಪುನಃ ಕೊಟ್ಟಷ್ಟೇ ಹಣಕ್ಕೆ ರಾಯರಿಂದ ಜಾಗ ವಾಪಾಸ್ ಪಡೆಯುವುದು ಹೀಗೆ ಪೈಗಳದ್ದೊಂದು ಭಾರೀ ಉಪಾಯ.


ಏನು ಹೇಳುವುದು? ಮೇಷ್ಟರಿಗೆ ಒಂದೂ ತಿಳಿಯಲಿಲ್ಲ. ನಿಮ್ಮ ಜಾಗದ ಕಾಗದ ಮಾತ್ರ ನನ್ನ ಬಳಿ ಒಂದೆರಡು ವರ್ಷ ಇರುತ್ತದೆ. ನಾನಗೇನೂ ನಿಮ್ಮ ಜಾಗದ ಅವಷ್ಯಕತೆ ಇಲ್ಲ. ನಿಮ್ಮ ಜಾಗ ಯಾವತ್ತೂ ನಿಮ್ಮದೇ. ಸುಮ್ಮನೆ ಕಾನೂನು-ವ್ಯವಹಾರಕ್ಕೋಸ್ಕರ ಈ ಕಾಗದ ಪತ್ರ ಎಲ್ಲಾ ಅಂತ ರಾಯರೂ, ಪೈಗಳೂ ಹೇಳುತ್ತಿದ್ದರೆ ಪಾಪ ಅವರಾದರೂ ಏನು ಮಾಡಿಯಾರು? ಒಪ್ಪಿಕೊಂಡರು. ಹಾಗೆ ಆ ಊರಿನಲ್ಲಿ ಈ ಮೂರೂ ಜನ ಡೈರೆಕ್ಟರುಗಳಾದ ಬ್ಯಾಂಕೊಂದು ಶುರುವಾಯಿತು. ನರಹರಿಯೂ ಅಲ್ಲಿ ಬಂದು ಕೂತಾಯ್ತು. ಪೈಗಳ ಮಾತು, ರಾಯರ ಗೌರವ, ಮಾಸ್ಟರರ ನಂಬಿಕೆ ಎಲ್ಲ ಸೇರಿ ಬ್ಯಾಂಕಿನ ವ್ಯವಹಾರ ಚೆನ್ನಾಗಿಯೇ ನಡೆಯಲು ಶುರುವಾಯಿತು. ಮೊದಲ ವರ್ಷ ಕೊನೆ ಆಗುವುದರೊಳಗೆ ಖರ್ಚು ಕಳೆದು ಸ್ವಲ್ಪ ಲಾಭವೂ ಬಂತು. ಅಂತೂ ಪೈಗಳನ್ನು ನಂಬಿದಕ್ಕೆ ಸಾರ್ಥಕವಾಯಿತೆಂದು ರಾಯರು ನಿಟ್ಟುಸಿರು ಬಿಟ್ಟರು.


ಈ ಮಧ್ಯೆ ಪೈಗಳಿಗೆ ತಮ್ಮ ದೊಡ್ಡ ಆಸೆಯನ್ನು ಪೂರ್ಣಗೊಳಿಸುವ ಸಮಯ ಬಂದಿದೆ ಎಂದು ಅನ್ನಿಸಲು ಶುರುವಾಯಿತು. ಅವರಿಗೆ ಮೊದಲಿನಿಂದಲೂ ಒಂದು ಆಸೆ. ಮಂಗಳೂರಿನಲ್ಲಿ ಒಂದು ಟ್ರಾನ್ಸೋರ್ಟ್ ಕಂಪೆನಿ ತೆಗೆಯಬೇಕು. ತಮ್ಮ ಕಂಪೆನಿಯ ಬಸ್ಸುಗಳು ಉಡುಪಿ, ಕುಂದಾಪುರ, ಪುತ್ತೂರು - ಹೀಗೆ ಊರೂರಿಗೆ ಹೋಗಬೇಕು. ಈ ಊರಿನಲ್ಲಿ ಮಾಡಿದ ಕೆಲಸವೆಲ್ಲಾ ಬರಿಯ ಆರಂಭವಷ್ಟೇ. ಅಸಲೀ ಕೆಲಸ ಆಗಬೇಕಾಗಿದ್ದು ಘಟ್ಟದ ಕೆಳಗೆ. ಇಲ್ಲಿ ಎಷ್ಟು ಮಾಡಿದರೂ ಅಷ್ಟೇ. ದೊಡ್ಡ ಕೆಲಸಕ್ಕೆ ಮಂಗಳೂರೇ ಸರಿ. ಒಮ್ಮೆ ಅಲ್ಲಿ ಅದೃಷ್ಟ ಕುಲಾಯಿಸಿತೆಂದರೆ ಮುಂದೆ ಬೊಂಬಾಯಿ - ಪೈಗಳು ಆಗಲೇ ಎಲ್ಲಾ ಯೋಚಿಸಿದ್ದರು. ಈ ಊರಿನಲ್ಲಿ ತಾವು ಮಾಡಿದ ಕೆಲಸ, ಮೆತ್ತೀಗ ಈ ಬ್ಯಾಂಕು ಉತ್ತಮವಾಗಿ ನಡೆಯುತ್ತಿದ್ದುದು ಅವರಿಗೆ ಸಹಜವಾಗಿ ತಮ್ಮ ಬಗ್ಗೆ ನಂಬಿಕೆ ಹುಟ್ಟುವಂತೆ ಮಾಡಿತ್ತು. ಈಗ ಬ್ಯಾಂಕಿನಲ್ಲಿ ಎಷ್ಟಾದರೂ ಬೇಕಾದಷ್ಟು ಹಣವಿದೆ. ಒಂದೆರಡು ಹೊಸಾ ಬಸ್ ತೆಗೆದು ಮಂಗಳೂರು-ಉಡುಪಿ ಲೈನಿನಲ್ಲಿ ಬಿಡುವುದು, ಒಂದೇ ವರ್ಷದಲ್ಲಿ ಹಣ ವಾಪಸ್ ಬರುವುದು ಗ್ಯಾರೆಂಟಿ. ಆಗ ಬ್ಯಾಂಕಿಗೆ ಹಣ ತುಂಬಿದರಾಯ್ತು ಅಂತ ಯೋಚಿಸಿ ರಾಯರ ಮನೆಗೆ ಹೋದರು.


ಪೈಗಳಿಗೆ ಗೊತ್ತಿತ್ತು. ತಾವೊಬ್ಬರೇ ಬ್ಯಾಂಕಿನಿಂದ ಹಣ ತೆಗೆದುಕೊಂಡರೆ ಸರಿ ಇರುವುದಿಲ್ಲ. ಅದಕ್ಕೇ ರಾಯರ ಮನೆಗೆ ಬಂದದ್ದೇ ನೋಡಿ ರಾಯರೇ ಬ್ಯಾಂಕಿನ ಹಣವನ್ನು ಹೆಚ್ಚು ಲಾಭ ಇರುವ ಕಡೆ ನಾವು ಹೂಡಬೇಕು. ಆಗ ನಮಗೆ ಹೆಚ್ಚು ಉತ್ಪನ್ನ ಬಂದು ಜನರಿಗೆ ಹೆಚ್ಚು ಬಡ್ಡಿ ಕೊಡಬಹುದು. ಹೀಗಾದಾಗ ಇನ್ನೂ ಹೆಚ್ಚು ಜನ ನಮ್ಮಲ್ಲಿ ಹಣ ಇಡಲು ಬರುತ್ತಾರೆ. ನೀವು ಏನಾದರೂ ಹೆಚ್ಚು ಲಾಭ ಬರುವ ದಾರಿ ಹುಡುಕಿ ಅಂತ ಹೇಳಿ ಹೋದರು. ರಾಯರು ಬಹಳ ಯೋಚಿಸಿ ಒಂದು ದೊಡ್ಡ ಅಕ್ಕಿ ಮಿಲ್ಲನ್ನು ಹಾಕಿದರೆ ಒಳ್ಳೆಯದಾಗಬಹುದೆಂದು ಯೋಚಿಸಿದರು. ಆಗ ಊರಿನಲ್ಲಿ ಒಳ್ಳೆಯ ಮಿಲ್ಲು ಇರಲಿಲ್ಲ. ಊರವರೆಲ್ಲಾ ಗಾಡಿ ಕಟ್ಟಿಕೊಂಡು ದೂರದೂರಿಗೆ ಹೋಗಿ ಅಲ್ಲಿ ಒಂದು ವಾರ ಇದ್ದು ಅಕ್ಕಿ ಮಾಡಿಸಿ ಮತ್ತಷ್ಟು ದೂರ ಹೋಗಿ ಅದನ್ನು ಮಾರಿ ಬರಬೇಕಿತ್ತು. ದೊಡ್ಡ ಮಿಲ್ಲು ಇಲ್ಲೇ ಹಾಕಿದರೆ ಪಕ್ಕದ ಊರಿನವರೂ ಇಲ್ಲೇ ಅಕ್ಕಿ ಮಾಡಿಸರು ಬರುತ್ತಾರೆ. ಹೆಚ್ಚು ಅಕ್ಕಿ ಇಲ್ಲೇ ಸಿಗುತ್ತದೆ ಅಂತಾದರೆ ಅಕ್ಕಿ ಕೊಳ್ಳುವವರೂ ಇಲ್ಲೇ ಬಂದು ಅಕ್ಕಿ ಕೊಳ್ಳಬಹುದು. ಇದರಿಂದ ತಮ್ಮ ಊರು ಅಕ್ಕಿ ಮಾರುಕಟ್ಟೆಗೆ ಹೆಸರು ಮಾಡುವುದು ಅನುಮಾನವೇ ಇಲ್ಲ ಅಂತ ಯೋಚಿಸಿದರು.


ಮರುದಿನ ಬ್ಯಾಂಕಿನ ಕಛೇರಿಯಲ್ಲಿ ಪೈಗಳು ಮತ್ತು ಮೇಸ್ಟರ ಮುಂದೆ ರಾಯರು ತಮ್ಮ ನಿರ್ಧಾರ ತಿಳಿಸಿದರು. ಅವರಿಬ್ಬರೂ ಆಗಬಹುದೆಂದರು. ಪೈಗಳು ಮೇಸ್ಟರನ್ನು ನೀವು ಏನಾದರೂ ಮಾಡಬೇಕೆಂದಿದ್ದರೆ ಮಾಡಿ, ಹಣ ನಾವು ಕೊಡುತ್ತೇವೆ ಅಂದಾಗ ಅವರು ಇಲ್ಲ ನನಗೆ ಇದೆಲ್ಲಾ ತಿಳಿಯುವುದಿಲ್ಲ, ನಿಮಗೆ ಏನಾದರೂ ಉದ್ದೇಶ ಇದ್ದರೆ ಹೇಳಿ ಅಂದರೆ. ಇದಕ್ಕೆ ಕಾಯುತ್ತಿದ್ದವರಂತೆ ಪೈಗಳು ತಮ್ಮ ಟ್ರಾನ್ಸಪೋರ್ಟ್ ವಿಷಯ ಹೇಳಿದರು. ಮಂಗಳೂರಿನಿಂದ ಬಸ್ ಬಿಟ್ಟರೆ ಹಣಕ್ಕೆ ಮೋಸವಿಲ್ಲ ಎಂದು ತಮ್ಮ ಅನುಭವದ ನೆಲೆಯಲ್ಲಿ ಹೇಳೀದಾಗ ಇವರಿಗೂ ಇಲ್ಲವೆನ್ನಲಾಗಲಿಲ್ಲ. ಆಯಿತೆಂದರು. ಆದರೆ ನಾವಿಬ್ಬರೂ ಹಣ ತೆಗೆದುಕೊಂಡಾಗ ಮೇಸ್ಟರೊಬ್ಬರು ಹಾಗೇ ಇದ್ದರೆ ಹೇಗೆ? ಅವರಿಗೂ ಏನಾದರೂ ಆಗಬೇಕು ಅಂತ ಪೈಗಳು ಹೇಳಿದಾಗ ರಾಯರು ಬ್ಯಾಂಕಿನ ಲೆಕ್ಕದಿಂದ ಸ್ವಲ್ಪ ಹಣವನ್ನು ಮೇಸ್ಟರಿಗೆ ಕೊಡೋಣವೆಂದರು. ಪೈಗಳಿಗೂ ಇದು ಸರಿ ಅನ್ನಿಸಿತು. ಆದರೆ ಮೇಸ್ಟರು ತಮಗೆ ಹಣ ಬೇಡವೆಂದೂ, ಆ ಹಣವನ್ನು ರಾಯರೇ ಇಟ್ಟುಕೊಂಡು ತಮ್ಮ ಜಾಗದ ಪತ್ರವನ್ನು ವಾಪಸ್ ಕೊಡುವಂತೆ ಕೇಳಿಕೊಂಡರು. ರಾಯರು ಇದಕ್ಕೆ ಒಪ್ಪಿದರೂ ಸ್ವಲ್ಪ ಹಣ ಮೇಸ್ಟರು ತೆಗೆದುಕೊಳ್ಳಲೇ ಬೇಕೆಂದು ಹೇಳಿದಾಗ ಅವರಿಗೆ ಇಲ್ಲ ಎನ್ನಲಾಗಲಿಲ್ಲ.


ಅವರೆಲ್ಲಾ ನರಹರಿಯನ್ನು ಕರೆದು ಲೆಕ್ಕ ಪುಸ್ತಕ ತರಿಸಿ ತಾವು ಒಬ್ಬೊಬ್ಬರೂ ಎಷ್ಟು ಹಣ ತೆಗೆದುಕೊಳ್ಳಬಹುದೆಂದು ನೋಡಿದರು. ಮುಂದಿನ ಒಂದು ವರ್ಷ ಬ್ಯಾಂಕ್ ನಡೆಸಲು ಎಷ್ಟು ಹಣ ಬೇಕೋ ಅಷ್ಟನ್ನು ಬಿಟ್ಟು ಉಳಿದ್ದದ್ದನ್ನು ತಮ್ಮ ತಮ್ಮ ಉದ್ದಿಮೆಗಳಿಗೆ ಬಳಸಿಕೊಳ್ಳುವುದೆಂದು ತೀರ್ಮಾನಿಸಿದರು. ಅದರಂತೆ ನರಹರಿಗೆ ತಮಗೆ ಇಷ್ಟು ಹಣ ತಂದುಕೊಡುವಂತೆ ಹೇಳಿದರು. ನರಹರಿಗೆ ಇದರಿಂದ ಆಶ್ಚರ್ಯವಾಯಿತು. ಇಷ್ಟು ಹಣವನ್ನು ಬ್ಯಾಂಕಿನಿಂದ ತೆಗೆದುಕೊಂಡು ಹೋದರೆ ಹೇಗೆ ಅಂತ ಕೇಳಿದ. ಪೈಗಳೇ ಜೋರು ಬಾಯಿ ಮಾಡಿ ಹೇಳಿದಷ್ಟು ಮಾಡು ಅಂತ ಹೇಳಿದರು. ತೆಗೆದುಕೊಂಡ ಹಣದ ಲೆಕ್ಕವನ್ನು ಬೇರೆ ಪುಸ್ತಕದಲ್ಲಿ ಬರೆದಿಡುವಂತೆ ಅವರೇ ನರಹರಿಗೆ ಹೇಳಿದರು. ಅವನು ಮರುಮಾತಾಡದೆ ಹೊಸ ಪುಸ್ತಕದಲ್ಲಿ ಅವರು ಕೇಳಿದಷ್ಟು ಹಣ ನೀಡಿ ಸುಮ್ಮನೇ ಕುಳಿತ.


ರಾಯರ ಇರಾದೆ ಏನೋ ಒಳ್ಳೆಯದಿತ್ತು. ಆದರೆ ಅವರು ಅಂದುಕೊಂಡಂತೆ ಒಂದೂ ಆಗಲಿಲ್ಲ. ಮಿಲ್ಲನೇನೋ ಕಟ್ಟಿದರು. ಆದರೆ ಊರಲ್ಲಿ ಕರೆಂಟೇ ಇರುತ್ತಿರಲಿಲ್ಲ. ಪಕ್ಕದ ಊರಿನವರೆಲ್ಲಾ ಗಾಡಿ ಕಟ್ಟಿಸಿಕೊಂಡು ಮಿಲ್ಲಿಗೆ ಬಂದರೆ ಕರೆಂಟ್ ಕೈಕೊಡುತ್ತಿತ್ತು. ಬಂದ ಜನ ಊರನ್ನೂ, ಮಿಲ್ಲಿನ ರಾಯರನ್ನೂ ಶಪಿಸುತ್ತಾ ಕೂತಿರುತ್ತಿದ್ದರು. ಕ್ರಮೇಣ ಇಲ್ಲಿಗೆ ಜನ ಬರುವುದೇ ಕಡಿಮೆ ಆಗತೊಡಗಿತು. ರಾಯರಿಗೆ ಇದೇ ಚಿಂತೆ. ತಮ್ಮ ಹೆಸರಿಗೆ, ತಮ್ಮ ಊರಿನ ಹೆಸರಿಗೆ ಹೀಗೆ ಕಳಂಕ ಬರುವುದು ಅವರಿಗೆ ಬೇಕಿರಲಿಲ್ಲ. ಹಾಗಾಗಿ ಬೇಕಾದಾಗ ಕರೆಂಟ್ ಕೊಡಬಲ್ಲ ಜನರೇಟರ್ ಒಂದನ್ನು ತರುವುದೇ ಉಪಾಯವೆಂದು ಯೋಚಿಸಿದಾಗ ಪೈಗಳು ಬ್ಯಾಂಕಿನಿಂದಲೇ ಹಣ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಹೇಗಾದರೂ ಜನರೇಟರ್ ಬಂದರೆ ಮಿಲ್ಲು ಚನ್ನಾಗಿ ನಡೆದು ಬೇಗ ಹಣ ವಾಪಾಸ್ ಮಾಡಬಹುದೆಂದು ರಾಯರೂ ಅದಕ್ಕೆ ಸಮ್ಮತಿಸಿದರು. ಬೆಂಗಳೂರಿನಿಂದ ದೊಡ್ಡ ಜನರೇಟರೇನೂ ಬಂತು. ಆದರೆ ಅದರ ಹೊಟ್ಟೆ ಬಕಾಸುರನದ್ದು. ಆಗ ಡೀಸಿಲ್ ಸಿಗುತ್ತಿದ್ದದ್ದೇ ಕಮ್ಮಿ. ಬಂಕಿನವರ ಹತ್ತಿರ ಒಂದಕ್ಕೆರ್‍ಅಡು ಹಣ ಕೊಟ್ಟು ವಾರಕ್ಕಾಗುವಷ್ಟು ಎಣ್ಣೆ ಕೂಡಿಟ್ಟುಕೊಳ್ಳಬೇಕಿತ್ತು. ಹಣ ಬರುವುದು ಹಾಗಿರಲಿ, ರಾಯರು ಮಿಲ್ಲನ್ನು ಜೀವಂತವಾಗಿಡಲು ತಮ್ಮ ಜೇಬಿನಿಂದಲೇ ದುಡ್ಡು ಬಿಚ್ಚುವ ಪರಿಸ್ಥಿತಿ ಬಂದು ಹೋಯಿತು. ಬರುಬರುತ್ತಾ ಬ್ಯಾಂಕಿನ ಕಡೆ ಅವರ ಓಡಾಟ ಜಾಸ್ತಿ ಆಗುತ್ತಿತ್ತು. ಬ್ಯಾಂಕಿಗೆ ಹೋಗುವುದು, ನರಹರಿಯ ಹತ್ತಿರ ಹೇಳಿ ಹಣ ತೆಗೆದುಕೊಂಡು ಬರುವುದು, ನರಹರಿ ಅದನ್ನು ಬೇರೆ ಪುಸ್ತದಲ್ಲಿ ಬರೆಯುವುದು - ನಿತ್ಯದ ಕೆಲಸವಾಯಿತು.


ಹಾಗೆಂದು ನರಹರಿಯ ಆ ಪುಸ್ತಕದಲ್ಲಿ ಕೇವಲ ರಾಯರ ಲೆಕ್ಕ ಬೆಳೆಯುತ್ತಿರಲಿಲ್ಲ. ಪೈಗಳ ಲೆಕ್ಕ ರಾಯರಿಗಿಂತ ಪುಟಗಟ್ಟೆಲೆ ದೊಡ್ಡದಿತ್ತು. ಆದದ್ದೇನೆಂದರೆ ಪೈಗಳು ದುಡ್ಡು ಉಳಿಸೋಣವೆಂದು ಸೆಕೆಂಡ್ ಹ್ಯಾಂಡ್ ಬಸ್ಸು ಕೊಂಡಿದ್ದರು. ಹಾಗಾಗಿ ಬಸ್ಸು ಆವಾಗಾವಾಗ ರಿಪೇರಿಗೆ ಬರುತ್ತಿತ್ತು. ಮತ್ತೆ ಪೈಗಳು ವಾರಕ್ಕೊಮ್ಮೆ ಮಾತ್ರ ಮಂಗಳೂರಿಗೆ ಹೋಗುತ್ತಿದ್ದರಿಂದ ಬಸ್ಸಿನ ಕಂಡಕ್ಟರ್ ತಪ್ಪು ಲೆಕ್ಕ ತೋರಿಸುತ್ತಿದ್ದ. ಎರಡೆರಡು ಸಲ ಜನ ಬದಲಾಯಿಸಿದರೂ ಅದೇ ಸ್ಥಿತಿ. ಬಂದವರಿಗೆ ಟಿಕೇಟ್ ಕೊಡರೆ ಅರ್ಧ ದುಡ್ಡನ್ನು ಡ್ರೈವರ್ ಮತ್ತು ಕಂಡಕ್ಟರ್ ಸೇರಿ ತಿಂದು ಬಿಡುತ್ತಿದ್ದರು. ಕಲೆಕ್ಷನ್ ಹಣ ಬಸ್ಸಿನ ಉಪಚಾರಕ್ಕೇ ಸರಿಹೋಗುತ್ತಿತ್ತು. ಮೇಲೆ ಆಗಾಗ ಬರುವ ರಿಪೇರಿಗೆ ಪೈಗಳೇ ದುಡ್ಡು ಸುರಿಯ ಬೇಕಾಗಿ ಬಂದಾಗಿನಿಂದ ಅವರೂ ನರಹರಿಯ ಪುಸ್ತಕದ ಗಿರಾಕಿಯಾಗಿ ಹೋಗಿದ್ದರು. ಇವತ್ತು ರಾಯರು ಬರುವ ಮೊದಲು ಕೂಡ ಪೈಗಳು ಬಂದು ಹಣ ತೆಗೆದುಕೊಂಡು ಹೋದರು.


ರಾಯರು ಹೋದ ಮೇಲೆ ನರಹರಿ ತನ್ನ ಪುಸ್ತದ ಲೆಕ್ಕ ನೋಡಲು ಕುಳಿತ. ಬ್ಯಾಂಕಿನ ಬೇರೆ ಲೆಕ್ಕ ಪತ್ರಗಳನ್ನೂ ಜೊತೆಯಲ್ಲಿ ಇಟ್ಟುಕೊಂಡು ಲೆಕ್ಕ ನೋಡುತ್ತಿದವನಿಗೆ ತಲೆ ಸುತ್ತಿ ಬಂದಂತಾಯ್ತು. ಬ್ಯಾಂಕಿನಲ್ಲಿರುವ ಹಣ ತೀರ್‍ಆ ಕಡಿಮೆ ಇತ್ತು. ಪರಿಸ್ಥಿತಿ ಹೀಗೆ ಮುಂದುವರಿದರೆ ಬ್ಯಾಂಕ್ ದಿವಾಳಿ ಆಗುವುದು ಖಂಡಿತ ಅಂತ ಅವನಿಗೆ ಸಂಶಯವಿರಲಿಲ್ಲ. ಸರಕಾರ ಬೇರೆ ಸಣ್ಣ ಊರುಗಳಲ್ಲಿದ್ದ ಬ್ಯಾಂಕುಗಳ ಮೇಲೆ ಕಣ್ಣಿಟ್ಟಿತ್ತು. ಸ್ವಲ್ಪ ಸೂಚನೆ ಸಿಕ್ಕಿದರೂ ಸರಕಾರಿ ಅಧಿಕಾರಿಗಳು ಬ್ಯಾಂಕ್ ನ ಮೇಲೆ ದಾಳಿ ಮಾಡಿ ಕಾಗದ ಪತ್ರ ವಶ ಪಡಿಸಿಕೊಳ್ಳುತ್ತಿದ್ದರು. ಹಾಗೇನಾದರೂ ಆದರೆ ಮ್ಯಾನೇಜರ್ ಆದ ತಾನು ಜೈಲಿಗೆ ಹೋಗುವುದು ಗ್ಯಾರೆಂಟಿ ಅನ್ನುವುದು ಅವನಿಗೆ ಗಟ್ಟಿ ಆಗತೊಡಗಿತು. ವಿಷಯವನ್ನು ಕೂಡಲೇ ಪೈಗಳಿಗೆ ತಿಳಿಸಬೇಕೆಂದು ಹೊರಟಾಗ ಮೇಷ್ಟರು ಬ್ಯಾಂಕಿಗೆ ಬಂದರು. ಅವರ ಜೊತೆ ಲೋಬೋ ಕೂಡ ಇದ್ದಿದ್ದರಿಂದ ವಿಷಯವನ್ನು ಅವರಿಗೆ ತಿಳಿಸುವುದು ಬೇಡವೆಂದುಕೊಂಡ. ಹೇಗಿದ್ದರೂ ಮಾಸ್ಟರು ಪಾಪದ ಜನ. ಅವರಿಗೆ ಹೇಳಿಯೂ ಉಪಯೋಗವಿಲ್ಲ ಅನ್ನಿಸಿತು ಅವನಿಗೆ.


ಮಾಸ್ಟರು ಬಂದಿದ್ದು ಬೇರೆ ಕಾರಣಕ್ಕೆ. ಲೋಬೋ ಅವರ ಜೊತೆಗೆ ಶಾಲೆಯಲ್ಲಿ ಇದ್ದವರು. ಅವರೂ ಇತ್ತೀಚೆಗೆ ನಿವೃತ್ತನಾಗಿದ್ದರು. ಸಿಕ್ಕಿದ ಹಣವನ್ನು ಬ್ಯಾಂಕಿನಲ್ಲಿ ಇಡಿಸಲು ಮಾಸ್ಟರು ಅವನನ್ನು ಕರೆದುಕೊಂಡು ಬಂದಿದ್ದರು. "ನಮ್ಮದೇ ಬ್ಯಾಂಕು. ಏನೂ ಮೋಸವಿಲ್ಲ. ನಿನ್ನ ಜೀವನದ ಹಣವನ್ನು ಇವನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ಅಲ್ಲವಾ ನರಹರಿ" ಅಂತ ಮೇಸ್ಟರು ಹೇಳುತ್ತಿದ್ದರೆ ನರಹರಿಗೆ ತಲೆ ಸಿಡಿಯುತ್ತಿತ್ತು. ಅವರು ಕೊಟ್ಟ ಅಷ್ಟೂ ಹಣವನ್ನು ಕಪಾಟಿನಲ್ಲಿಟ್ಟು ರಷೀದಿ ಬರೆಯಲು ನೋಡುತ್ತಾನೆ ರಷೀದಿ ಪುಸ್ತಕ ಖಾಲಿ ಆಗಿದೆ. ಹೋಗಿ ತರುತ್ತೇನೆ ಅಂದಾಗ ಮಾಸ್ಟರೇ ಬೇಡವೆಂದರು. ಸಂಜೆ ತಾವೇ ಬಂದು ತೆಗೆದುಕೊಂಡು ಹೋಗಿ ಲೋಬೋನಿಗೆ ಕೊಡುವೆನೆಂದು ಹೇಳಿದರು. "ನನ್ನ ಮೇಲೆ ನಂಬಿಕೆ ಇದೆಯಲ್ಲಾ ಲೋಬೋ? ಇಲ್ಲದಿದ್ದರೆ ಹಣ ತೆಗೆದುಕೊಂಡು ಹೋಗೋಣ. ನಾಳೆ ಬಂದರೆ ಆಯಿತು" ಅಂದಾಗ ಲೋಬೋ ರಶೀದಿ ಏನು ಮಹಾ, ನಾಳೆ ಬಂದು ತೆಗೆದುಕೊಂಡರೆ ಆಯಿತೆಂದು ಹೇಳಿ ಅವರಿಬ್ಬರೂ ಹೋದರು.


ಅವರು ಹೋದ ಕೂಡಲೇ ನರಹರಿಯೂ ಸರಸರನೆ ಪೈಗಳ ಮನೆಗೆ ಬಂದು ವಿಷಯ ಹೀಗೆ ಹೀಗೆ ಅಂದ. ಇದ್ದಕ್ಕಿದ್ದಂತೆ ಪೈಗಳಿಗೂ ರೇಗಿ ಹೋಯಿತು. ತಾವೊಬ್ಬರೇ ಹಣ ತೆಗೆದುಕೊಂಡಿಲ್ಲ, ರಾಯರೂ ಹಣತೆಗೆದುಕೊಂಡಿದ್ದಾರೆ. ಆದರೆ ನೀನು ನನ್ನ ಹತ್ತಿರವೇ ಬಂದು ಯಾಕೆ ಇದೆಲ್ಲಾ ಹೇಳುತ್ತಿದ್ದೀಯ ಅಂತ ಜೋರು ಮಾಡಿದರು. ನರಹರಿ ಏನು ಹೇಳಿಯಾನು? ಅವನನ್ನು ಅಲ್ಲಿ ಕೂರಿಸಿದವರು ಪೈಗಳೇ. ಈಗ ಹೀಗೆ ಏನೂ ಸಂಬಂಧ ಇಲ್ಲದವರ ಹಾಗೆ ಮಾತಾಡಿದರೆ? ಅದನ್ನೇ ಅವರಿಗೆ ಹೇಳಿದ. ಪೈಗಳು ಈಗ ರೌದ್ರಾವತಾರ ತಾಳಿದರು. ನಿನ್ನ ಹಣ ನಾನು ತಿಂದಿದ್ದೇನಾ? ನಾನು ಹಣ ತೆಗೆದುಕೊಂಡು ಮಜಾ ಮಾಡುತ್ತಿಲ್ಲ. ಕೆಲಸ ಮಾಡುತ್ತಿದ್ದೇನೆ. ಪ್ರತಿ ಸಲ ಲಾಭ ಬರುವುದಿಲ್ಲ. ಏನು ಮಾಡುವುದಕ್ಕೆ ಆಗುತ್ತದೆ ಅಂತೆಲ್ಲಾ ಬಾಯಿ ಬಡಿಯಲು ಆರಂಭಿಸಿದರು. ಹೆಚ್ಚು ಕಷ್ಟವಾದರೆ ಬ್ಯಾಂಕನ್ನು ಮುಚ್ಚಿಬಿಡುತ್ತೇನೆ, ನಿನ್ನದೇನು ಕಾನೂನು? ಅಂತ ಜೋರು ಮಾಡಿದಾದ ಅವನು ಅಲ್ಲಿಂದ ಹೊರಡಲೇಬೇಕಾಯ್ತು.


ಬರುವಾಗ ದಾರಿಯಲ್ಲಿ ಯೋಚಿಸುತ್ತಾ ಬಂದ. ಈ ಪೈಗಳೂ, ಆ ರಾಯರೂ ಹಣ ನುಂಗಿದ್ದಾರೆ. ಆದರೆ ನಾಳೆ ಪೋಲೀಸು, ಅದು, ಇದು ಅಂತ ನಡೆದರೆ ಅವರು ಹೇಗೋ ತಪ್ಪಿಸಿಕೊಳ್ಳುತ್ತಾರೆ. ಸಿಕ್ಕಿಬೀಳುವುದು ನಾನೊಬ್ಬನೇ. ಹೇಳಿ ಕೇಳಿ ನಾನು ಮ್ಯಾನೇಜರ್. ಹಣ ನೀನೇ ಕಟ್ಟು ಅಂತ ಹೇಳಿದರೆ ಏನು ಗತಿ? ನರಹರಿ ಬಾಯಲ್ಲಿ ನೀರಾರಿದಂತಾಯಿತು.


ಬೆಳಗ್ಗೆ ಮಾಸ್ಟರು ಪೂಜೆ ಮಾಡುತ್ತಿದ್ದಾಗ ಯಾರೋ ಜೋರಾಗಿ ಬಾಗಿಲು ಬಡಿಯುವ ಶಬ್ಧ. ಹೋಗಿ ನೋಡಿದರೆ ಲೋಬೋ. "ಮಾಸ್ಟ್ರೇ, ನರಹರಿ ಹಗ್ಗ ಹಾಕೊಂಡಂತೆ." ವಿಷಯ ಕೇಳಿ ಮಾಸ್ಟರಿಗೆ ಎದೆ ಒಡೆದಂತಾಯ್ತು. ಬಟ್ಟೆ ಹಾಕಿಕೊಂಡು ಒಂದೇ ಉಸಿರಿಗೆ ಇಬ್ಬರೂ ಬ್ಯಾಂಕಿನ ಕಡೆ ನಡೆದರು. "ನನ್ನ ಇಡೀ ಜೀವನದಲ್ಲಿ ದುಡಿದ ದುಡ್ಡು ಮಾಸ್ಟರೇ. ನೆನ್ನೆ ರಶೀದಿ ತೆಕ್ಕೊಳ್ಳದೆ ಬಂದುಬಿಟ್ಟೆವು. ಈಗ ಏನು ಮಾಡಲಿ?" ಲೋಬೋ ಅಕ್ಷರಶಃ ಅಳುತ್ತಿದ್ದರೆ ಮಾಸ್ಟರು ಮನಸ್ಸಿನಲ್ಲಿಯೇ ದೇವರಿಗೆ ಹರಕೆ ಹೊತ್ತುಕೊಳ್ಳುತ್ತಿದ್ದರು. ಬ್ಯಾಂಕಿನ ಎದುರು ಜನ ಆಗಲೇ ಬಂದಿದ್ದರು. ಮಾಸ್ಟರು ಒಳಗಡೆ ನಡೆದಾಗ ಅಲ್ಲಿ ರಾಯರೂ, ಪೈಗಳೂ ಕಪಾಟಿನಲ್ಲಿರುವ ಎಲ್ಲಾ ಕಾಗದ ಪತ್ರಗಳನ್ನು ತೆಗೆದು ಈಚೆ ಹಾಕುತ್ತಿದ್ದರು. ಮಾಸ್ಟರಿಗೆ ಗೊತ್ತಾಯ್ತು. ಇವರು ಆ ಪುಸ್ತಕವನ್ನೇ ಹುಡುಕುತ್ತಿದ್ದಾರೆ. ಆದರೆ ಅವರಿಗೆ ಆ ಕ್ಷಣಕ್ಕೆ ಲೋಬೋವಿನ ದುಡ್ಡಿನದೇ ಚಿಂತೆ.


ತನ್ನ ಮೇಲಿನ ನಂಬಿಕೆಯಿಂದ ದುಡ್ಡು ಇಡಲು ಬಂದಿದ್ದ ಲೋಬೋ. ಅವನಿಗೆ ಮೋಸ ಆಗಬಾರದು. ನರಹರಿಯ ಮೇಜಿನ ಮೇಲಿದ್ದ ಲೆಕ್ಕದ ಪುಸ್ತದ ನೋಡಿದರು. ನರಹರಿ ಲೋಬೋ ಕೊಟ್ಟ ಹಣವನ್ನು ಇನ್ನೂ ಪುಸ್ತಕದಲ್ಲಿ ಬರೆದಿರಲಿಲ್ಲ. ಮಾಸ್ಟರಿಗೆ ಹೋದ ಜೀವ ಬಂದಂತಾಯ್ತು. ಕಪಾಟಿನ ಬೀಗ ತೆಗೆದು ನೋಡಿದರೆ ನೆನ್ನೆ ಲೋಬೋ ಕೊಟ್ಟ ಕಟ್ಟು ಹಾಗೆ ಇತ್ತು. ಒಮ್ಮೆಲೇ ಅದನ್ನು ಹೊರಗೆ ತೆಗೆದುಕೊಂಡು ಬಂದು ಲೋಬೋಗೆ ಕೊಟ್ಟಾಗ ಅವರಿಗೆ ಏನೋ ಸಮಾಧಾನ "ಕಷ್ಟ ಪಟ್ಟ ಹಣ ಎಲ್ಲಿಗೂ ಹೋಗೋದಿಲ್ಲ ಲೋಬೋ" ಅಂತ ಹೇಳಿ ಪುನಃ ಬ್ಯಾಂಕಿನ ಒಳಗೆ ಹೋದರು.


ಒಳಗಡೆ ಎಷ್ಟು ಹುಡುಕಿದರು ಅವರಿಗೆ ಆ ಪುಸ್ತಕ ಸಿಗಲಿಲ್ಲ. ಒಂದು ವೇಳೆ ನರಹರಿ ಅದನ್ನು ಪೋಲೀಸರಿಗೆ ಏನಾದರೂ ಕೊಟ್ಟಿರಬಹುದೇ ಅಂತ ಅವರಿಗೆ ಒಮ್ಮೆ ಅನುಮಾನವಾಯ್ತು. ಅದು ಪೋಲೀಸರಿಗೆ ಸಿಕ್ಕಿದರೆ ತಾವು ಅದನ್ನು ಸರಿ ಮಾಡುವುದಾಗಿ ರಾಯರು ಹೇಳಿದರು. ಈಗ ಮುಂದೆ ಏನು ಮಾಡುವುದೆಂದು ಅವರಿಗೆ ದೊಡ್ಡ ಚಿಂತೆ ಆಗಿತ್ತು. ಪೈಗಳೇ ಒಂದು ಉಪಾಯ ಹೇಳಿದರು. ನರಹರಿಯೇ ಬ್ಯಾಂಕಿನ ದುಡ್ಡನ್ನು ತಿಂದಿದ್ದಾನೆಂದು ಹೇಳುವುದು, ಹಿಂದಿನ ದಿನ ನಾವು ಲೆಕ್ಕಪತ್ರ ನೊಡಿ ಅವನಿಗೆ ಬಯ್ದಿದ್ದಕ್ಕೆ ಅವನು ನೇಣು ಹಾಕಿಕೊಂಡ ಅಂತ ಹೇಳುವುದೆಂದು ತೀರ್ಮಾನ ಮಾಡಿದರು. ಜನರ ದುಡ್ಡನ್ನು ಹೇಗೆ ತಿರುಗಿ ಕೊಡುವುದೆಂದು ಮಾಸ್ಟರು ಕೇಳಿದಾಗ ಅದನ್ನು ಆಮೇಲೆ ಯೋಚನೆ ಮಾಡುವ ಎಂದು ಉಳಿದವರಿಬ್ಬರೂ ಸಮಾಧಾನ ಮಾಡಿದರು.


ಮುಂದೆ ಪೋಲೀಸರಿಗೆ ಅದೇ ರೀತಿ ದೂರು ನೀಡಿದ್ದೂ ಆಯಿತು. ಪೋಲೀಸರು ಕೋರ್ಟಿನಲ್ಲಿ ಕೇಸೂ ಹಾಕಿದರು. ಮಾಸ್ಟರಿಗೆ ಇದರಿಂದೆಲ್ಲ ಬಹಳ ಬೇಸರವಾಗಿ ತಮ್ಮ ಹೆಸರಲಿದ್ದ ಸ್ವಲ್ಪ ಜಾಗವನ್ನು ಮಾರಿ, ಬಂದ ದುಡ್ಡನ್ನು ರಾಯರ ಕೈಗೆ ಕೊಟ್ಟು ಬ್ಯಾಂಕಿನಲ್ಲಿ ದುಡ್ಡು ಇಟ್ಟ ಜನರಿಗೆ ಕೊಡಬೇಕೆಂದು ಹೇಳಿದರು. ಕೋರ್ಟಿನಲ್ಲಿ ಕೇಸು ಬಹಳ ಕಾಲ ನಡೆಯಿತು. ಸತ್ತ ನರಹರಿ ದುಡ್ಡು ತಿಂದಿದ್ದರಿಂದ ತಾವು ಜನಕ್ಕೆ ಹಣ ಕೊಡುವುದು ಸಾಧ್ಯವೇ ಇಲ್ಲವೆಂದು ರಾಯರೂ, ಪೈಗಳೂ ಕೋರ್ಟಿನಲ್ಲಿ ಹೇಳಿದರು. ಕೊನೆಗೆ ಇಟ್ಟ ರುಪಾಯಿಗೆ ಎಂಬತ್ತು ಪೈಸೆಯಂತೆ ಬ್ಯಾಂಕಿನವರು ಜನರಿಗೆ ದುಡ್ಡು ವಾಪಸು ಕೊಡಬೇಕೆಂದು ತೀರ್ಮಾನವಾಯಿತು. ಅದೆಲ್ಲಾ ಸಾಧ್ಯವಿಲ್ಲ, ಬೇಕಾದರೆ ಬ್ಯಾಂಕಿನ ಸ್ಥಿರಾಸ್ತಿ ಎಲ್ಲಾ ಹರಾಜು ಹಾಕಿ ಬಂದ ಹಣವನ್ನು ಜನರಿಗೆ ಕೊಡುವುದಾಗಿ ಪೈಗಳು ಕೇಳಿಕೊಂಡರು. ಬೇರೆ ಉಪಾಯವಿಲ್ಲದ್ದರಿಂದ, ಬಂದಷ್ಟು ಬರಲಿ ಅಂತ ಜನರು ನರಹರಿಯನ್ನು ಶಪಿಸುತ್ತಾ ಅದಕ್ಕೇ ಒಪ್ಪಿಕೊಂಡರು.

 ಟಿಪ್ಪಣಿಗಳು
ನನ್ನ ಪರಿಚಯ
ಹೆಸರು: ಕೃಷ್ಣರಾಜ್ ಪಿ ಯಂ
ಹುಟ್ಡೂರು: ವಿರಾಜಪೇಟೆ, ಕೊಡಗು
 
ಇತ್ತೀಚಿನ ಬರಹಗಳು
 ಹಿಂದಿನ ಬರಹಗಳು
ನನ್ನ ಇಂಗ್ಲಿಷ್ ಬ್ಲಾಗು